
ಕುಶಾಲನಗರ NEWS DESK ಫೆ.23 : ಕವಿತೆಯನ್ನು ಕೇಳುವ ಸಹೃದಯರ ಕೊರತೆ ಉಂಟಾಗಿರುವುದು ವಿಷಾದನೀಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು. ಬೆಂಗಳೂರಿನ ರಂಗಮಂಡಲ ಹಾಗೂ ಕೊಡಗು ಕವಿ ಬಳಗದ ವತಿಯಿಂದ ಕೂಡ್ಲೂರು ಗ್ರಾಮದ ಪೂರ್ಣಚಂದ್ರ ಕುಟೀರದಲ್ಲಿ ಆಯೋಜಿಸಿದ್ದ ಕೊಡಗು ಕಾವ್ಯಯಾನ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕವಿತೆಗಳು ಜನರಲ್ಲಿ ಪರಸ್ಪರ ಸ್ನೇಹ, ವಿಶ್ವಾಸ ಹಾಗೂ ಸೌಹಾರ್ದತೆಯನ್ನು ಒಡಮೂಡಿಸುತ್ತವೆ. ಮಾಧ್ಯಮಗಳು ಕಾವ್ಯಗಳನ್ನು ಜನರಿಂದ ದೂರ ಮಾಡುತ್ತಿವೆ ಎಂದು ಹೇಳಿದರು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದಾಗಿ ಕಾವ್ಯ ರಂಗದಲ್ಲಿ ಒಂದಷ್ಟು ಚಟುವಟಿಕೆಗಳು ಕಾಣುತ್ತಿವೆ. ಈ ಮೂಲಕ ನಾಡಿನೆಲ್ಲೆಡೆ ಇರುವ ಚುಟುಕು ಕವಿಗಳ ಸಮಾಗಮ ಹಾಗೂ ಸ್ನೇಹ ಸಂಗಮ ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದಿನ ಆಧುನಿಕ ಕಾಲಘಟ್ಟದ ಬದಲಾದ ಪರಿಸ್ಥಿತಿಯಲ್ಲಿ ಆಧುನಿಕ ಕವಿಗಳು ಆಯಾಯ ಪರಿಸರ ಹಾಗೂ ಸಂದರ್ಭಗಳ ಕುರಿತು ರಚಿಸುವ ಕವನಗಳನ್ನು ವಾಚಿಸುವ ಸಂದರ್ಭ ಪರಂಪರೆಯ ಮರೆವು ಆಗದಂತೆ ಎಚ್ಚರ ವಹಿಸಬೇಕು. ಹೊಸ ಕವಿಗಳು ಹಾಗೂ ಕವಿತೆಗಳನ್ನು ಆಸ್ವಾದಿಸುವ ಕೆಲಸವಾಗಬೇಕು ಎಂದು ಮುಕುಂದ ರಾಜ್ ಹೇಳಿದರು. ಕಾವ್ಯ ಸಂಸ್ಕ್ರತಿ ಯಾನದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಕವಿತೆ ಜನಸಾಮಾನ್ಯರ ಧ್ವನಿ. ಅವರ ನೋವು ಹಾಗೂ ನಲಿವಿಗೆ ಸಂಜೀವಿನಿಯಾಗಿದೆ. ಸಾಮಾನ್ಯ ಜನರು ಸೇರಿದಂತೆ ಎಲ್ಲೆಡೆ ದುಡಿವ ಕೂಲಿ ಕಾರ್ಮಿಕರಲ್ಲೂ ಸೊಗಸಾದ ಕವಿತೆಗಳು ಮೂಡಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕವಿ ಹಾಗೂ ಕವಿತೆಗಳಿಗೆ ಸಿಗಬೇಕಾದ ಸೂಕ್ತ ಸ್ಥಾನ ಮಾನ ದೊರಕದಿರುವುದನ್ನು ಮನಗಂಡು ನಾಡಿನಾದ್ಯಂತ ಜನರೆಡೆಗೆ ಕಾವ್ಯ ಎನ್ನುವ ಘೋಷವಾಕ್ಯದೊಂದಿಗೆ ಕವಿ ಕಾವ್ಯ ಸಂಸ್ಕ್ರತಿ ಯಾನ ಕೈಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾವ್ಯ ಯಾನ ಸಂಚರಿಸುತ್ತಿದೆ ಎಂದರು. ಕಾವ್ಯ ಸಂಸ್ಕ್ರತಿ ಯಾನ ದ ಸರ್ವಾಧ್ಯಕ್ಷೆ ಸ್ಮಿತಾ ಅಮೃತರಾಜು, ರಾಮನಗರ ಜಿಲ್ಲೆಯ ಕಾವ್ಯ ಯಾನದ ಸರ್ವಾಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಕೊಡಗು ಜಿಲ್ಲೆಯ ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್, ಹಿರಿಯ ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ, ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ರೋಹಿಣಿ ಶರವಣಕುಮಾರ್, ಮಧು ಆರ್ಯ, ಡಾ.ಟಿ.ಎಸ್..ವಿವೇಕಾನಂದ, ಸಿನಿಮಾ ನಿರ್ದೇಶಕ ರಂಗಸ್ವಾಮಿ, ಆನಂದಕುಮಾರ್, ಉಷಾರಾಣಿ, ಭುವನೇಶ್ವರಿ, ಇದ್ದರು. ಕವಿಗೋಷ್ಠಿಯಲ್ಲಿ ಸುನೀತಾ, ಮಾರುತಿ ದಾಸಣ್ಣನವರ್, ಕೃಪಾ ದೇವರಾಜು, ನಾ.ಕನ್ನಡಿಗ, ಕಿಶೋರ್ ಕುಮಾರ್, ವೈಲೇಶ್, ಸಂಗೀತಾ ರವಿರಾಜ್, ಹಾ.ತಿ.ಜಯಪ್ರಕಾಶ್, ಹೇಮಂತ್ ಪಾರೆರಾ, ಶರ್ಮಿಳಾ ರಮೇಶ್, ರಂಜಿತಾ ಕವಲಪಾರ, ರಾಣಿ ವಸಂತ್, ಲೀಲಾ ಕುಮಾರಿ ತೊಡಿಕಾನ, ಮಾಲಾ ಮೂರ್ತಿ, ರಮ್ಯಾ ಮೂರ್ನಾಡು, ಅನುಶ್ರೀ ಮೊದಲಾದ ಕವಿಗಳು ಕಾವ್ಯ ವಾಚಿಸಿದರು. ಕಾವ್ಯ ಸಂಸ್ಕೃತಿ ಯಾನ ಕೊಡಗು ಜಿಲ್ಲಾ ಸಂಚಾಲಕಿ ಕೃಪಾ ದೇವರಾಜು ಕಾರ್ಯಕ್ರಮ ನಿರೂಪಿಸಿದರು. ಕೂಡ್ಲೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಢಗೀತೆ ಹಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ಬೆಂಗಳೂರಿನಿಂದ ಆಗಮಿಸಿದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಅವರಿಂದ ಕಾವ್ಯ ದೀವಟಿಗೆಯನ್ನು ಕಾವ್ಯ ಯಾನದ ಸರ್ವಾಧ್ಯಕ್ಷೆ ಸ್ಮಿತಾ ಅಮೃತರಾಜು ಸ್ವೀಕರಿಸಿದರು.








