ಕೂಡಿಗೆ ಮಾ.4 NEWS DESK : ಉತ್ತರ ಕೊಡಗಿನ ಪ್ರಮುಖ ಶಿವ ದೇವಾಲಯ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮರಥೋತ್ಸವ ಏ.17 ರಂದು ಜರುಗಲಿದೆ.
ರಥೋತ್ಸವಕ್ಕೆ ಕೊಡಗು ಜಿಲ್ಲೆಯ ಭಕ್ತಾಧಿಗಳು ಸೇರಿದಂತೆ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.
ದೇವಾಲಯದ ಮುಂಬದಿಯಲ್ಲಿ ಹರಿದಿರುವ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಇಲ್ಲಿಗೆ ಧಾವಿಸುವ ಭಕ್ತರು ಹಾಗೂ ಪ್ರವಾಸಿಗರ ಕಣ್ಮನ ತಣಿಸುವುದು ವಿಶೇಷ ಸಂಗತಿ.
ರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯಾಧ್ಯಕ್ಷ ಕೆ.ಎಸ್.ಮಾಧವ ನೇತೃತ್ವದ ಭಕ್ತಗಣ ರಥೋತ್ಸವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ದೇವಾಲಯದ ಐತಿಹ್ಯ : ದೇವಾಲಯದ ಗರ್ಭಗುಡಿಯ ಉತ್ತರಾಭಿಮುಖವಾಗಿ ಹರಿದಿರುವ ಜೀವ ನದಿ ಕಾವೇರಿ ದೇವಾಲಯದ ಮಹತ್ವವನ್ನು ನಿಚ್ಛಳಗೊಳಿಸಿದೆ.
ನದಿಯ ದಂಡೆಯಲ್ಲಿ ಇರುವ ಈ ದೇವಾಲಯದ ಗರ್ಭಗುಡಿಯ ” ಶಿವಲಿಂಗ ” ವನ್ನು ಅಯೋಧ್ಯೆ ಬಿಟ್ಟು ವನವಾಸಕ್ಕೆಂದು ತೆರಳಿದ ಸಾಕ್ಷಾತ್ ಶ್ರೀರಾಮನೇ ಪ್ರತಿಷ್ಠಾಪಿಸಿದ ಲಿಂಗವೇ ಈ ” ರಾಮಲಿಂಗ ” ಎಂಬುದು ಪುರಾತನ ಕಾಲದಿಂದಲೂ ಭಕ್ತರ ನಂಬಿಕೆಯಾಗಿದೆ.
ಅಪೂರ್ವ ಪ್ರಕೃತಿ ಸೌಂದರ್ಯದಿಂದ ರಾರಾಜಿಸಿರುವ ಬೆಟ್ಟ ಗುಡ್ಡಗಳ ರಾಶಿಯ ನಡುವೆ ಲೋಕಪಾವನೆ ಕಾವೇರಿ ನದಿಯ ದಂಡೆಯ ಮೇಲೆ ಇರುವ ರಾಮಲಿಂಗೇಶ್ವರ ಸನ್ನಿಧಿಯ ಎಡಭಾಗದ ಬೆಟ್ಟದ ಮೇಲೆ ಹರಿಹರೇಶ್ವರ ಹಾಗೂ ಬಲ ಬದಿಯ ಬೆಟ್ಟದ ಮೇಲೆ ಲಕ್ಷ್ಮಣೇಶ್ವರ ದೇವಾಲಯ ಗಳಿವೆ.
ಅಯೋಧ್ಯೆಯಿಂದ ಕಣಿವೆಗೆ ಬಂದ ರಾಮ :
ಅಯೋಧ್ಯೆ ಯನ್ನು ತೊರೆದು ವನವಾಸಕ್ಕೆಂದು ಶ್ರೀರಾಮನು ಆಗಮಿಸುತ್ತಿದ್ದ ಸಂದರ್ಭ ಬೆಟ್ಟಗಳು ಹಾಗೂ ನದಿ ದಂಡೆಗಳಲ್ಲಿ ವಾಸವಿದ್ದ ಈತನ ಭಕ್ತರು ಲಿಂಗವನ್ನು ಪ್ರತಿಷ್ಠಾಪಿಸಿ ರಾಮಲಿಂಗೇಶ್ವರ ಎಂದು ಜಪಿಸುತ್ತಾ ಹಾಗೂ ಸ್ತುತಿಸುತ್ತಾ ಶ್ರೀರಾಮನ ಧ್ಯಾನದಲ್ಲಿ ಮಗ್ನರಾಗುತ್ತಿದ್ದ ಸಂದರ್ಭ ಸಾಕ್ಷಾತ್ ಶ್ರೀರಾಮನೇ ಈ ಕಣಿವೆಯ ಬೆಟ್ಟದ ತಪ್ಪಲಿನ ಕಾವೇರಿ ನದಿ ದಂಡೆಗೆ ಬಂದು ಲಿಂಗವನ್ನು ಪ್ರತಿಷ್ಠಾಪಿಸಿದನೆಂದು ಪೂರ್ವಜರ ನಂಬಿಕೆ ಎಂದು ಕಣಿವೆ ಗ್ರಾಮದ ಹಿರಿಯ ನಿವಾಸಿ 100 ರ ಆಸುಪಾಸಿನ ವೃದ್ಧ ಹೋಟೆಲ್ ಅಣ್ಣಾ ಎಂಬವರು ‘ ಶಕ್ತಿ ‘ ಗೆ ವಿವರಿಸಿದರು.
ಶ್ರೀರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ರಾಮಲಿಂಗ ಮೂರ್ತಿಯ ಸನ್ನಿಧಿಯ ಕಾರಣಕ್ಕೆ ಈ ಗ್ರಾಮಕ್ಕೆ ರಾಮಸ್ವಾಮಿ ಕಣಿವೆ ಎಂದು ನಾಮಾಂಕಿತ ಗೊಂಡ ಬಗ್ಗೆ ದೇವಾಲಯದ ಆವರಣದಲ್ಲಿ ಇರುವ ಲಿಖಿತ ರೂಪದಲ್ಲಿರುವ ಬರವಣಿಗೆಯೇ ಸಾಕ್ಷಿ ಎಂದು ಅವರು ವಿವರಿಸಿದರು.
ಈ ದೇವಾಲಯದ ಗರ್ಭ ಗುಡಿಯಲ್ಲಿ ರಾಮ, ಸೀತೆ ಹಾಗೂ ಆಂಜನೇಯ ಮೂರ್ತಿ ಗಳಿವೆ.
ಇಲ್ಲಿ ಪ್ರತಿ ವರ್ಷ ರಾಮನವಮಿಯಂದು ಅಭಿಜಿನ್ ಲಗ್ನದಲ್ಲಿ ಶ್ರೀ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ನಡೆಯುತ್ತದೆ.
ರಾಮನ ಶಿವ ಲಿಂಗಕ್ಕೆ ಕಾಶಿಯ ತೀರ್ಥ ಸ್ನಾನ : ರಥೋತ್ಸವದ ಮುನ್ನಾ ದಿನ ಕಾಶಿಯಿಂದ ಅಂಚೆಯಲ್ಲಿ ತರಿಸುವ ಪವಿತ್ರ ಗಂಗಾ ತೀರ್ಥವನ್ನು ಅಲಂಕೃತ ಮಂಟಪದಲ್ಲಿಟ್ಟು ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆಯಲ್ಲಿ ರಾಮಲಿಂಗೇಶ್ವರ ಸನ್ನಿಧಿಗೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ತಂದು ರಾಮಲಿಂಗದ ಮೇಲೆ ಅಭಿಷೇಕ ಮಾಡಿದ ಬಳಿಕವಷ್ಟೇ ರಥ ಚಾಲನೆಗೊಳ್ಳುವುದು ಇಂದಿಗೂ ನಡೆದು ಬಂದಿರುವ ವಾಡಿಕೆಯಾಗಿದೆ.
ಕಾಶಿಯಲ್ಲಿನ ಸ್ಮಶಾನದ ಹೋಲಿಕೆ :
ಈ ಸನ್ನಿಧಿಯಲ್ಲಿನ ದೇಗುಲದ ಗೋಪುರದ ಎದುರು ಸ್ಮಶಾನವೂ ಇದ್ದು ಇದು ಕಾಶಿಯಲ್ಲಿನ ಪರಿಸರವನ್ನೇ ಹೋಲುತ್ತದೆ. ಜೊತೆಗೆ ರಾಷ್ಟ್ರವ್ಯಾಪಿ ಇರುವ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳಿಗಿಂತ ಈ ರಾಮಲಿಂಗೇಶ್ವರ ಸನ್ನಿಧಿಗೆ ತನ್ನದೇ ಆದ ವಿಶೇಷ ಐತಿಹ್ಯ ಇರುವುದಾಗಿ ದೇವಾಲಯದ ಅಧ್ಯಕ್ಷ ಕೆ.ಎನ್.ಸುರೇಶ್ ಹೇಳುತ್ತಾರೆ.
ಹನುಮಂತ ಕಾಶಿಯಿಂದ ಲಿಂಗ ತರುವುದು ತಡವಾದಾಗ ರಾಮನಿಂದಲೇ ಲಿಂಗ ಪ್ರತಿಷ್ಠಾಪನೆ : ಈ ಪುರಾಣ ಪುಣ್ಯ ಕ್ಷೇತ್ರದ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸುವುದಾದರೆ ತ್ರೇತಾಯುಗದ ಕೊನೆಯ ಹಂತದಲ್ಲಿ ಶ್ರೀರಾಮನು ಕಣಿವೆಗೆ ಬಂದು ಹನುಮಂತನನ್ನು ಲಿಂಗವನ್ನು ತರಲು ಕಾಶಿಗೆ ಕಳಿಸಿ, ಲಿಂಗ ಪ್ರತಿಷ್ಠಾಪನಾ ಕಾರ್ಯದಲ್ಲಿ ಮಗ್ನನಾಗುತ್ತಾನೆ.
ಆದರೆ ಹನುಮಂತ ಕಾಶಿಯಿಂದ ಬರುವುದು ತಡವಾದಾಗ ಕಾವೇರಿ ನದಿಯೊಳಗಿನ ಪವಿತ್ರ ಮಣ್ಣಿನಿಂದಲೇ ಶ್ರೀರಾಮ ಲಿಂಗವನ್ನು ಪ್ರತಿಷ್ಠಾಪಿಸಿದ ವಿಷಯ ತಿಳಿದ ಹನುಮಂತ ತಂದ ಲಿಂಗ ದೊಂದಿಗೆ ವ್ಯಥೆ ಪಡುತ್ತಿದ್ದಾಗ ಹನುಮಂತ ತಂದ ಲಿಂಗವನ್ನು ಲಕ್ಷ್ಮಣನಿಂದ ಪ್ರತಿಷ್ಠಾಪಿಸಿದ್ದರಿಂದ ಲಕ್ಷ್ಮಣೇಶ್ವರ ದೇಗುಲವಾಗುತ್ತದೆ.
ಹರಿಹರೇಶ್ವರ ದೇವಾಲಯ ಉದ್ಭವವಾದುದು ಎಂದು ಹೇಳಲಾಗುತ್ತಿದೆ.
ಪಂಚಲಿಂಗಗಳ ಪುಣ್ಯ ಕ್ಷೇತ್ರ : ಕಣಿವೆಯ ದೇವಾಲಯದ ಈ ಪುಣ್ಯಕ್ಷೇತ್ರದಲ್ಲಿ ರಾಮ ಹಾಗೂ ಲಕ್ಷ್ಮಣರಿಂದ ಪ್ರತಿಷ್ಠಾಪಿಸಿದ ಲಿಂಗಗಳಿಗೆ ದೇವಾಲಯ ನಿರ್ಮಿಸಿ ನಿತ್ಯವೂ ಪೂಜೆ – ಪುನಸ್ಕಾರಗಳು ನೆರವೇರುತ್ತಿವೆ.
ಅಲ್ಲದೇ ಇದೇ ಸನ್ನಿಧಿಯಲ್ಲಿ ಬಸವೇಶ್ವರ, ಲಕ್ಷ್ಮಣೇಶ್ವರ, ಹರಿಹರೇಶ್ವರ, ಗುಹೇಶ್ವರ ಹಾಗೂ ಶ್ರೀರಾಮಲಿಂಗೇಶ್ವರ ಎಂಬ ಪಂಚಲಿಂಗಗಳಿದ್ದು ಇದು ದಕ್ಷಿಣದ ಕಾಶಿಯೆಂದೇ ಜಗಜನ್ನಿತವಾಗಿದೆ.
ಭಾವೈಕ್ಯತೆಯ ಗ್ರಾಮ : ಶ್ರೀ ರಾಮಲಿಂಗೇಶ್ವರನ ಸನ್ನಿಧಿಯ ಕಣಿವೆ ಗ್ರಾಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರಾದಿಯಾಗಿ ವಿವಿಧ ಧರ್ಮೀಯರು ನೆಲೆಸಿದ್ದು ಇದೊಂದು ಭಾವೈಕ್ಯತೆ ಬೆಸೆವ ಗ್ರಾಮವೆಂಬ ಖ್ಯಾತಿಗೆ ಒಳಗಾಗಿದೆ.
ಈ ಪುರಾಣ ಪ್ರಸಿದ್ಧ ದೇವಾಲಯದ ಆಡಳಿತ ಮಂಡಳಿಯಲ್ಲಿ ಧರ್ಮಾತೀತವಾಗಿ ಗ್ರಾಮದ ಎಲ್ಲಾ ಭಕ್ತರು ಸೇವೆ ಮಾಡಿದ್ದಾರೆ.
ವಿಶೇಷ ಲೇಖನ : ಕೆ.ಆರ್.ಗಣೇಶ ಕೂಡಿಗೆ









