
ಚೆಟ್ಟಳ್ಳಿ NEWS DESK ಮಾ.2 : ಚೆಟ್ಟಳ್ಳಿಯ ಚೇರಳ ಶ್ರೀಭಗವತಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ‘ಪಟ್ಟಣಿ ಹಬ್ಬ’ ದಂದು ಕಲ್ಡಚ ಹೋಗುವ ಸಂಪ್ರದಾಯದಂತೆ ಹೆಣ್ಣು ಮಕ್ಕಳು ದೇವಾಲಯದಿಂದ ಕಳಶದೊಂದಿಗೆ ತೆರಳಿ ಚೌಂಡಿ ಬನದಲ್ಲಿ ಪೂಜೆ ಮಾಡಿದರು. ಒಡ್ಡೋಲಗ ದುಡಿಕೊಟ್ಟ್ ನೊಂದಿಗೆ ದೇವತಕ್ಕರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತಂದು ಮಾಹಾಪೂಜೆ, ಕೊಂಬಾಟ್ ಸೇವೆ ಸಲ್ಲಿಸಲಾಯಿತು. ನಂತರ ದೇವರ ಭಂಡಾರವನ್ನು ದೇವತಕ್ಕರ ಮನೆಯಲ್ಲಿ ಇಡಲಾಯಿತು. ಮಾರನೇ ದಿನ ಊರಿನವರು ಅಯ್ಯಪ್ಪ ದೇವರಬನಕ್ಕೆ ತೆರಳಿ ದೇವರಿಗೆ ಬಲಿಪೂಜೆ ಮಾಡಿ ದೇವರ ಪ್ರಸಾದವನ್ನು ಸ್ವೀಕರಿಸಿದರು. ದೇವಾಲಯಕ್ಕೆ ಬಂದ ಭಕ್ತರು ತೆಂಗಿನಕಾಯಿಗೆ ಗುಂಡುಹೊಡೆಯುವ ಮೂಲಕ ದೇವರಕಟ್ಟು ಮುರಿಯಲಾಯಿತು. ಭಾನುವಾರ ಚೇರಳ ಶ್ರೀಭಗವತಿ ದೇವರ ದೊಡ್ಡಹಬ್ಬ ನಡೆಯಿತು. ಬಿಳಿಕುಪ್ಪಸ ದಟ್ಟಿಯನ್ನು ತೊಟ್ಟ ಊರಿನ ಕೊಡವ ಮತ್ತು ಗೌಡ ಜನಾಂಗದವರು ಕೊಂಗೇಟಿರ ಐನ್ ಮನೆಯಿಂದ ಊರುತಕ್ಕರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಹಾಗೂ ಕೊಂಗೇಟಿರ ಕುಟುಂಬಸ್ಥರನ್ನು ಒಡ್ಡೋಲಗ ದುಡಿಕೊಟ್ಟ್ನೊಂದಿಗೆ ದೇವಾಲಯಕ್ಕೆ ಕರೆ ತಂದರು. ನಂತರ ದೇವತಕ್ಕ ಚೇರಳ ತಮ್ಮಂಡ ಆನಂದ ಅವರ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತಂದು ದೇವಾಲಯದ ವಾರ್ಷಿಕೊತ್ಸವದ ವಿಧಿವಿಧಾನಗಳನ್ನು ಸಂಪ್ರದಾಯಬದ್ಧವಾಗಿ ಪೂಜೆ ಮಾಡಲಾಯಿತು. ಉತ್ಸವದ ಅಂಗವಾಗಿ ಊರಿನವರಿನವರಿಗೆ, ನೆಂಟರಿಷ್ಟರಿಗೆ, ಮಕ್ಕಳಿಗೆ ತೆಂಗಿನಕಾಯಿ ಎಳೆಯುವ ಸ್ಪರ್ಧೆ ನಡೆಯಿತು. ಬಿಳಿಕುಪ್ಪಸದಟ್ಟಿಯನ್ನು ತೊಟ್ಟ ಊರಿನವರು ದೇವರ ನಡೆಗೆ ಬಂದು ಕೊಂಬನ್ನು ಹಿಡಿದು, ಬೊಳಕ್ ಮರದ ಮುಂದೆ ಸಾಲಾಗಿ ನಿಂತು, ದೇವರನ್ನು ಕರೆಯುತ್ತಾ 18 ಬಗೆಯ ಕೊಂಬಾಟ್ ನೃತ್ಯವನ್ನು ಮಾಡಿದರು. ಗ್ರಾಮಸ್ಥರು ಹಾಗೂ ಹರಕೆ ಹೊತ್ತವರು ದೇವರ ನೆಲೆಯಲ್ಲಿ ಭಂಡಾರವನ್ನು ಹಾಕಿ ಶ್ರದ್ಧಾಭಕ್ತಿಯನ್ನು ಮೆರೆದರು. ನೆರೆದಿದ್ದ ಭಕ್ತ ಸಮೂಹಕ್ಕೆ ಅನ್ನ ಸಂತರ್ಪಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. (ಚಿತ್ರ, ವರದಿ : ಪುತ್ತರಿರ ಕರುಣ್ ಕಾಳಯ್ಯ)









