
ಮಡಿಕೇರಿ ಫೆ.28 NEWS DESK : ಮನುಷ್ಯ ಕೋಟಿ ಕೋಟಿ ಸಂಪಾದಿಸುವುದು ಸಾಧನೆ ಈ ರೀತಿಯ ಸಂಪಾದನೆ ಆತನಿಗೆ ಸಂತೋಷವನ್ನು ನೀಡುತ್ತದೆ. ಆದರೆ ತೃಪ್ತಿ ಬೇಕಾದರೆ ತಾನು ಸಂಪಾದಿಸಿದರಲ್ಲಿ ಸ್ವಲ್ಪ ಸಮಾಜ ಸೇವೆ ಮಾಡಬೇಕು ಎಂದು ವಿರಾಜಪೇಟೆ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರಣವ್ ಎಂ.ಚಿತ್ರ ಬಾನು ಅಭಿಪ್ರಾಯ ವ್ಯಕ್ತಪಡಿಸಿದರು. ಬಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವೇರಿ ಪದವಿ ಕಾಲೇಜಿನ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನು ಎಲ್ಲವನ್ನು ಸಮಾಜದಿಂದ ಸಂಪಾದಿಸುತ್ತಾನೆ. ಈ ರೀತಿ ತಾನು ಸಂಪಾದಿಸಿದ ಸಂಪತ್ತಿನ ಅಲ್ಪ ಭಾಗವನ್ನು ಇತರರಿಗೆ ದಾನ ನೀಡಿದರೆ ಅಥವಾ ಸಮಾಜ ಸೇವೆಗೆ ಬಳಸಿದರೆ ದಾನ ನೀಡಿದವನಿಗೆ ಸಂತೋಷ ಹಾಗೂ ತೃಪ್ತಿಯನ್ನು ತಂದುಕೊಡುತ್ತದೆ ಎಂದರು. ಶಾಲೆಯ ಮುಖ್ಯ ಶಿಕ್ಷಕರಾದ ಸುಜಾತ ಮಾತನಾಡಿ, ಇಂತಹ ಶಿಬಿರಗಳು ನಡೆದಾಗ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಾವು ಕೇವಲ ನಾಯಕರಾದರೆ ಸಾಲದು ನಾಯಕರಲ್ಲಿ ಉತ್ತಮ ನಾಯಕರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನಗೊಳಿಸುತ್ತ ಜೀವನ ಮೌಲ್ಯವನ್ನು ರೂಪಿಸಿಕೊಂಡು ಗುರುಹಿರಿಯರಿಗೆ ತಂದೆ ತಾಯಿಯರಿಗೆ ಹಾಗೂ ಸಮಾಜಕ್ಕೆ ಸಹಕಾರಿಯಾಗಿ ಗೌರವಯುತವಾಗಿ ಬಾಳಬೇಕೆಂದರು. ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯ ತೀತಿಮಾಡ ಲಾಲ ಭೀಮಯ್ಯ ಮಾತನಾಡಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಸೇವಾ ಮನೋಭಾವನೆ ಕೇವಲ ಶಿಬಿರ ಮುಗಿಯುವವರೆಗೆ ಮಾತ್ರ ಇರಬಾರದು ಬದಲಾಗಿ ಜೀವನ ದುದ್ದಕೂ ಈ ಸೇವಾ ಮನೋಭಾವನೆಯನ್ನು ಇಟ್ಟುಕೊಂಡು ಇಲ್ಲಿ ಕಲಿತಂತಹ ಉತ್ತಮ ವಿಚಾರಗಳನ್ನು ಜೀವನದ ವಿವಿಧ ಘಟ್ಟಗಳಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಬೇಕೆಂದರು. ಮದ್ರೀರ ಗಿರೀಶ್ ಗಣಪತಿ ಮಾತನಾಡಿ ಇಂತಹ ಶಿಬಿರಗಳು ನಡೆದಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಶಿಬಿರದಿಂದ ವಿದ್ಯಾರ್ಥಿಗಳು ಹಲವು ರೀತಿಯ ಉತ್ತಮ ವಿಚಾರ ಕಲಿಯಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮಂಡೇಪಂಡ ಎಸ್.ಮುತ್ತಣ್ಣ, ಜೀವನದಲ್ಲಿ ಶಿಸ್ತು ಮುಖ್ಯ ಆರಂಭಿಕ ಹಂತದಿಂದಲೇ ಜೀವನದಲ್ಲಿ ಶಿಸ್ತನ್ನು ರೂಡಿಸಿಕೊಂಡು ಉತ್ತಮವಾದ ಗುರಿಯನಿಟ್ಟುಕೊಂಡು ಅದರೆಡೆ ಸಾಗಿದರೆ ಯಶಸ್ಸು ಕಂಡಿತ ಎಂಬುದಕ್ಕೆ ಕೆ.ನಾರಾಯಣನ್ ಹಾಗೂ ಅಬ್ದುಲ್ ಕಲಾಂರಂತಹ ಮಹನೀಯರ ಜೀವನವೇ ಸಾಕ್ಷಿ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ವೀಣಾ, ಎನ್ಎಸ್ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಸಹ ಶಿಬಿರ ಅಧಿಕಾರಿ ಅನುಪಮಾ, ಸ.ಹಿ ಪ್ರಾ ಶಾಲೆಯ ಸಹ ಶಿಕ್ಷಕಿ ಸುಜೋತಿ ಸುರೇಶ್, ಸೋನಿ ರಜನೀಶ್, ಎಸ್ ಡಿ ಎಂ ಸಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.









