
ಮಡಿಕೇರಿ ಮಾ.5 NEWS DESK : ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರು ರಚಿಸಿರುವ “ಕಡಲಾಚೆಯ ರಮ್ಯ ನೋಟ ದುಬಾಯಿ” ಪುಸ್ತಕ ಮಂಗಳೂರಿನಲ್ಲಿ ಬಿಡುಗಡೆಗೊಂಡಿತು. ಮಂಗಳೂರಿನ ಪತ್ರಿಕಾ ಭವನದಲ್ಲಿ ಡಾ.ಮಾಲತಿ ಶೆಟ್ಟಿ ಮಾಣೂರ್ ಸಾರಥ್ಯದ ಸಾಹಿತ್ಯಪರವಾದ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆದ 42ನೇ ಸರಣಿ ಕೃತಿ ಲೋಕಾರ್ಪಣೆಯ ಸರಳ ಕಾರ್ಯಕ್ರಮದಲ್ಲಿ “ಕಡಲಾಚೆಯ ರಮ್ಯ ನೋಟ ದುಬಾಯಿ” ಪುಸ್ತಕವನ್ನು ಯು.ಎ.ಇ. ಬಂಟ್ಸ್ ಸಂಘದ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ ಅವರು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು “ಕಡಲಾಚೆಯ ರಮ್ಯ ನೋಟ ದುಬಾಯಿ” ಪುಸ್ತಕ ಅತ್ಯಂತ ವಿಶಿಷ್ಟ ಶೈಲಿಯಲ್ಲಿ ರಚನೆಗೊಂಡಿದ್ದು, ದುಬಾಯಿಯಲ್ಲಿರುವ ವಾಸ್ತು ಶಿಲ್ಪಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅತ್ಯಾಕರ್ಷಕ ವರ್ಣ ಚಿತ್ರದೊಂದಿಗೆ ಓದುಗರ ಮನಮುಟ್ಟುವಲ್ಲಿ ಕೃತಿ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಡಲಾಚೆಯ ರಮ್ಯ ನೋಟ ದುಬಾಯಿ ಕೃತಿಗೆ ಮುನ್ನುಡಿಯನ್ನು ಬರೆದಿರುವ ಡಾ.ಅರುಣ ನಾಗರಾಜ್ ಮಾತನಾಡಿ ಪುಸ್ತಕದಲ್ಲಿರುವ ಲೇಖನಗಳು ಸಂಪೂರ್ಣ ಮಾಹಿತಿಯೊಂದಿಗೆ ಓದುಗರ ಮನ ಗೆಲ್ಲುತ್ತಿದೆ. ಕೈಯಲ್ಲಿ ಈ ಒಂದು ಕೃತಿ ಇದ್ದರೆ ಸಮಗ್ರ ದುಬಾಯಿಯನ್ನು ಸಂಪೂರ್ಣವಾಗಿ ಪ್ರವಾಸ ಮಾಡಿಕೊಂಡು ಬಂದಿರುವ ಅನುಭವಾಗುತ್ತದೆ ಎಂದು ಶ್ಲಾಘಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ ವಿದೇಶದ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಗಣೇಶ್ ರೈ ಅವರ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯರಾದ ಸರ್ವೋತ್ತಮ ಶೆಟ್ಟಿ ಅವರು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಗಣೇಶ್ ರೈ ಅವರು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯದ ಕಲೆ, ಭಾಷೆ, ಸಂಸ್ಕೃತಿಯನ್ನು ಕಳೆದ ಎರಡೂವರೆ ದಶಕಗಳಿಂದ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಶಿಲ್ಪಿಯಾಗಿ, ಚಿತ್ರಕಾರರಾಗಿ, ಕಾರ್ಯಕ್ರಮ ನಿರೂಪಕರಾಗಿ ಸಮಾಜ ಸೇವಕರಾಗಿ, ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಹೊಂದಿರುವ ಗಣೇಶ್ ರೈ ಅವರು ಬರಹಗಾರರಾಗಿ ಅನೇಕ ಲೇಖನಗಳನ್ನು ಬರೆದಿದ್ದಾರೆ, ನೂರಾರು ಗಣ್ಯರ ಸಂದರ್ಶನ ಮಾಡಿದ್ದಾರೆ. ಇದೀಗ ದುಬಾಯಿಯ ಸಂಪೂರ್ಣ ಚಿತ್ರಣವಿರುವ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿಯನ್ನು ಪ್ರಕಟಿಸಿರುವುದು ದುಬಾಯಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಸಂದಿರುವ ಗೌರವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರ ಶಿಲ್ಪ ಕಲಾವಿದ ಹಾಗೂ ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿಯ ಲೇಖಕ ಗಣೇಶ್ ರೈ ಮಾತನಾಡಿ ಮೂಲತ: ಕೊಡಗಿನವನಾದ ನಾನು ಪ್ರಸ್ತುತ ದುಬಾಯಿಯಲ್ಲಿ ನೆಲೆಸಿದ್ದು, ದುಬಾಯಿಯನ್ನು ಪರಿಚಯಿಸುವ ಹಲವು ದಿನಗಳ ನನ್ನ ಕನಸು ಈ ಕೃತಿಯ ಮೂಲಕ ನನಸಾಗಿದೆ ಎಂದರು. ನನ್ನ ಲೇಖನಗಳನ್ನು ಪ್ರಕಟಿಸಿ ಸದಾ ಪ್ರೋತ್ಸಾಹ ನೀಡುತ್ತಿರುವ ಮಾಧ್ಯಮಗಳು ಹಾಗೂ ಕಲೆಗೆ ಸ್ಫೂರ್ತಿ ತುಂಬುತ್ತಿರುವ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ‘ಕಡಲಾಚೆಯ ರಮ್ಯ ನೋಟ ದುಬಾಯಿ’ ಕೃತಿಯ ಮೊದಲ ಪ್ರತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಗೆ ಅರ್ಪಣೆ ಮಾಡಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದ ಪಡೆದಿದ್ದೇನೆ. ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ.ಮೋಹನ್ ಆಳ್ವ ಅವರಿಗೂ ಪುಸ್ತಕವನ್ನು ತಲುಪಿಸಿ ಶುಭ ಸಂದೇಶವನ್ನು ಪಡೆದುಕೊಂಡಿರುವುದಾಗಿ ಗಣೇಶ್ ರೈ ತಿಳಿಸಿದರು. ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣದಲ್ಲಿ ಕೃತಿಯ ಕುರಿತು ಮಾಹಿತಿ ನೀಡಿದರು. ಸುರೇಖಾ ಯಳವಾರ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.









