ಸುಂಟಿಕೊಪ್ಪ ಮಾ.31 NEWS DESK : ಸುಂಟಿಕೊಪ್ಪದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ 56 ನೇ ವಾರ್ಷಿಕೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ರಕ್ತ ಚಾಮುಂಡಿ, ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ದೇವಾಲಯದ ಮುಖ್ಯ ಅರ್ಚಕ ಮಂಜುನಾಥ್ ಉಡುಪ ನೇತೃತ್ವದಲ್ಲಿ ಗಣಪತಿ ಹೋಮದೊಂದಿಗೆ ಪೂಜಾ ಕೈಂಕಾರ್ಯಗಳು ಪ್ರಾರಂಭಗೊಂಡವು. ನಂತರ ಹಿರಿಯ ಅರ್ಚಕರಾದ ಹಾ.ಮಾ.ಗಣೇಶ ಶರ್ಮಾ, ಮಂಜುನಾಥ್ ಉಡುಪ ಹಾಗೂ ಮುತ್ತಪ್ಪ ದೇವಾಲಯದ ಪೂಜಾರಿ ಶಿವಮಣಿ ಅವರು ಶುದ್ಧಿ ಪುಣ್ಯಾಹ ನಡೆಸಿದರು. ಬಾವುಟ ಕಂಬಕ್ಕೆ ಶುದ್ಧಿ ಪೂಜೆ ನಡೆಸಿದ ನಂತರ ದೇವಾಲಯ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್ ಅವರು ಬಾವುಟ ಏರಿಸುವುದರ ಮೂಲಕ ತೆರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಸಂಜೆ ಮುತ್ತಪ್ಪ ದೇವರ ಮಲೆ ಇಳಿಸಿದ ನಂತರ ಮುತ್ತಪ್ಪ ದೇವರ ಬೆಳ್ಳಾಟ ನಡೆಯಿತು. ದೇವಾಲಯ ಸಮಿತಿಯ ಕಾರ್ಯದರ್ಶಿ ಪಿ.ಸಿ.ಮೋಹನ್, ಖಜಾಂಚಿ ರಮೇಶ್ ಪಿಳ್ಳೈ, ಎಸ್.ಜಿ.ಶ್ರೀನಿವಾಸ್, ಕೆ.ಪಿ.ಜಗನ್ನಾಥ್, ಅನಿಲ್, ಕೆ.ಎಸ್.ಅನಿಲ್ ಕುಮಾರ್, ಧನು ಕಾವೇರಪ್ಪ, ಮಾಗಿಲು ವಸಂತ, ಬಾಬು,ಪ್ರೀತಂ ಇತರರು ಇದ್ದರು.








