
ಮಡಿಕೇರಿ NEWS DESK ಫೆ.24 : ಲೀಡ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಗರಗಂದೂರು ಗ್ರಾಮದಲ್ಲಿ ಮಹಿಳೆಯರಿಗಾಗಿ ಹಣಕಾಸು ಸಾಕ್ಷರತಾ ಸಪ್ತಾಹ ನಡೆಯಿತು. ಮಹಿಳೆಯರಿಗಾಗಿ ಇರುವ ಮಾಸಿಕ ಯೋಜನೆ ಹಾಗೂ ಉಳಿತಾಯದ ಕುರಿತು ವಿವರಿಸಲಾಯಿತು. ಬ್ಯಾಂಕ್ ಗಳಿಂದ ಸಾಲ ಪಡೆದವರು ನಿಗಧಿತ ದಿನಾಂಕದೊಳಗೆ ಕಂತನ್ನು ಪಾವತಿಸಿ ಕ್ರೆಡಿಟ್ ಸ್ಕೋರ್ ನ್ನು ಕಾಪಾಡಿಕೊಳ್ಳುವಂತೆ ಸಂಪನ್ಮೂಲ ವ್ಯಕ್ತಿಗಳು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖ್ಯಸ್ಥ ಶ್ರೀನಿವಾಸ್ ಅವರು ಬ್ಯಾಂಕ್ ನಲ್ಲಿ ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದು. ಪ್ರತಿ ತಿಂಗಳು ಸಾಲದ ಇಎಂಐನ್ನು ಸರಿಯಾದ ದಿನಾಂಕದೊಳಗೆ ಮರುಪಾವತಿ ಮಾಡುವುದರಿಂದ ಬ್ಯಾಂಕ್ ವ್ಯವಹಾರ ಸುಲಭವಾಗಲಿದೆ ಎಂದರು. ಆರ್ಥಿಕ ಸಾಕ್ಷರತಾ ಸಮಾಲೋಚಕÀ ಹರೀಶ್ ಸಿ.ಜಿ ಮಾತನಾಡಿ ಭವಿಷ್ಯದ ಭದ್ರತೆಗೆ ಮಾಸಿಕ ಕನಿಷ್ಠ ರೂ.500ನ್ನಾದರೂ ಉಳಿತಾಯ ಮಾಡಿದರೆ ಮುಂದೆ ಅದು ದೊಡ್ಡದಾಗಿ ಬೆಳೆದು ನಿಮ್ಮ ಅಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಸಲಹೆ ನೀಡಿದರು. ಮಾಸಿಕ ಬಜೆಟ್ ಕೂಡ ನಿಮ್ಮ ಆದಾಯದ ಒಳಗೆ ಇರಬೇಕು, ಆದಾಯದ ಹಣವನ್ನು ಒಂದೇ ಕಡೆ ಇಡದೆ ಅದನ್ನು ವಿವಿಧೆಡೆ ಉಳಿತಾಯ ಮಾಡಬೇಕು. ಹಣವನ್ನು ವಿನಿಯೋಗ ಮಾಡುವುದರಿಂದ ಆದಾಯದ ಹಣಕ್ಕೆ ಸುರಕ್ಷತೆ ಇರುತ್ತದೆ ಎಂದು ತಿಳಿಸಿದರು. ಮತ್ತೊಬ್ಬ ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ಶ್ಯಾಮಲಾ ಮಾತನಾಡಿ ಸಾಲ ಪಡೆಯುವಾಗ ಸಾಲದ ಉದ್ದೇಶ, ಯೋಜನೆ ತಿಳಿದು ಸಾಲ ಮಾಡಬೇಕು. ಬ್ಯಾಂಕ್ ನಲ್ಲಿ ಸಾಲ ಮರುಪಾವತಿ ಸಹ ಮಾಸಿಕ ನಿಗಧಿತ ದಿನಾಂಕದೊಳಗೆ ಮಾಡಬೇಕು. ಆ ಮೂಲಕ ಕ್ರೆಡಿಟ್ ಸ್ಕೋರ್ ಕಾಪಾಡಿಕೊಂಡರೆ ಬ್ಯಾಂಕ್ ಮತ್ತು ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯಗಳಿಗೆ ಸಹಕಾರಿಯಾಗುತ್ತದೆ ಎಂದರು. ಪ್ರಮುಖರಾದ ಕುಸುಮ, ಪೊನ್ನಮ್ಮ, ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹಣಕಾಸು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









