
ಮಡಿಕೇರಿ ಏ.13 NEWS DESK : ಹಿಂದಿನ ಬಿಜೆಪಿ ಸರಕಾರ ನೀಡಿದ ಯೋಜನೆಗಳಿಗೆ ಕಾಂಗ್ರೆಸ್ ತನ್ನ “ಲೇಬಲ್” ಹಾಕುವ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದೆ. ಕೊಡಗಿನ ಶಾಸಕರ ಕೊಡುಗೆ ಏನೂ ಇಲ್ಲ ಎಂದು ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಟೀಕಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರುಗಳು ಕಾಂಗ್ರೆಸ್ ಪಕ್ಷ ಹಾಗೂ ಹಾಲಿ ಶಾಸಕರುಗಳ ವಿರುದ್ಧ ವಾಗ್ಧಾಳಿ ನಡೆಸಿದರು.
ಕೆ.ಜಿ.ಬೋಪಯ್ಯ ಮಾತನಾಡಿ ಸುಮ್ಮನೆ ಶ್ವೇತಪತ್ರ ಹೊರಡಿಸಿದರೆ ಸಾಲದು, ಜನರಿಗೆ ನಿಖರವಾದ ಲೆಕ್ಕ ನೀಡಲಿ. ಬಿಜೆಪಿ ಸರಕಾರದ ಅವಧಿಯ ಅನುದಾನದ ಲೆಕ್ಕ ನಮ್ಮ ಬಳಿ ಇದೆ, ನಿಮ್ಮ ಲೆಕ್ಕ ಕೊಡಿ ಎಂದರು.
ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರಡಿ ಪಾರಂಪರಿಕವಾಗಿ ಬಂದ ವನ್ಯಜೀವಿ ಉತ್ಪನ್ನವನ್ನು ಘೋಷಿಸಿಕೊಳ್ಳಲು ಅವಕಾಶವಿದ್ದರೂ ಮಾಹಿತಿ ಕೊರತೆಯಿಂದ ಘೋಷಿಸಿಕೊಂಡಿರಲಿಲ್ಲ. ಜಿಲ್ಲೆಯಲ್ಲಿ ಪಾರಂಪರಿಕ ವನ್ಯಜೀವಿ ಉತ್ಪನ್ನಗಳು ಧಾರ್ಮಿಕ ಆಚರಣೆಯ ಭಾಗವಾಗಿದೆ. ಇದನ್ನು ಸ್ವಾಧೀನಕ್ಕೆ ನೀಡಲು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬಹುದಿತ್ತು. ಆದರೆ, ಸರಕಾರದ ಸುತ್ತೋಲೆಗೆ ಸರಕಾರದ ಭಾಗವಾಗಿರುವ ಶಾಸಕರೇ ಪಕ್ಷದ ಮುಖಂಡರ ಮೂಲಕ ತಡೆಯಾಜ್ಞೆ ತಂದಿರುವುದು ಹಾಸ್ಯಾಸ್ಪದ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವನ್ಯಜೀವಿ ಹಾವಳಿ ತಡೆಗೆ ಏನೂ ಕ್ರಮಕೈಗೊಂಡಿಲ್ಲ ಎನ್ನುವ ಹಾಲಿ ಶಾಸಕರಿಗೆ ರೈಲ್ವೆ ಬ್ಯಾರಿಕೇಡ್, ಸೋಲಾರ್ ಕಂದಕ ಇರುವುದು ಕಾಣುವುದಿಲ್ಲವೇ, ರೂ.150 ಕೋಟಿ ಹಣವನ್ನು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಬಜೆಟ್ನಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಘೋಷಿಸಿದೆ. ಆದರೆ ಇದುವರೆಗೂ ಅನುದಾನ ಬಳಕೆಯಾಗಿಲ್ಲ. ಇದಕ್ಕೆ ಮೊದಲು ಉತ್ತರ ನೀಡಿ ಎಂದು ಒತ್ತಾಯಿಸಿದ ಬೋಪಯ್ಯ, ಸುಮ್ಮನೆ ಶ್ವೇತಪತ್ರ ಹೊರಡಿಸಿದರೆ ಸಾಲದು ಎಂದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಿತಿಮೀರಿದೆ. ಪ್ರಬುದ್ಧ ರಾಜಕಾರಣಕ್ಕೆ ಕೊಡಲಿ ಪೆಟ್ಟು ನೀಡುತ್ತಿರುವ ಕಾಂಗ್ರೆಸ್ ನಾಯಕರು ದುರುದ್ದೇಶಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಿ ದೂರು ನೀಡುತ್ತಿದ್ದಾರೆ. ಅಲ್ಲದೆ ಸತ್ಯಾಂಶ ಅರಿಯದೆ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಸರಿಯಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಪ್ಪಚ್ಚು ರಂಜನ್ ಮಾತನಾಡಿ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಕರಣ ದಾಖಲಿಸಿ ಧಮನಕಾರಿ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಬೆದರಿಕೆ ತಂತ್ರಗಾರಿಕೆಗೆ ನಾವು ಜಗ್ಗುವುದಿಲ್ಲ, ತಾರತಮ್ಯ ತೋರದೆ ಅಧಿಕಾರಿಗಳು ಕೆಲಸ ಮಾಡಬೇಕು. ಈ ಮುನ್ನ ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ 12 ವೈದ್ಯರಿದ್ದರು, ಇದೀಗ ಇಬ್ಬರಿದ್ದಾರೆ. ಜಿಲ್ಲೆಯ ಹಲವು ಕಡೆ ಇದೇ ಪರಿಸ್ಥಿತಿ ತಲೆದೋರಿದೆ. ಪಿಡಿಓಗಳ ಕೊರತೆಯೂ ಇದೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಏ.14 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬರುತ್ತಿದ್ದಾರೆ. ಜಿಲ್ಲೆಯಿಂದ ಕಾರ್ಯಕರ್ತರಲ್ಲದೆ, ಸಾಮಾನ್ಯ ಮತದಾರರು ಕೂಡ ತೆರಳುತ್ತಿದ್ದಾರೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನೆಲ್ಲಚಂಡ ಕಿರಣ್, ಉಪಾಧ್ಯಕ್ಷ ಕಾಂಗೀರ ಸತೀಶ್, ವಕ್ತಾರರಾದ ಸುಬ್ರಮಣ್ಯ ಉಪಾಧ್ಯಾಯ, ತಳೂರು ಕಿಶೋರ್ ಕುಮಾರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.








