ಮಡಿಕೇರಿ ಏ.16 NEWS DESK : ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಯ್ಯಂಗೇರಿ ಗ್ರಾಮದ ಮಿದ್ಲಾಜ್ ಕೆ.ಕೆ.(22) ಹಾಗೂ ಫಾತಿಮಾ (26) ಬಂಧಿತ ಆರೋಪಿಗಳು. ಬಂಧಿತರಿಂದ 177 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ 2 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾಗಮಂಡಲ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ನಿವಾಸಿ ಜಲೀನಾ ಕೆ.ಹೆಚ್. ಎಂಬುವವರು ಇದೇ ಏ.12 ರಂದು ಸಂಬಂಧಿಕರ ಮನೆಗೆ ತೆರಳಿ, ಮರುದಿನ ಹಿಂದಿರುಗಿ ಬಂದಾಗ, ಮನೆಯ ಹಿಂಬಾಗಿಲನ್ನು ಒಡೆದು ಬೀರುವಿನಲ್ಲಿದ್ದ 232 ಗ್ರಾಂ ಚಿನ್ನಾಭರಣಗಳು ಕಳುವಾಗಿರುವುದು ಅವರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪೊಲಿಸರಿಗೆ ದೂರು ಸಲ್ಲಿಸಿದ್ದರು.
ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಎಲ್. ಅವರ ನೇತೃತ್ವದ ವಿಶೇಷ ತಂಡ, ಪ್ರಕರಣದ ಕುರಿತು ಕ್ಷಿಪ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ, ನಾಪೋಕ್ಲು ಎಸ್ಐ ಮಂಜುನಾಥ್, ನಾಪೋಕ್ಲು, ಭಾಗಮಂಡಲ ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಳ್ಳತನ ನಡೆದ 48 ಗಂಟೆಗಳ ಒಳಗಾಗಿ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.










