ಸೋಮವಾರಪೇಟೆ ಮಾ.22 NEWS DESK : ಕಾಡುಪ್ರಾಣಿಗಳಿಂದ ರೈತರ ರಕ್ಷಣೆ ಹಾಗೂ ಫಸಲು ಕಾಪಾಡಿಕೊಳ್ಳವುದಕ್ಕೆ ಇರುವ ಪರವಾನಗಿ ಬಂದೂಕನ್ನು ಚುನಾವಣೆ ಸಂದರ್ಭ ಠೇವಣಿ ಇಡುವುದಕ್ಕೆ ಜಿಲ್ಲಾಧಿಕಾರಿಗಳು ವಿನಾಯಿತಿ ನೀಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ಸೋಮವಾರಪೇಟೆ ತಾಲ್ಲೂಕು ಘಟಕ ಆಗ್ರಹಿಸಿದೆ.
ಚುನಾವಣೆ ಸಂದರ್ಭ 3 ತಿಂಗಳು ಪರವಾನಗಿ ಬಂದೂಕನ್ನು ಠಾಣೆಯಲ್ಲಿ ಇಟ್ಟರೆ ರೈತರು ಸಂಕಷ್ಟಕ್ಕೆ ಸಿಲುಕತ್ತಾರೆ. ಬಂದೂಕು ಒಂದೇ ರೈತರ ಜೀವ ರಕ್ಷಣೆ ಮಾಡುವ ಆಯುಧವಾಗಿದ್ದು ಕೂಡಲೆ ವಿನಾಯಿತಿ ನೀಡಬೇಕು ಎಂದು ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳು ಈಗಾಗಲೇ ರೈತರು ಪೊಲೀಸ್ ಠಾಣೆಯಲ್ಲಿ ಬಂದೂಕು ಠೇವಣಿ ಇಡುವುದಕ್ಕೆ ವಿನಾಯಿತಿ ನೀಡಿದ್ದಾರೆ. ಆ ನಿಯಮ ಕೊಡಗಿನಲ್ಲೂ ಜಾರಿಗೆ ಬರುವಂತಾಗಲಿ ಎಂದು ಹೇಳಿದರು.
ಮೇಲಾಧಿಕಾರಿಗಳು ಹೊರರಾಜ್ಯದಿಂದ ಬಂದಿರುತ್ತಾರೆ. ಅವರಿಗೆ ಕೊಡಗಿನ ರೈತರ ಕಷ್ಟ ಗೊತ್ತಾಗುವುದಿಲ್ಲ. ಪ್ರತಿಯೊಂದಕ್ಕೂ ಕಾನೂನಿನ ಪುಸ್ತಕ ತೋರಿಸುವುದು ಸಮಂಜಸವಲ್ಲ. ಮಾನವೀಯತೆಗೆ ಮೊದಲ ಅಧ್ಯತೆ ನೀಡಬೇಕು ಎಂದು ಹೇಳಿದರು.
ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಅರಣ್ಯದಂಚಿನಲ್ಲಿ ಗ್ರಾಮಗಳಿವೆ. ಕಾಡುಪ್ರಾಣಿಗಳಿಂದ ಕೃಷಿ ಫಸಲನ್ನು ರಕ್ಷಣೆ ಮಾಡಬೇಕಾದರೆ, ಕೃಷಿ ಭೂಮಿಯಲ್ಲಿ ಪಹರೆ ಕಾಯಬೇಕು. ಕಾಡುಪ್ರಾಣಿಗಳಿಂದ ಮಾನವ ಜೀವ ರಕ್ಷಣೆಗೆ ಬಂದೂಕು ಮಾತ್ರ ರೈತನ ಕೈಯಲ್ಲೇ ಇರಬೇಕು ಎಂದು ಹೇಳಿದರು. ಬಹುತೇಕ ಗ್ರಾಮಗಳಲ್ಲಿ ಒಂಟಿ ಮನೆ, ಒಂಟಿ ಮಹಿಳೆಯರು ಇರುತ್ತಾರೆ. ದರೋಡೆಕೋರರ ಭಯವೂ ಇದೆ. ಕೃಷಿ ಫಸಲು ಕಳ್ಳತನ ಮಾಡುವವರ ತಂಡ ಕಾರ್ಯನಿರ್ವಹಿಸುತ್ತಿದೆ. ಅವರು ಮನೆಯಲ್ಲಿರುವ ಬಂದೂಕಿಗೆ ಮಾತ್ರ ಭಯ ಪಡುತ್ತಿದ್ದಾರೆ. ರೈತರ ಬಂದೂಕನ್ನು ಠಾಣೆಯಲ್ಲಿ ಸೌದೆಯಂತೆ ಹಾಕುವುದು ಅನ್ಯಾಯ ಎಂದು ಪ್ರತಿಪಾದಿಸಿದರು. ಜಮ್ಮಾ ಹಿಡುವಳಿದಾರರು ಹಾಗು ಬೈರೇಸ್ನವರಿಗೆ ಠೇವಣಿ ಇಡುವುದಕ್ಕೆ ವಿನಾಯಿತಿ ಇದೆ. ಆದರೆ ಬೆಳೆ ರಕ್ಷಣೆ ಆಧಾರದಲ್ಲಿ ಪರವಾನಗಿ ಪಡೆದಿರುವ ಬಂದೂಕನ್ನು ತಿಂಗಳುಗಟ್ಟಲೆ ಠೇವಣಿ ಇರಿಸಿಕೊಳ್ಳುವುದು ತಪ್ಪು. ಒಂದು ಜಿಲ್ಲೆ ಒಂದೇ ಕಾನೂನು ಇರಬೇಕು. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಂಡು ರೈತರ ಬಂದೂಕು ಠೇವಣಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ವರ್ಷಕ್ಕೆ ಮೂರು ಚುನಾವಣೆಗಳು ಬರುತ್ತವೆ. ನಮ್ಮ ಬಂದೂಕು ವರ್ಷವಿಡಿ ಠಾಣೆಯಲ್ಲೇ ಗೆದ್ದಲು ಹಿಡಿಯಬೇಕೆ? ಎಂದು ಪ್ರಶ್ನಿಸಿದ ಹೂವಯ್ಯ, ಕೂಡಲೇ ಜಿಲ್ಲಾಡಳಿತ ತಾರಾತಮ್ಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಕಂದಾಯ ಇಲಾಖೆಯಲ್ಲಿ ರೈತರ ಕೆಲಸಗಳು ಆಗುತ್ತಿಲ್ಲ. ಫೈಲ್ಗಳು ವಿಲೇವಾರಿಯಾಗುತ್ತಿಲ್ಲ. ರೈತರ ಶೋಷಣೆ ಮಾಡುವುದಕ್ಕೆ ಕಂದಾಯ ಇಲಾಖೆಯ ಕೆಲ ಸಿಬ್ಬಂದಿಗಳು ಇದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ರೈತರ ಒಂದೇ ಒಂದು ಕೆಲಸವನ್ನು ನಿಗದಿತ ಸಮಯದಲ್ಲಿ ಉಚಿತವಾಗಿ ಮಾಡಿಕೊಟ್ಟ ಪ್ರಕರಣಗಳಿಲ್ಲ ಎಂದು ದೂಷಿಸಿದರು. ಚುನಾವಣೆ ಸಂದರ್ಭ ರೈತರ ಕೆಲಸಗಳು ಅಗಬೇಕು ಎಂದು ಒತ್ತಾಯಿಸಿದರು. ಕೊಡಗಿನ ನದಿ ಹೊಳೆಗಳಲ್ಲಿ ಸಾಕಾಷ್ಟು ನೀರಿನ ಸಂಗ್ರಹ ಇದೆ. ಒಂದು ಮಳೆ ಬಿದ್ದರೆ, ನದಿಗಳಲ್ಲಿ ನೀರು ಹರಿದು ಸಮುದ್ರ ಸೇರುತ್ತದೆ. ಕೃಷಿಗೆ ನೀರಿನ ಅವಶ್ಯಕತೆ ಇದ್ದ ಸಮಯದಲ್ಲೇ, ನದಿ, ಹೊಳೆಗಳಲ್ಲಿ ನೀರು ತೆಗೆಯದಂತೆ ಜಿಲ್ಲಾಧಿಕಾರಿಗಳು ಅದೇಶ ಹೊರಡಿಸಿರುವುದು ನ್ಯಾಯಸಮ್ಮತವಲ್ಲ. ಜಿಲ್ಲಾಡಳಿತ ಯಾವಾಗಲು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೈತಸಂಘದ ಪದಾಧಿಕಾರಿಗಳಾದ ಮಚ್ಚಂಡ ಅಶೋಕ್, ಹಿರಿಕರ ರಮೇಶ್, ಲಕ್ಷ್ಮಣ್, ಎ.ಆರ್.ಕುಶಾಲಪ್ಪ ಇದ್ದರು.








