ನಾಪೋಕ್ಲು ಜ.1 : ಪರಿಸರ, ಅನುಭ, ನಮ್ಮ ಸಹವಾಸಗಳಿಂದ, ಕಲಿತವಿದ್ಯೆ ಮಾತ್ರ ನಮಗೆ ಜೀವನ ಪರ್ಯಂತ ಉಪಯೋಗಕ್ಕೆ ಬರುತ್ತದೆ ಎಂದು ಲೇಖಕ, ಸಾಹಿತಿ ನಾಗೇಶ್ ಕಾಲೂರು ಹೇಳಿದರು.
ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್ ನ್ಯಾಷನಲ್ ಪಿಯು ಕಾಲೇಜ್ ವತಿಯಿಂದ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯಲ್ಲಿರುವ ಗಾಳಿ ,ನೀರು, ಬೆಳಕು ವಾತಾವರಣ ಎಲ್ಲವೂ ಜೀವಿಗಳ ಬದುಕಿಗೆ ಅತ್ಯವಶ್ಯಕ. ಪ್ರಕೃತಿಯ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದು ಶಿಕ್ಷಣದ ಒಂದು ಭಾಗವಾಗಿರಬೇಕು. ಇನ್ನೊಬ್ಬರನ್ನು ನಾವು ನೋಯಿಸದೆ ಇರುವಂತಹ ಗುಣಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದ ಅವರು ಕಲಿಕೆ ಎನ್ನುವುದು ನಿರಂತರ. ಪೋಷಕರಿಗೆ ಅಧ್ಯಾಪಕರಿಗೆ ಗೌರವ ಕೊಡುವಂತಹ ತಿಳುವಳಿಕೆಯನ್ನು ಮಕ್ಕಳಿಗೆ ಕೊಡಬೇಕು, ಭಾಷೆ, ಜಾತಿ, ಜನಾಂಗವನ್ನು ಮೀರಿ ತಾಯಂದಿರಲು ಗೌರವಿಸುವಂತಹ ಕೆಲಸ ಮಕ್ಕಳಿಂದ ಆಗಬೇಬೇಕಾಗಿದೆ, ನಮ್ಮ ಶರೀರ ಇರುವುದೇ ಇನ್ನೊಬ್ಬರಿಗೆ ಉಪಕಾರ ಮಾಡಲು ಎಂಬ ಅಂಶವನ್ನು ಮನವರಿಕೆ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು.
ಮಂಗಳೂರಿನ ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಮಾತನಾಡಿ, ಈ ದೇಶಕ್ಕೆ ಶಕ್ತಿ ಆಗಬೇಕಾದ ಮಕ್ಕಳು ದಾರಿತಪ್ಪುತ್ತಿದ್ದಾರೆ. ಮೊಬೈಲ್ ಸಂಸ್ಕೃತಿಗೆ ಮಾರುಹೋಗಿ ಓದುವುದರಿಂದ ವಿಮುಖರಾಗುತ್ತಿದ್ದಾರೆ ಎಂದ ಅವರು ಮನೆಯಲ್ಲಿ, ಶಾಲೆಯಲ್ಲಿ, ಸಮಾಜದ ಸಂಘ-ಸಂಸ್ಥೆಗಳು ಮಕ್ಕಳು ಸಮಾಜಕ್ಕೆ ದಾರಿ ದೀಪ ವಾಗುವಂತೆ ಮಾರ್ಗದರ್ಶಕರಾಗ ಬೇಕೆಂದರು.
ಮಕ್ಕಳು ಮನೆಗೆ ಬೆಳಕಾಗಬೇಕು. ಪುಸ್ತಕದ ಬಗ್ಗೆ ನಿಷ್ಠೆ ಇರಿಸಿ ಜ್ಞಾನ ಸಂಪಾದಿಸುವತ್ತ ಮಕ್ಕಳನ್ನುಪೋಷಕರು, ಶಿಕ್ಷಕರು, ಗುರುಹಿರಿಯರು ಪ್ರೇರೇಪಿಸಬೇಕು ಎಂದು ಕೆಲವು ಪ್ರತ್ಯಕ್ಷತೆಯೊಂದಿಗೆ ಉಪನ್ಯಾಸ ನೀಡಿದರು.
ಈ ಸಂದರ್ಭ ಪಂಚಾಯತ್ ಪರಿಷತ್ ಅತ್ಯುತ್ತಮ ಪಿಡಿಒ ಪ್ರಶಸ್ತಿ ವಿಜೇತ ಹೊದ್ದೂರು ಪಿಡಿಒ ಎ.ಎ.ಅಬ್ದುಲ್ಲ ಅವರನ್ನು ಸಂಸ್ಥೆಯ ಪರವಾಗಿ ಗಣ್ಯರು ಗೌರವಿಸಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ಜ್ಞಾನ ಹೊರಹೊಮ್ಮಲು ಅವಕಾಶ ಕಲ್ಪಿಸಬೇಕು. ಪ್ರತಿಭೆ ಇರುವವರು ಯಾವುದೇ ಮೀಸಲಾತಿ ಇಲ್ಲದೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಲ್ಲರು. ಪ್ರತಿಭೆಗಳ ವಿಕಸನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಜನೆ ಹಾಗೂ ಕ್ರೀಡಾಕೂಟದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರೌಢಶಾಲಾ ಸಹ ಶಿಕ್ಷಕರಸಂಘದ ಉಪಾಧ್ಯಕ್ಷ ಮೆಹಬೂಬ್ ಸಾಬ್ ವಹಿಸಿದ್ದ ವೇದಿಕೆಯಲ್ಲಿ ನಾಪೋಕ್ಲು ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎಚ್ ಅಬ್ದುಲ್ ರೆಹಮಾನ್, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಹುಸೇನಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶಿಕ್ಷಕಿ ಸೌಜನ್ಯ ಸ್ವಾಗತಿಸಿ ಸಂಸ್ಥೆಯ ಪ್ರಾಂಶುಪಾಲರಾದ ತನ್ವೀರ್ ಶಾಲಾ ವರದಿವಾಚಿಸಿದರು. ಶಿಕ್ಷಕಿ ರೇಖಾ ಅವರು ಅತಿಥಿ ನಾಗೇಶ್ ಅವರನ್ನು ಹಾಗೂ ಶಿಕ್ಷಕಿ ಸಮೀರ ಸನ್ಮಾನಿಸಲ್ಪಟ್ಟ ಹೊದ್ದೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅವರ ಪರಿಚಯ ಮಾಡಿದರು.
ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ವೇಷ ಭೂಷಣಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ವರದಿ : ದುಗ್ಗಳ ಸದಾನಂದ









