ಮಡಿಕೇರಿ ಮಾ.27 NEWS DESK : ಇತರ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಯಾವತ್ತೂ ಮುಂದಿನ ‘ಚುನಾವಣೆ’ಯ ಬಗ್ಗೆಯಷ್ಟೆ ಯೋಚಿಸುತ್ತಾರೆ. ಆದರೆ, ದೂರದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಮೋದಿ ಅವರು ಚುನಾವಣೆಯ ಬದಲಾಗಿ 2047 ಕ್ಕೆ ರಾಷ್ಟ್ರವನ್ನು ‘ವಿಕಸಿತ ಭಾರತ’ವನ್ನಾಗಿ ರೂಪಿಸುವ ಅಭಿವೃದ್ಧಿಯ ವಿಶಾಲ ಚಿಂತನೆಯನ್ನು ಹೊಂದಿದವರಾಗಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ‘ಬಿಜೆಪಿ ಕಾರ್ಯಕರ್ತರ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತು ನರೇಂದ್ರಮೋದಿ ಅವರು ಮತ್ತೆ ಪ್ರಧಾನಮಂತ್ರಿಯಾಗುವುದು ಸೂರ್ಯ-ಚಂದ್ರರಷ್ಟೆ ಸತ್ಯವೆಂದು ಹೇಳಿದರು.
ರಾಷ್ಟ್ರಕ್ಕೆ ಭವಿಷ್ಯವೇ ಇಲ್ಲವೇನೋ ಎನ್ನುವಂತಹ 2014 ರ ಸಂದರ್ಭ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಕಳೆದ ಒಂದು ದಶಕಗಳ ಅವಧಿಯಲ್ಲಿನ ಪ್ರಧಾನಮಂತ್ರಿ ಮೋದಿ ಅವರ ಆಡಳಿತ ಭಾರತಕ್ಕೆ ಉಜ್ವಲ ಭವಿಷ್ಯದ ಭರವಸೆಗಳನ್ನು ವಿಶ್ವಾಸವನ್ನು ತುಂಬಿರುವುದರ ಜೊತೆಯಲ್ಲೆ, ಭಾರತ ವಿಶ್ವರ 5ನೇ ಸದೃಢ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮೆದೆಯೆಂದು ಸಂತಸ ವ್ಯಕ್ತಪಡಿಸಿದರು.
ಅವರ ಜನಪ್ರಿಯತೆ ದೇಶದಾದ್ಯಂತ ಇಂದಿಗೂ ಒಂದಿಂಚಿನಷ್ಟು ಕಡಿಮೆಯಾಗಿಲ್ಲ. ಅವರು ಮತ್ತೆ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ಮತ್ತೆ ಹೊರ ಹೊಮ್ಮಲಿದ್ದಾರೆಂದು ದೃಢವಾಗಿ ನುಡಿದರು.
ದಾಖಲೆಯ 2 ಲಕ್ಷ ಅಂತರದ ಗೆಲುವಿನ ವಿಶ್ವಾಸ- ಮೈಸೂರು ರಾಜ ಮನೆತನ ಅಭಿವೃದ್ಧಿಯ ಹತ್ತು ಹಲ ಪ್ರಥಮಗಳಿಗೆ ಕಾರಣರಾಗಿದ್ದು, ಅವರ ವಂಶದ ಕುಡಿಯಾಗಿರುವ ಯದುವೀರ್ ಕೃಷ್ಣದತ್ ಚಾಮರಾಜ ಒಡೆಯರ್ ಅವರು ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಿಂದ ದಾಖಲೆಯ ಅಂತರದ 2 ಲಕ್ಷ ಮತಗಳ ಅಂತರದ ಅಭೂತಪೂರ್ವ ಗೆಲುವನ್ನು ದಾಖಲಿಸುವ ವಿಶ್ವಾಸವನ್ನು ವಿಜಯೇಂದ್ರ ವ್ಯಕ್ತಪಡಿಸಿದರು.
‘ಸಿಂಹ’ರಿಗೆ ರಾಜ್ಯ ರಾಜಕಾರಣದಲ್ಲಿ ಉಜ್ವಲ ಭವಿಷ್ಯ- ಮೈಸೂರು ಕೊಡಗು ಕ್ಷೇತ್ರಕ್ಕೆ ಪಕ್ಷದ ರಾಷ್ಟ್ರೀಯ ಮೋದಿ, ನಡ್ಡಾ, ಅಮಿತ್ ಶಾ ಅವರುಗಳ ತೀರ್ಮಾನದಂತೆ ಯದುವೀರ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿತು ಎನ್ನುವ ಭಾವನೆಗಳೆ ಬೇಡ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿರುವ ಪ್ರತಾಪ ಸಿಂಹ ಅವರಿಗೆ ರಾಜ್ಯ ಮಟ್ಟದ ರಾಜಕಾರಣದಲ್ಲಿ ಉಜ್ವಲ ಭವಿಷ್ಯವಿದೆಯೆಂದು ತಿಳಿಸಿದರು.
ರಾಷ್ಟ್ರ ಅಖಂಡತೆಗಾಗಿ ಹಗಲಿರುಳು ಗಡಿಗಳನ್ನು ಕಾಯುವ ಯೋಧರಂತೆ ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಾವೊಬ್ಬ ಯೋಧರೆಂದು ಭಾವಿಸಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರಲ್ಲದೆ, ದೇಶದ ಭವಿಷ್ಯವನ್ನು ರೂಪಿಸುವ ಈ ಚುನಾವಣೆಯನ್ನು ಪ್ರತಿಯೊಬ್ಬರು ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ತಿಳಿಸಿದರು.
::: ಧಾರುಣ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ :::
ರಾಜ್ಯವಿಂದು ಬರದ ಛಾಯೆಯಡಿ ಸಿಲುಕಿದ್ದು, ರೈತರು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ. ಹೀಗಿದ್ದೂ ಅವರ ನೆರವಿಗೆ ಅಗತ್ಯ ಹಣವನ್ನು ನೀಡಲು ರಾಜ್ಯದ ಖಜಾನೆಯಲ್ಲಿ ಹಣವಿಲ್ಲ.ಇಂದಿನ ಪರಿಸ್ಥಿತಿಗಳಿಗೆ ಕಾಂಗ್ರೆಸ್ಸೇ ಕಾರಣವೆಂದು ದೂಷಿಸಿದ ಅವರು, ಅಭಿವೃದ್ಧಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಪ್ರಮುಖರು ಕೇವಲ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆಂದು ಲೇವಡಿ ಮಾಡಿದರು.
::: ಮೈಸೂರಿಗೆ ಮೋದಿ, ಕೊಡಗಿಗೆ ಆದಿತ್ಯನಾಥ :::
ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ಭಾಗವಾದ ಮೈಸೂರಿಗೆ ಪ್ರಧಾನಿ ಮೋದಿ ಅವರು ಮತ್ತು ಕೊಡಗಿಗೆ ಯೋಗಿ ಆದಿತ್ಯ ನಾಥ್ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ವಿಜಯೇಂದ್ರ ಅವರು ಇದೇ ಸಂದರ್ಭ ತಿಳಿಸಿದರು.
ಏ.3 ಕ್ಕೆ ನಾಮಪತ್ರ ಸಲ್ಲಿಕೆ- ಕ್ಷೇತ್ರದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕಾವೇರಿಯ ನಾಡಿನಲ್ಲಿ ಸ್ಪರ್ಧಿಸುವ ಅಪೂರ್ವ ಅವಕಾಶ ತನಗೆ ದೊರೆತಿದೆ. ಇಲ್ಲಿನ ಕಾರ್ಯಕರ್ತರೊಂದಿಗೆ ತಾನಿರುವುದಾಗಿ ಸ್ಪಷ್ಟಪಡಿಸಿ, ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮಡಿಕೇರಿ ಮತ್ತು ಮೈಸೂರಿನ ತನ್ನ ಕಚೇರಿಗಳಲ್ಲಿ ಕಾರ್ಯಕರ್ತರು ತನ್ನನ್ನು ಯಾವತ್ತೂ ಭೇಟಿಯಾಗಬಹುದೆಂದು ತಿಳಿಸಿ, ಮುಂದಿನ ಏ.3 ಕ್ಕೆ ಈ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಮೈ ಮರೆಯದಿರಿ- ಸಂಸದ ಪ್ರತಾಪ ಸಿಂಹ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಗಳ ಮೂಲಕ ಜನರ ಮನ ಗೆಲ್ಲುವ ಕೆಲಸವನ್ನು ಮಾಡಬೇಕಾಗಿದ್ದು, ಈ ಕಾರ್ಯ ನಡೆಸುವಲ್ಲಿ ಎಂದಿಗೂ ಮೈ ಮರೆಯದಿರಿ ಎಂದು ಕರೆ ನಿಡಿದರು.
ಕಳೆದ ಎರಡು ಅವಧಿಗಳಲ್ಲಿ ಈ ಕ್ಷೇತ್ರವನ್ನು ಪ್ರತಿನಧಿಸಿರುವ ತಾನು ತನ್ನ ಸಾಮಥ್ರ್ಯಕ್ಕೂ ಮಿಗಿಲಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಈ ಬಾರಿ ಚುನಾವಣಾ ಸ್ಪರ್ಧೆಗೆ ಅವಕಾಶ ದೊರಕಿಲ್ಲವಾದರು, ತಾನು ಈ ಕ್ಷೇತ್ರದ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆತು ಪಕ್ಷ ಕಟ್ಟುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದಾಗಿ ದೃಢವಾಗಿ ನುಡಿದರು.
ಮಾಜಿ ಸಚಿವ ರಾಮದಾಸ್ ಮಾತನಾಡಿ, ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಮೂಲಕ, ಜನರ ಒಲವನ್ನು ಮತಗಳನ್ನಾಗಿ ಪರಿವರ್ತಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಂಎಲ್ಸಿ ಸುಜಾ ಕುಶಾಲಪ್ಪ, ಕ್ಷೇತ್ರದ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ, ಮಾಜಿ ವಿಧಾನ ಸಭಾಧ್ಯಕ್ಷರಾದ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿಗಳಾದ ಸುನಿಲ್ ಸುಬ್ರಮಣಿ, ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ರಾಜ್ಯ ಶಿಸ್ತು ಸಮಿತಿ ಸದಸ್ಯರಾದ ರೀನಾ ಪ್ರಕಾಶ್, ಪ್ರಮುಖರಾದ ಡಾ.ಬಿ.ಸಿ. ನವೀನ್ , ಮಂಜುಳಾ, ಶರಣ್ ಪಾಟೀಲ್ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಸ್ವಾಗತಿಸಿ, ನೆಲ್ಲೀರ ಚಲನ್ ವಂದಿಸಿದರು.








