ಸೋಮವಾರಪೇಟೆ ಮಾ.3 NEWS DESK : ಆರೋಗ್ಯವಂತರು ಪ್ರತಿ 3 ತಿಂಗಳಿಗೊಮ್ಮೆ ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನು ಉಳಿಸಬಹುದಾಗಿದೆ ಎಂದು ಮಡಿಕೇರಿ ರಕ್ತನಿಧಿ ಕೇಂದ್ರ ವೈದ್ಯೆ ಸ್ನೇಹಾ ಹೇಳಿದರು. ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಮತ್ತು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ದಾನಿಗಳ ಆರೋಗ್ಯ ತಪಾಸಣೆ ಮಾಡಿ ನಂತರ ಮಾತನಾಡಿದರು. ಆಗಗ್ಗೆ ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಹೃದಯ ಕಾಯಿಲೆಗಳು ಮತ್ತು ಪಾಶ್ರ್ವವಾಯು ಅಪಾಯ ಕಡಿಮೆಯಾಗುತ್ತದೆ. ರಕ್ತದಾನದಿಂದ ರಕ್ತದ ದಪ್ಪ ಕಡಿಮೆಯಾಗಿ ರಕ್ತಪರಿಚಲನೆ ಹೆಚ್ಚಾಗುತ್ತದೆ. ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಹೇಳಿದರು. ರಕ್ತದಾನದ ಸಂದರ್ಭ ಆರೋಗ್ಯ ತಪಾಸಣೆ ಆಗುತ್ತದೆ. ರಕ್ತದಾನಿಗಳಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿದ್ದರೆ, ರಕ್ತನಿಧಿ ಕೇಂದ್ರದಿಂದ ರೋಗದ ಮಾಹಿತಿ ಸಿಗುತ್ತದೆ. ನಂತರ ಚಿಕಿತ್ಸೆ ಪಡೆದುಕೊಂಡು ಅಪಾಯದಿಂದ ಪಾರಾಗಬಹುದು ಎಂದು ಹೇಳಿದರು. ರಕ್ತದಾನದಿಂದ ಅನೇಕ ಪ್ರಯೋಜನಗಳಿದ್ದು, ಕಾರ್ಯಕ್ರಮದಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷೆ ರಶೀದ, ಸದಸ್ಯ ಶಂಕರ್, ಪಿಡಿಒ ಸ್ಮಿತಾ, ರಕ್ತನಿಧಿ ಕೇಂದ್ರದ ಡಾ.ಶಿಫಾ, ಹಿರಿಯ ತಂತ್ರಜ್ಞಾಧಿಕಾರಿ ಪಂಚಲಿಂಗೇಶ್ವರ, ಸಮುದಾಯ ಅರೋಗ್ಯ ಅಧಿಕಾರಿ ಧರಣೇಶ್ ಇದ್ದರು. 20 ಮಂದಿ ರಕ್ತದಾನ ಮಾಡಿದರು. ನೇತ್ರ ತಪಾಸಣಾ ಶಿಬಿರ ನಡೆಯಿತು.











