
ಮಡಿಕೇರಿ ಏ.16 NEWS DESK : ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದ ಕೇಂದ್ರದ ಬಿಜೆಪಿ ಸರ್ಕಾರದಿಂದ ಶ್ರಮಿಕ ಸಮೂಹ ಸ್ವಾತಂತ್ರ್ಯ ಕಳೆದುಕೊಳ್ಳುವ ಆತಂಕದಲ್ಲಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕವರ್ಗ ಹಾಗೂ ರೈತ ಸಮೂಹ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಮತದಾನ ಮಾಡಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಜನರ ಹಸಿವಿನ ಪ್ರಶ್ನೆಗಳಿಗೆ, ಒಕ್ಕೂಟ ವ್ಯವಸ್ಥೆಯ ರಕ್ಷಣೆಯ ಬಗ್ಗೆ, ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರ ಚಿಂತನೆಗಳನ್ನು ಮಾಡಿಲ್ಲ. ರಾಷ್ಟ್ರದ ಆರ್ಥಿಕ ಶಕ್ತಿಗೆ ಪೂರಕವಾಗಿದ್ದ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಬಂಡವಾಳಶಾಹಿಗಳನ್ನು ರಕ್ಷಿಸುವ ಪ್ರಯತ್ನಗಳನ್ನಷ್ಟೆ ಮಾಡಿದೆ ಎಂದು ಆರೋಪಿಸಿದರು.
ಈ ಲೋಕಸಭಾ ಚುನಾವಣೆ ದೇಶದ ಆರ್ಥಿಕತೆಯನ್ನು, ಜನರ ಸಾಮಾಜಿಕ ಪರಿಸ್ಥಿತಿಗಳನ್ನು ನಿರ್ಧರಿಸುವ ಚುನಾವಣೆಯಾಗಿದೆ. ಹಸಿವಿನ ಭಾರತ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗುತ್ತಿದೆ ಎನ್ನುವ ಕೇಂದ್ರದ ಬಿಜೆಪಿ ಸರ್ಕಾರದ ಹೇಳಿಕೆಗಳ ನಡುವೆಯೇ ವಿಶ್ವದ ಹಸಿವಿನ ಸೂಚ್ಯಂಕ ಪಟ್ಟಿಯನ್ನು ಗಮನಿಸಿದಾಗ ನೆರೆಹೊರೆಯ ರಾಷ್ಟ್ರಗಳಿಗಿಂತಲೂ ಕೆಳಗಿನ 112ನೇ ಸ್ಥಾನವನ್ನು ಭಾರತ ಹೊಂದಿದೆ. ಇಂತಹ ವಿಚಾರಗಳತ್ತ ಮೋದಿ ಸರಕಾರ ಕಾಳಜಿ ವಹಿಸಿಲ್ಲ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ವಾಸ್ತವವಾಗಿ ವಾರ್ಷಿಕ 2 ಲಕ್ಷ ಉದ್ಯೋಗದ ಸೃಷ್ಟಿಯೂ ಆಗಿಲ್ಲ. ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಬದಲಾಗಿ ಗುತ್ತಿಗೆ, ಹೊರಗುತ್ತಿಗೆ ಉದ್ಯೋಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರದ ಬಿಜೆಪಿ ಸರಕಾರ ಭ್ರಷ್ಟಾಚಾರಕ್ಕೆಂದೇ ‘ಚುನಾವಣಾ ಬಾಂಡ್’ ಎನ್ನುವ ಕಾಯ್ದೆಯನ್ನೆ ಜಾರಿಗೆ ತಂದಿತು ಎಂದು ವ್ಯಂಗ್ಯವಾಡಿದ ಭರತ್, ವಿದೇಶಗಳಲ್ಲಿ ರದ್ದುಗೊಂಡ ಔಷಧಿ ಸಂಸ್ಥೆಗಳಿಗೆ ಇಲ್ಲಿ ಅವಕಾಶ ನೀಡಿ ಅಂತಹ ಸಂಸ್ಥೆಗಳಿಂದಲೂ ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲಾಗಿದೆ. ಪ್ರಧಾನಿ ಮೋದಿಯವರಿಂದ ಸ್ವಚ್ಛ ಆಡಳಿತ ಎನ್ನುತ್ತಲೆ ಚುನಾವಣಾ ಬಾಂಡ್ನ ಸರಿ ಸುಮಾರು 9200 ಕೋಟಿ ರೂ.ಗಳ ಹಗರಣ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತದಲ್ಲಿ ಬಡವರ ಹಾಗೂ ಶ್ರೀಮಂತರ ಭಾರತವವನ್ನು ನೋಡುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಎಲ್ಲಾ ಕಾರಣಗಳಿಂದ ಸಿಐಟಿಯು ಸಂಘಟನೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಪ್ರಯತ್ನವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದೆ. ಕಾರ್ಮಿಕರು, ರೈತ ಸಮೂಹ ಕೇಂದ್ರದ ಧೋರಣೆಗಳನ್ನು ಅರ್ಥೈಸಿಕೊಂಡು ಎಚ್ಚೆತ್ತುಕೊಳ್ಳುವ ಮೂಲಕ ಮತದಾನ ಮಾಡಬೇಕೆಂದು ತಿಳಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಮಾತನಾಡಿ, ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರತಾಪಸಿಂಹ ಅವರು ತಮ್ಮ ಅವಧಿಯಲ್ಲಿ ಕೊಡಗಿನ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸಿಐಟಿಯು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲವನ್ನು ನೀಡುತ್ತಿರುವುದಾಗಿ ತಿಳಿಸಿದರು.
::: ಪ್ರಣಾಳಿಕೆ ಬಿಡುಗಡೆ :::
ಇದೇ ಸಂದರ್ಭ ಲೋಕಸಭಾ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಹೊರ ತಂದಿರುವ ಸಿಐಟಿಯುನ ‘ಕಾರ್ಮಿಕ ಪ್ರಣಾಳಿಕೆ’ಯನ್ನು ಸಂಘಟನೆಯ ಪ್ರಮುಖರು ಬಿಡುಗಡೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಖಜಾಂಚಿ ಎನ್.ಸಿ.ಕುಟ್ಟಪ್ಪನ್, ಸದಸ್ಯರಾದ ಕೆ.ಕೆ. ಹರಿದಾಸ್ ಹಾಗೂ ರಾಚಪ್ಪಾಜಿ ಉಪಸ್ಥಿತರಿದ್ದರು.








