ಸೋಮವಾರಪೇಟೆ ನ.30 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಶೇಷ ಚೇತನರ ಸಬಲೀಕರಣಕ್ಕೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಆಯುಷ್ ಇಲಾಖೆಯ ಆಶ್ರಯದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಶೇಷ ಚೇತನರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್ ಮಾತನಾಡಿ, ವಿಶೇಷ ಚೇತನರು ತಮ್ಮ ನ್ಯೂನತೆಗಳನ್ನು ಬದಿಗೊತ್ತಿ ಸಮಾಜದೊಂದಿಗೆ ಬೆರೆಯಬೇಕು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಡಿ.3ರಂದು ವಿಶ್ವ ವಿಶೇಷ ಚೇತನರ ದಿನಾಚರಣೆ ಆಚರಿಸಲಾಗುತ್ತಿದೆ. ವಿಶೇಷ ಚೇತನರಿಗೂ ಅವಕಾಶ ಲಭಿಸಬೇಕು. ಹಾಗಾದಾಗ ಮಾತ್ರ ಚೈತನ್ಯದೊಂದಿಗೆ ಸಾಧನೆ ಸಾಧ್ಯ. ಈ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ತಾಲ್ಲೂಕು ಮಟ್ಟದ ಸ್ಪರ್ಧಾ ವಿಜೇತರಿಗೆ ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಹೇಮಂತ್ ಮಾತನಾಡಿ, ವಿಶೇಷಚೇತನರ ಮನೋಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ವಿಶೇಷ ಚೇತನರ ದಿನಾಚರಣೆ ಘೋಷಿಸಿದೆ. ತಮ್ಮಲ್ಲಿರುವ ಕೌಶಲ್ಯಗಳನ್ನು ಹೊರಹಾಕಲು ಈ ವೇದಿಕೆ ಸಹಕಾರಿಯಾಗಿದೆ. ಶಿಕ್ಷಣ ಇಲಾಖೆಯು ವಿಶೇಷಚೇತನರ ಅಭ್ಯುದಯಕ್ಕೆ ಸದಾ ಬದ್ಧವಾಗಿದೆ ಎಂದರು.
ಆಯುಷ್ ಇಲಾಖೆಯ ವೈದ್ಯೆ ಡಾ.ಶ್ವೇತಾ ಆಯುಷ್ ಇಲಾಖೆಯ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಚೌಡ್ಲು ಗ್ರಾ.ಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಕುಮಾರಿ, ವಿವೇಕಾನಂದ ಯೂತ್ ಮೂವ್ ಮೆಂಟ್ನ ಪದಾಧಿಕಾರಿ ಎಂ.ಎಂ. ಪ್ರಕಾಶ್ ಕುಮಾರ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ಸಂದ್ಯಾರಾಣಿ, ಪಾಂಚಜನ್ಯ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಪರಮೇಶಪ್ಪ, ತಾಲ್ಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಸಂಗಮೇಶ್ ಇದ್ದರು.










