
ಮಡಿಕೇರಿ ಜ.27 NEWS DESK : ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕನೆಂದು ಹೇಳಿಕೊಂಡಿರುವ ಹೆಚ್.ಎಲ್.ದಿವಾಕರ್ ಅವರು ಡಾ.ಅಂಬೇಡ್ಕರ್ ಭವನ ಸಮಿತಿ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಪಡಿಸಿದರೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಿತಿ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಮತ್ತು ಎಲ್ಲಾ ಲೆಕ್ಕಪತ್ರಗಳು ಸಮರ್ಪಕವಾಗಿವೆ. ಸಮಿತಿಯ ಉಪಾಧ್ಯಕ್ಷ ಸ್ಥಾನದಲ್ಲಿರುವ ಹೆಚ್.ಎಲ್.ದಿವಾಕರ್ ಅವರು ಯಾವುದೇ ಸಭೆಗಳಿಗೆ ಹಾಜರಾಗದೆ ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ಇದನ್ನು ಸಮಿತಿ ತೀವ್ರವಾಗಿ ಖಂಡಿಸುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಮಡಿಕೇರಿ ನಗರದಲ್ಲಿ ನಿರ್ಮಾಣಗೊಂಡಿರುವ ಡಾ.ಅಂಬೇಡ್ಕರ್ ಭವನದ ಆಡಳಿತ ಮಂಡಳಿಯ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನಗರದ ಅಶೋಕಪುರದ ನಿವಾಸಿಗಳ ಕೋರಿಕೆ ಮೇರೆಗೆ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಹೆಚ್.ಭಾಸ್ಕರ್ ಅವರು 10 ಸೆಂಟ್ ಜಾಗವನ್ನು ಮೀಸಲಿರಿಸಿದರು. 1991-92 ರಲ್ಲಿ ವೈದ್ಯರಾಗಿದ್ದ ಡಾ.ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯನ್ನು ನೋಂದಣಿ ಮಾಡಿಸಲಾಯಿತು. ನಾನು ಹಾಗೂ ಡಾ.ದೇವದಾಸ್ ಅವರು ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೆವು. ಹೆಚ್.ಎಲ್.ದಿವಾಕರ್ ಕಾರ್ಯದರ್ಶಿಯಾಗಿ ಒಟ್ಟು 12 ಜನರ ಸಮಿತಿ ರಚಿಸಲಾಗಿತ್ತು. 1991 ರಲ್ಲಿ ರಾಜ್ಯದ ಸಚಿವರು ಹಾಗೂ ಗಣ್ಯರಿಂದ ಕಟ್ಟಡದ ಶಂಕು ಸ್ಥಾಪನೆ ಮಾಡಲಾಯಿತು. ಡಾ.ನಾಗರಾಜ್ ಅವರ ಮೇಲೆ ದಿವಾಕರ್ ಸುಳ್ಳು ಆರೋಪ ಹೊರಿಸಿದ ಕಾರಣ ಮನನೊಂದ ಅವರು ಭವನ ನಿರ್ಮಾಣ ಸಮಿತಿಗೆ ರಾಜೀನಾಮೆ ಸಲ್ಲಿಸಿದರು. ಸಮಿತಿ ಸದಸ್ಯರು ಹಾಗೂ ಅಶೋಕಪುರದ ನಿವಾಸಿಗಳ ಕೋರಿಕೆ ಮೇರೆಗೆ ಅಂದು ಪುರಸಭಾ ಸದಸ್ಯನಾಗಿದ್ದ ನಾನು ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡೆ. ನಾನು ಅಧ್ಯಕ್ಷನಾದ ಮೇಲೆ ಅಶೋಕಪುರ ನಿವಾಸಿಗಳಿಂದ ಸಂಗ್ರಹಿಸಿದ ವಂತಿಗೆ ಹಣ, ಲಾಟರಿ ಮೂಲಕ ಸಂಗ್ರಹಿಸಿದ ಹಣ ಮತ್ತು ನನ್ನ ವೈಯುಕ್ತಿಕ ಹಣ ವಿನಿಯೋಗಿಸಿ ತಳಪಾಯದ ಖರ್ಚನ್ನು ಭರಿಸಲಾಯಿತು. ಇದರಲ್ಲಿ ನನ್ನ ಹಾಗೂ ಅಶೋಕಪುರದ ಜನತೆಯ ಪರಿಶ್ರಮ ಇದೆಯೇ ಹೊರತು ದಿವಾಕರ್ ಅವರ ಯಾವುದೇ ಕೊಡುಗೆ ಇರುವುದಿಲ್ಲ. ನನ್ನ ಅಧ್ಯಕ್ಷತೆಯಲ್ಲಿ ಎರಡನೇ ಹಂತದ ಕಾಮಗಾರಿ ಆರಂಭಿಸಿದೆವು. ಹೆಚ್.ಎಲ್.ದಿವಾಕರ್ ಅವರು ಯಾವುದೇ ಸಭೆಗೆ ಬಾರದ ಕಾರಣ ಅವರನ್ನು ಬದಲಾಯಿಸಿ ಮತ್ತೊಬ್ಬರನ್ನು ಕಾರ್ಯದರ್ಶಿಯನ್ನಾಗಿ ಮಾಡಿ ದಿವಾಕರ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈಗಲೂ ಕೂಡ ಅವರು ಯಾವುದೇ ಸಭೆಗಳಿಗೆ ಹಾಜರಾಗುತ್ತಿಲ್ಲ. ಭವನವನ್ನು ಮದುವೆ, ನಾಮಕರಣದಂತಹ ಕಾರ್ಯಕ್ರಮಗಳಿಗೆ ಮಾತ್ರ ಬಾಡಿಗೆಗೆ ನೀಡುತ್ತಿದ್ದೇವೆ. ಸಮಾಜಮುಖಿ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳು, ಅಂಬೇಡ್ಕರ್, ಮಹಾತ್ಮ ಗಾಂಧಿ ಜಯಂತಿ, ಸಂವಿಧಾನ ಕುರಿತು ಕಾರ್ಯಕ್ರಮಗಳು, ಪೌರ ಕಾರ್ಮಿಕರ ಸನ್ಮಾನ, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡಿದ್ದೇವೆ. ಈ ವಿಚಾರದಲ್ಲಿ ದಿವಾಕರ್ ಹಾಗೂ ಅವರ ಸಹಚರರು ಕುತಂತ್ರ ಮಾಡುತ್ತಿದ್ದಾರೆ. ದಲಿತ ಸಂಘರ್ಷ ಸಮಿತಿಯ ಹೆಸರಿನಲ್ಲಿ ನಡೆಸುವ ಸನ್ಮಾನ ಕಾರ್ಯಕ್ರಮಕ್ಕೆ ದಿವಾಕರ್ ನನ್ನ ಬಳಿಯಿಂದ ಹಣ ಪಡೆದಿದ್ದಾರೆ. ಸನ್ಮಾನ ಕಾರ್ಯಕ್ರಮವನ್ನೇ ವ್ಯಾಪಾರವಾಗಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ನಾನು ಹಣ ನೀಡುವುದನ್ನು ನಿಲ್ಲಿಸಿದ್ದೇನೆ. ಇದೇ ಕಾರಣಕ್ಕೆ ಅಂಬೇಡ್ಕರ್ ಭವನದ ಹೆಸರಿನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ದಿವಾಕರ್ ಅವರಿಂದ ದಲಿತರಿಗೆ ಯಾವುದೇ ರೀತಿಯ ಸಹಾಯವಾಗಿಲ್ಲ ಮತ್ತು ದಲಿತರ ನೋವುಗಳಿಗೆ ಅವರು ಸ್ಪಂದಿಸಿಲ್ಲವೆಂದು ಆರೋಪಿಸಿದರು. ಹೆಚ್.ಎಲ್.ದಿವಾಕರ್ ಅವರು ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಲಿತ ರತ್ನ ಪ್ರಶಸ್ತಿ ಕೊಡುತ್ತೇನೆ ಎಂದು ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಲೆಕ್ಕಾಚಾರವನ್ನು ಬಹಿರಂಗ ಪಡಿಸಬೇಕು ಮತ್ತು ಸನ್ಮಾನ ಕಾರ್ಯಕ್ರಮಗಳಿಗಾಗಿ ಸಂಗ್ರಹ ಮಾಡಿರುವ ಹಣದ ಲೆಕ್ಕ ನೀಡಬೇಕು ಎಂದು ಒತ್ತಾಯಿಸಿದರು.
ನ್ಯಾಯಾಲಯದ ಮೂಲಕ ದಿವಾಕರ್ ಅವರ ಆದಾಯದ ಮೂಲಗಳನ್ನು ಬಯಲಿಗೆ ಎಳೆಯುವುದಾಗಿ ಹೆಚ್.ಎಂ.ನಂದಕುಮಾರ್ ತಿಳಿಸಿದರು. ಸಮಿತಿಯ ಉಪಾಧ್ಯಕ್ಷ ಹೆಚ್.ಆರ್.ಮುತ್ತಪ್ಪ ಮಾತನಾಡಿ ಡಾ.ಅಂಬೇಡ್ಕರ್ ಭವನ ಸಮಿತಿಯು ನಿಯಮಾನುಸಾರ ಆಡಳಿತ ನಡೆಸುತ್ತಿದೆ. 2013ರಿಂದ 2024 ರವರೆಗಿನ ಲೆಕ್ಕಪತ್ರಗಳು ಆಡಿಟ್ ಆಗಿದ್ದು, ಎಲ್ಲಾ ದಾಖಲೆಗಳೂ ಸಮರ್ಪಕವಾಗಿವೆ. ದಿವಾಕರ್ ಅವರ ಆರೋಪ ದುರುದ್ದೇಶಪೂರಿತವಾಗಿದೆ ಎಂದರು.
ಸುಮಾರು 52.17 ಲಕ್ಷ ರೂ. ವೆಚ್ಚದಲ್ಲಿ ಡಾ.ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು ಇಲ್ಲಿಯವರೆಗಿನ ಲೆಕ್ಕಪತ್ರಗಳನ್ನು ಮಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಭವನ ಸಮಿತಿಯ ಖಜಾಂಚಿ ಹೆಚ್.ಟಿ.ವೆಂಕಪ್ಪ, ನಿರ್ದೇಶಕರುಗಳಾದ ಹೆಚ್.ಟಿ.ಜಯಪ್ರಕಾಶ್, ಹೆಚ್.ಎಂ.ಜಯರಾಂ ಹಾಗೂ ಹೆಚ್.ಶ್ಯಾಂ ಉಪಸ್ಥಿತರಿದ್ದರು.









