ಮಡಿಕೇರಿ ಡಿ.29 : ಕೊಡವರ ಹಕ್ಕುಗಳಿಗಾಗಿ ಸಾಮೂಹಿಕ ಹೋರಾಟದ ಅಗತ್ಯವಿದೆ, ರಾಜಕೀಯ ಪ್ರಾತಿನಿಧ್ಯ ಇಲ್ಲವಾದಲ್ಲಿ ಹಕ್ಕುಗಳನ್ನು ಕೇಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೊಡವರು ರಾಜಕೀಯ ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಕರೆ ನೀಡಿದ್ದಾರೆ.
ಕನೆಕ್ಟಿಂಗ್ ಕೊಡವಾಸ್ ಸಂಘಟನೆ ವತಿಯಿಂದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ “ವಿಶ್ವ ಕೊಡವ ಸಮ್ಮೇಳನ” ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡವ ಸಮುದಾಯ ಜನಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಜಮ್ಮಾ ಬಾಣೆಗೆ ಕಂದಾಯ ನಿಗಧಿ, ಪಟ್ಟೆದಾರರಿಂದ ಹಕ್ಕು ಬದಲಾವಣೆ, ಪೌತಿ ಖಾತೆ, ಕೋವಿ ಹಕ್ಕು ಸೇರಿದಂತೆ ಹಲವಾರು ಸಮಸ್ಯೆಗಳು ಕೊಡವ ಸಮುದಾಯವನ್ನು ಕಾಡುತ್ತಿದೆ. ಇವುಗಳಿಗೆ ಪರಿಹಾರವನ್ನೂ ಕಾಣುವಂತಾಗಬೇಕು, ಈ ಕಾರ್ಯಕ್ರಮ ಕೊಡವರ ಹಕ್ಕುಗಳ ಪ್ರತಿಪಾದನೆಗೆ ವೇದಿಕೆಯಾಗಬೇಕು ಎಂದು ಆಶಿಸಿದರು.
ಕೊಡವರ ಕುಲಶಾಸ್ತ್ರ ಅಧ್ಯಯನದ ಕಡತ ಸರಕಾರದ ಬಳಿ ಇದ್ದು, ಅದು ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪೊನ್ನಣ್ಣ ಕೊಡವರಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡಲು ಶಕ್ತಿ ಮೀರಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಶಾಂತರಾಮ ಬುದ್ದ ಸಿದ್ದಿ ಮಾತನಾಡಿ ಜಗತ್ತಿನಲ್ಲಿರುವ ಕೊಡವ ಸಮುದಾಯದವರನ್ನು ಒಂದುಗೂಡಿಸಲು ಆಯೋಜಿಸಿರುವ ಇಂತಹ ಕಾರ್ಯಕ್ರಮವನ್ನು ಈ ಮೊದಲು ಎಲ್ಲೂ ನೋಡಿಲ್ಲ. ಇದೊಂದು ದೊಡ್ಡ ಸಾಧನೆ ಎಂದು ಬಣ್ಣಿಸಿದರು.
ಕೊಡವ ಸಮುದಾಯದ ಹಿರಿಯರು ಸಂಸ್ಕೃತಿಯ ಆಚರಣೆ ಮೂಲಕ ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡಬೇಕು. ಕೊಡವರು ಎಸ್ಟಿ ಸಮುದಾಯಕ್ಕೆ ಸೇರ್ಪಡೆಯಾಗಬೇಕಾದರೆ ಅದಕ್ಕೆ ಕುಲಶಾಸ್ತ್ರ ಅಧ್ಯಯನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೂ ಮನವಿ ಮಾಡಬೇಕೆಂದು ಸಲಹೆ ನೀಡಿದರು.
ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಸಚಿವಾಲಯದ ಮುಖ್ಯ ಸಲಹೆಗಾರ ಡಾ.ಚೇತನ್ ಸಿಂಘೈ ಮಾತನಾಡಿ ಜಾಗತಿಕವಾಗಿ ಗುರುತಿಸಿಕೊಳ್ಳುವ ಮುನ್ನ ಸ್ಥಳೀಯ ಸಂಪ್ರದಾಯವನ್ನು ಮರೆಯಬಾರದು ಎಂದರು.
ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆಗಳು ಮನೆಯಿಂದಲೇ ಕಲಿಯುವಂತಾಗಬೇಕು. ಯಾವುದೇ ಜನಾಂಗಕ್ಕೆ ಶಿಕ್ಷಣವೇ ಮೂಲವಾಗಬೇಕು, ಯುವ ಸಮುದಾಯ ದೇಶದ ಸಂಪತ್ತಾಗಿ ಬದಲಾಗಬೇಕು ಎಂದು ಶಿಕ್ಷಣದ ಮಹತ್ವದ ಕುರಿತು ವಿವರಿಸಿದರು.
ದೇಶ ತಕ್ಕ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ ವಿದೇಶದಲ್ಲಿ ನೆಲೆ ನಿಂತಿರುವ ಕೊಡವ ಸಮುದಾಯದವರು ತಮ್ಮ ಮೂಲ ನೆಲೆಯಾದ ಕೊಡಗಿನಲ್ಲಿ ಕನಿಷ್ಟ 1 ಎಕರೆ ಭೂಮಿ ಹೊಂದಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೊಡವರು ತಮ್ಮ ಭೂಮಿಗಳನ್ನು ಬೇರೆಯವರಿಗೆ ಮಾರಾಟ ಮಾಡದಂತೆ ತಡೆಯುವ ಕೆಲಸ ನಡೆಯಬೇಕು. ಕೊಡವರ ಹಕ್ಕುಗಳಿಗೆ ವಿವಿಧ ಸಂಘಟನೆಗಳು ನಡೆಸುವ ಹೋರಾಟಗಳನ್ನು ಟೀಕಿಸುವ ಬದಲಿಗೆ ಅವುಗಳಿಗೆ ಬೆಂಬಲ ನೀಡುವಂತಹ ಕೆಲಸ ಮಾಡಬೇಕು. ಕೊಡವರ ಅಂತರ್ ಜಾತಿ ವಿವಾಹ ಮತ್ತು ವಿಚ್ಚೇದನೆಗಳಂತಹ ಪ್ರಕರಣಗಳು ಕಂಡು ಬಂದಲ್ಲಿ ಹಿರಿಯರೇ ಮಧ್ಯಸ್ಥಿಕೆ ವಹಿಸಿ ಅವುಗಳನ್ನು ಪರಿಹರಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ನಿರ್ದೇಶಕ ಪಾಲೇಂಗಡ ಅಮಿತ್ ಭೀಮಯ್ಯ ಮಾತನಾಡಿ, 2017ರಲ್ಲಿ ಸ್ಥಾಪನೆಯಾದ ಸಂಘಟನೆ ಸಂಪೂರ್ಣ ಕೊಡವ ಜನಾಂಗದ ಅಧ್ಯಯನ ಸರ್ವೆಯನ್ನು 3 ಹಂತಗಳಲ್ಲಿ ಮಾಡಿದೆ. ಪ್ರತಿಯೊಬ್ಬ ಕೊಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಸಂಸ್ಕೃತಿಯ ಮೂಲಗಳನ್ನು ತಿಳಿಸುವುದೇ ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಗುರಿಯಾಗಿದೆ. ಇದಕ್ಕಾಗಿಯೇ ‘ವಿಶ್ವ ಕೊಡವ ಸಮ್ಮಿಲನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಕೊಡವ ಜನಾಂಗದ ಸರ್ವೆ ಕಾರ್ಯ 2023ರ ಅಕ್ಟೋಬರ್ನಲ್ಲಿ ಮುಕ್ತಾಯವಾಗಿದೆ. ಸರ್ವೆ ವೇಳೆ ಪಟ್ಟೆದಾರರು, ಐನ್ಮನೆಗಳು, ಕೈಮಡಗಳು, ಕೃಷಿ ಭೂಮಿ, ಕಾಫಿ ತೋಟ, ಹಬ್ಬ ಹರಿದಿನಗಳು, ದೇವರುಗಳು, ಕುಟುಂಬದ ವ್ಯಕ್ತಿಗಳು ಮಾಡಿರುವ ಸಾಧನೆಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ವಿವರಿಸಿದರು.
::: ಸನ್ಮಾನ :::
ಇದೇ ವೇಳೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಾರತ ಸರಕಾರದ ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಸಚಿವಾಲಯದ ಮುಖ್ಯ ಸಲಹೆಗಾರ ರಶ್ಮಿ ಸಮಂತ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಆತ್ಮ ನಿರ್ಭರ ಅಧ್ಯಕ್ಷೆ ಕುಪ್ಪಂಡ ಛಾಯಾ ನಂಜಪ್ಪ, ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಅಧ್ಯಕ್ಷ ಶಾಂತೆಯಂಡ ನಿರನ್ ನಾಚಪ್ಪ, ಉಪಾಧ್ಯಕ್ಷ ಪಟ್ರಪಂಡ ಪಂಥ್ ಮೊಣ್ಣಪ್ಪ ಉಪಸ್ಥಿತರಿದ್ದರು.
::: ಬೃಹತ್ ಮೆರವಣಿಗೆ :::
ಕಾರ್ಯಕ್ರಮಕ್ಕೂ ಮುನ್ನ ನಗರದ ನೂತನ ಖಾಸಗಿ ಬಸ್ ನಿಲ್ದಾಣದಿಂದ ಸಾವಿರಾರು ಸಂಖ್ಯೆಯ ಕೊಡವ ಕೊಡವತಿಯರು ತಮ್ಮ ಕುಟುಂಬದ ಹೆಸರಿರುವ ಧ್ವಜ ಹಿಡಿದು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜುವರೆಗೆ ಬೃಹತ್ ಮೆರವಣಿಗೆ ಸಾಗಿದರು. ದುಡಿಕೊಟ್ಟ್ ಪಾಟ್ ಸಹಿತ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ವಿವಿಧ ಕೊಡವ ಸಮಾಜಗಳು, ಕೊಡವ ಸಂಘಟನೆಗಳ ಪದಾಧಿಕಾರಿಗಳು ಹೆಜ್ಜೆ ಹಾಕಿದರು. ವೇದಿಕೆ ಬಳಿ ದೇಶ ತಕ್ಕರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮತ್ತು ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಪ್ರಮುಖರು ಗುರು ಕಾರೋಣರಿಗೆ ಅಕ್ಕಿ ಹಾಕಿ ನಮಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇಶ ವಿದೇಶದಲ್ಲಿ ನೆಲೆಸಿರುವ ಹೆಚ್ಚಿನ ಸಂಖ್ಯೆಯ ಕೊಡವರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
::: ವಸ್ತು ಪ್ರದರ್ಶನ :::
ವಿಶ್ವ ಕೊಡವ ಸಮ್ಮೇಳನ ಆಯೋಜಿತ ಮೈದಾನದ ಮುಂಭಾಗದಲ್ಲಿಯೇ ಮಾದರಿ ಕೊಡವ ‘ಐನ್ಮನೆ’ ನಿರ್ಮಿಸಲಾಗಿದೆ. ಐನ್ಮನೆಯಲ್ಲಿ ಹಳೆಯ ಸಾಂಪ್ರದಾಯಿಕ ವಸ್ತುಗಳನ್ನು ಇರಿಸಲಾಗಿದೆ. ಹಿಂದಿನ ಕಾಲದ ಕೃಷಿ ಉಪಕರಣಗಳು, ಗೃಹೋಪಯೋಗಿ ವಸ್ತುಗಳು, ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೆಂಡದ ಇಸ್ತ್ರಿ ಪೆಟ್ಟಿಗೆ, ನೇಗಿಲು, ನೊಗ, ಮರದ ಹಿಟ್ಟು ತಯಾರಿಕಾ ಯಂತ್ರ, ಜೇನು ತೆಗೆಯುವ ಯಂತ್ರ, ತಾಮ್ರದ ಬಿಂದಿಗೆಗಳು, ದುಡಿ, ಮೀನು ಹಿಡಿಯುವ ಮತ್ತು ಸಂಗ್ರಹಿಸುವ ಕೂಳಿಗಳು ನೋಡುಗರನ್ನು ಆಕರ್ಷಿಸಿದವು.
::: ಗುಂಡು ಹೊಡೆಯುವ ಸ್ಪರ್ಧೆ :::
ವೇದಿಕೆಯ ಹಿಂಭಾಗ ಕೊಡವ ಪುರುಷ ಮತ್ತು ಮಹಿಳೆಯರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿವಿಧ ವಯೋಮಾನದ ಪುರುಷರು ಹಾಗೂ ಮಹಿಳೆಯರು 12 ಬೋರ್ ಮತ್ತು ಪಾಯಿಂಟ್ 2 ಬಂದೂಕಿನಿಂದ ಗುಂಡು ಹೊಡೆಯುವ ಮೂಲಕ ತಮ್ಮ ನಿಖರ ಗುರಿಯ ಸಾಮಥ್ರ್ಯ ಪ್ರದರ್ಶಿಸಿ ಗಮನ ಸೆಳೆದರು.









