ಮಡಿಕೇರಿ ಫೆ.27 NEWS DESK : ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ತಾವು ಕೂಡ ಆಕಾಂಕ್ಷಿಯಾಗಿರುವುದಾಗಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸ್ಪರ್ಧೆಗೆ ಅವಕಾಶ ನೀಡುವಂತೆ ಈಗಾಗಲೇ ಬಿಜೆಪಿ ವರಿಷ್ಠರ ಗಮನ ಸೆಳೆದಿದ್ದೇನೆ, ಆದರೆ ಪಕ್ಷದ ತೀರ್ಮಾನವೇ ಅಂತಿಮವಾಗಿದೆ. ಪಕ್ಷ ಯಾವುದೇ ಅಭ್ಯರ್ಥಿಗೆ ಸ್ಪರ್ಧೆಗೆ ಅವಕಾಶ ನೀಡಿದರೂ ಅಂತಹ ಅಭ್ಯರ್ಥಿಯ ಪರವಾಗಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು.
ಜೆಡಿಎಸ್ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ಚರ್ಚೆಗಳು ಮಾತ್ರವೇ ನಡೆಯುತ್ತಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಅವರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಎರಡು ಮೂರು ಮಂದಿ ಆಕಾಂಕ್ಷಿಗಳು ಇರುತ್ತಾರೆ. ಅದರಂತೆ ತಾವು ಕೂಡ ಅವಕಾಶ ಬಯಸಿದ್ದೇನೆ. ಅಭ್ಯರ್ಥಿಗಳ ಅಂತಿಮ ತೀರ್ಮಾನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಮಿತಿ ಮಾಡಲಿದೆ ಎಂದು ಹೇಳಿದರು.
ಕಳೆದ 33 ವರ್ಷಗಳಿಂದ ತಾವು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ. ಮಾತ್ರವಲ್ಲದೇ 1996ರಿಂದ 99ರವರೆಗೆ ಕೊಡಗು ಜಿಲ್ಲಾ ಎಸ್.ಪಿ ಆಗಿ ಸೇವೆ ಸಲ್ಲಿಸಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಿದ್ದೇನೆ. ಮೈತ್ರಿ ಪೊಲೀಸ್ ಸಮುದಾಯ ಭವನ, ಆರ್.ಟಿ.ಓ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಆರ್.ಟಿ.ಓ ಕಚೇರಿಯನ್ನು ಸ್ಥಳಾಂತರಿಸಿರುವುದು, ಹೊರ ಭಾಗದಲ್ಲಿ ಪೊಲೀಸ್ ಚೌಕಿಗಳ ಸ್ಥಾಪನೆ ಸಹಿತ ಜನಪರ ಸೇವೆ ಸಲ್ಲಿಸಿದ್ದೇನೆ ಎಂದು ವಿವರಿಸಿದರು. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳೊಂದಿಗೆ ಇಂದಿಗೂ ಉತ್ತಮ ಬಾಂಧವ್ಯವೂ ಇದೆ ಎಂದು ಭಾಸ್ಕರ್ ರಾವ್ ಹೇಳಿದರು.









