ಮಡಿಕೇರಿ ನ.13 : ಕನ್ನಡ ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡಬೇಕು ಎಂಬುವುದೇ ಕರ್ನಾಟಕ ರಾಜ್ಯದ ಕನ್ನಡಿಗರ ಒತ್ತಾಸೆಯಾಗಿದೆಯೇ ಹೊರತು ಇತರ ಭಾಷಿಕರನ್ನು ವಿರೋಧಿಸುವ ಮನೋಸ್ಥಿತಿ ಯಾರಿಗೂ ಇಲ್ಲ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ಸೋಮವಾರಪೇಟೆ ಸಂತ ಜೋಸೆಫರ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗದಲ್ಲಿ ಅನ್ಯ ಭಾಷಿಕರ ವಲಸೆ ಹೆಚ್ಚಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ಮಲೆಯಾಳಂ, ತಮಿಳು ಮಾತ್ರವಲ್ಲ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ನೇಪಾಳ ಮತ್ತಿತರ ರಾಜ್ಯಗಳ ಜನತೆ ಬಂದು ನೆಲೆಸುತ್ತಿದ್ದಾರೆ. ಅವರುಗಳ ಭಾಷೆಯನ್ನು ನಮ್ಮ ಮೇಲೆ ಹೇರಬಾರದು, ಕನ್ನಡ ಭಾಷೆಯನ್ನು ಕಲಿಯುವ ಅಭಿಮಾನವನ್ನು ಮೂಡಿಸಿಕೊಳ್ಳಬೇಕು ಎಂದರು.
ಕರ್ನಾಟಕದ ಹೆಸರೇ ಒಂದು ಚೈತನ್ಯದ ಚಿಲುಮೆಯಾಗಿದೆ, ಕರ್ನಾಟಕಕ್ಕೆ ತನ್ನದೇ ಆದ ಹಿರಿಮೆ, ಸಮನ್ವಯತೆ, ಸಹಿಷ್ಣುತೆ, ಸಾಮರಸ್ಯ ಇದೆ. ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲ ಡಿಸೋಜಾ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಅಗತ್ಯವೆಂದರು.
ಮೈಸೂರಿನ ಟಿ.ನರಸಿಪುರದ ಬಾಲ ಏಸು ದೇವಾಲಯದ ಧರ್ಮಗುರು ರೆ.ಫಾ.ಅಂತೋಣಿ ರಾಜ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇಷ್ಟೊಂದು ಅದ್ದೂರಿಯಾಗಿ ಕಳೆದ ಏಳು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ.ವಿಜೇತ ಅವರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ಹೇಳಿದವರಿಗೆ ಆಕರ್ಷಕ ಬಹುಮಾನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿದರು.
ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಎಂ.ರಾಯಪ್ಪ ಅವರು ಅಧ್ಯಕ್ಷತೆ ವಹಿಸಿ ಕನ್ನಡಾಭಿಮಾನದ ಮಾತುಗಳನ್ನಾಡಿದರು.
ಸೋಮವಾರಪೇಟೆ ಜೆಸಿಐ ಅಧ್ಯಕ್ಷೆ ರುಬೀನ, ಸೋಮವಾರಪೇಟೆ ಒಎಲ್ವಿ ಕಾನ್ವೆಂಟ್ ನ ಸಿಸ್ಟರ್ಗಳಾದ ಸಿಂಥಿಯ, ವಿನಿತ ಹಾಗೂ ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಗೌರವ ಕಾರ್ಯದರ್ಶಿ ಎಂ.ಶ್ರೀಧರ್ ಹೂವಲ್ಲಿ ಉಪಸ್ಥಿತರಿದ್ದರು.
ಸಂತ ಜೋಸೆಫರ ಶಾಲೆಯ ಪ್ರಾಥಮಿಕ, ಪ್ರೌಢ ಶಾಲಾ, ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳಾದ ಶ್ರೀನಿಧಿ ಹಾಗೂ ತನ್ಮಯಿ ನಿರೂಪಿಸಿದರು. ವಿದ್ಯಾರ್ಥಿನಿ ನಿರ್ಮಿತ ಸ್ವಾಗತಿಸಿ, ಶ್ರೇಯಸ್ವಿತ ವಂದಿಸಿದರು.









