
ಕುಶಾಲನಗರ NEWS DESK ಅ.31 : ಇದೇ ಡಿ.13ರಂದು ಕುಶಾಲನಗರದಲ್ಲಿ ನಡೆಯುವ ಅದ್ದೂರಿ ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರ ಸಮ್ಮುಖದಲ್ಲಿ ದಶಮಂಟಪ ಸಮಿತಿಗಳ ಪ್ರಮುಖರ ಸಭೆ ನಡೆಯಿತು. ಈ ಬಾರಿ ನಡೆಯುವ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಎಂಟು ಮಂಟಪಗಳು ಪಾಲ್ಗೊಳ್ಳಲಿದ್ದು ಈ ಸಂಬಂಧ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ನಡೆಸಲು ಸದ್ಯದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಶಾಸಕ ಮಂತರ್ ಗೌಡ ಹೇಳಿದರು. ಕಾನೂನು ಚೌಕಟ್ಟಿನಲ್ಲಿ ಹಬ್ಬ ಆಚರಣೆ ನಡೆಯುವ ಮೂಲಕ ಹನುಮ ಜಯಂತಿಯನ್ನು ನಾಡಹಬ್ಬವಾಗಿ ಆಚರಣೆ ಮಾಡುವ ಬಗ್ಗೆ ತಿಳಿಸಿದ ಶಾಸಕರು ಮಡಿಕೇರಿ ದಸರಾ ರೀತಿಯಲ್ಲಿ ಹನುಮ ಜಯಂತಿ ಆಚರಣೆ ನಡೆಸಲು ಸಲಹೆ ನೀಡಿದರು. ಈ ಸಂದರ್ಭ ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿ ದೀಪ ಅಲಂಕಾರ ಹಾಗೂ ಪಾಲ್ಗೊಳ್ಳುವ ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಅಗತ್ಯವಿರುವ ಊಟ ಉಪಚಾರ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸಮಿತಿ ಪ್ರಮುಖರಿಗೆ ತಿಳಿಸಿದರು. ಮಂಟಪಗಳ ಮೆರವಣಿಗೆ ಮತ್ತು ಪ್ರದರ್ಶನ ಅವಧಿಯನ್ನು ವಿಸ್ತರಣೆ ಮಾಡುವಂತೆ ಮಂಟಪದ ಪ್ರಮುಖರು ಶಾಸಕರನ್ನು ಕೋರಿದರು. ಆಚರಣೆ ಸಂದರ್ಭ ಯಾರಿಗೂ ಸಮಸ್ಯೆಗಳು ಉಂಟಾಗದಂತೆ ಕಾನೂನು ಚೌಕಟ್ಟಿನ ಅಡಿಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಶಾಸಕ ಡಾ ಮಂತರ್ ಗೌಡ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ದಶಮಂಟಪಗಳ ಅಧ್ಯಕ್ಷರಾದ ಎಂ ಡಿ ಕೃಷ್ಣಪ್ಪ ಮಾತನಾಡಿ ಕಳೆದ ಐದು ವರ್ಷಗಳಿಂದ ಶೋಭಾ ಯಾತ್ರೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಸಮಯ ನಿಗದಿ ಮಾಡುವ ಕಾರಣ ಕೆಲವೊಂದು ಅನಾನುಕೂಲ ಉಂಟಾಗುತ್ತಿದೆ. ಬೆಳಗ್ಗೆ ತನಕ ಅವಕಾಶ ಕಲ್ಪಿಸಬೇಕು ಮತ್ತು ಸರ್ಕಾರದಿಂದ ಅನುದಾನಕ್ಕೆ ಶಾಸಕರ ಮೂಲಕ ಮನವಿ ಮಾಡಿದರು. ಈ ಸಂದರ್ಭ ವೇದಿಕೆಯಲ್ಲಿ ದೇವಾಲಯ ಒಕ್ಕೂಟದ ಅಧ್ಯಕ್ಷರಾದ ಎಂ.ಕೆ.ದಿನೇಶ್, ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್, ಗಣಪತಿ ದೇವಾಲಯ ಪ್ರಧಾನ ಅರ್ಚಕರಾದ ಆರ್.ಕೆ.ನಾಗೇಂದ್ರಬಾಬು, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ವಿ.ಡಿ.ಪಂಡರಿಕಾಕ್ಷ ಹಾಗೂ ಮಂಟಪಗಳ ಅಧ್ಯಕ್ಷರು ಪ್ರಮುಖರು ಇದ್ದರು.










