
ಮಡಿಕೇರಿ ಮಾ.6 NEWS DESK : ಕೊಡಗು ವಿಶ್ವ ವಿದ್ಯಾನಿಲಯವನ್ನು ರದ್ದುಗೊಳಿಸಬಾರದು, ಸಿ ಮತ್ತು ಡಿ ಭೂಮಿಯ ಗೊಂದಲ ನಿವಾರಿಸಬೇಕು, ಪರಿಶಿಷ್ಟರ ಅನುದಾನವನ್ನು ಉಚಿತ ಭಾಗ್ಯಗಳಿಗೆ ಬಳಸಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದೆ. ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಧರಣಿ ಸತ್ಯಾಗ್ರಹ ಆರಂಭಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಮೂರು ಪ್ರಮುಖ ಬೇಡಿಕೆಗಳು ಸೇರಿದಂತೆ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ತನ್ನ ಬಜೆಟ್ ಅಧಿವೇಶನದಲ್ಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕೊಡಗು ವಿವಿ ಎನ್ನುವುದು ಒಂದೆರಡು ದಿನಗಳಲ್ಲಿ ದೊರಕಿದ್ದಲ್ಲ. ಕಳೆದ ಎರಡು ದಶಕಗಳ ನಿರಂತರ ಪ್ರಯತ್ನಗಳಿಂದ, ಜಿಲ್ಲೆಯ ಬಡ ಮಕ್ಕಳ ಉನ್ನತ ವ್ಯಾಸಂಗದ ಕನಸನ್ನು ನನಸುಗೊಳಿಸುವ ನಿಟ್ಟಿನಲ್ಲಿ ದೊರೆತ ಫಲವೇ ಆಗಿದೆ. ಯಾವುದೇ ಕಾರಣಕ್ಕೂ ಕೊಡಗು ವಿವಿಯನ್ನು ರದ್ದುಗೊಳಿಸಲು ಬಿಡುವುದಿಲ್ಲ ಎಂದರು. ಅಧಿವೇಶನದಲ್ಲಿ ಸರ್ಕಾರ ಕೊಡಗಿನ ಸಮಸ್ಯೆಗಳಿಗೆ ಪರಿಹಾರ ಘೋಷಿಸಬೇಕು, ಇಲ್ಲವಾದಲ್ಲಿ ಮಾ.11 ರಂದು ಕೊಡಗು ಬಂದ್ ಗೆ ಕರೆ ಕೊಡಲು ನಿರ್ಧರಿಸಲಾಗಿದೆ. ಇದಕ್ಕೆ ಸರ್ಕಾರ ಜಗ್ಗದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು. ಭಿಕ್ಷೆ ಬೇಡಿಯಾದರು ಕೊಡಗು ವಿವಿಯನ್ನು ನಡೆಸುತ್ತೇವೆ. ಕೊಡಗು ವಿವಿಯನ್ನು ಒಂದೊಮ್ಮೆ ಮುಚ್ಚಲು ಬಿಟ್ಟರೆ ಮುಂದಿನ ದಿನಗಳಲ್ಲಿ ಈ ಸರ್ಕಾರ ಕೊಡಗಿನಲ್ಲಿರುವ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು, ಸೈನಿಕ ಶಾಲೆಗಳನ್ನು ಮುಚ್ಚಿ ಬಿಡಬಹುದೆಂದು ಆರೋಪಿಸಿದರು. ಕೊಡಗಿನ ಸಿ ಅಂಡ್ ಡಿ ಜಮೀನಿನಲ್ಲಿ ಬಡ ಮಂದಿ ಸಣ್ಣ ಪುಟ್ಟ ಕೃಷಿ ಚಟುವಟಿಕೆಯೊಂದಿಗೆ, ಮನೆಗಳನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಸಿ ಮತ್ತು ಡಿ ಪ್ರದೇಶವನ್ನು 1991-92 ರಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಸಂದರ್ಭ, ಅಗತ್ಯ ಸಂದರ್ಭಗಳಲ್ಲಿ ಇದನ್ನು ಮರಳಿ ಪಡೆಯುವ ನಿಬಂಧನೆಯನ್ನು ಹಾಕಲಾಗಿದೆ. ಹೀಗಿದ್ದೂ ಇದೀಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಕಂದಾಯ ಇಲಾಖೆಯನ್ನು ಕಡೆಗಣಿಸಿ, ಸಿ ಮತ್ತು ಡಿ ಜಮೀನನ್ನು ಅರಣ್ಯಕ್ಕೆ ಒಳಪಡಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಖಂಡನೀಯವೆಂದು ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು. ಹವಾಮಾನ ವೈಫರೀತ್ಯಗಳಿಂದ ಕೊಡಗಿನ ಕಾಫಿ ಬೆಳೆಗಾರ ಫಸಲು ನಷ್ಟಕ್ಕೆ ಒಳಗಾಗಿದ್ದರು ಸರ್ಕಾರ ಪರಿಹಾರ ಒದಗಿಸಿಲ್ಲ. ಕೊಡಗನ್ನು ಸರ್ಕಾರ ಕಡೆಗಣಿಸಿದೆಯೆಂದು ಟೀಕಿಸಿದ ಅವರು, ಬೇಡಿಕೆಗಳನ್ನು ಪರಿಗಣಿಸದಿದ್ದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಕೊಡಗು ವಿವಿ ನಮ್ಮ ಸ್ವಾಭಿಮಾನದ ಹೆಗ್ಗುರುತಾಗಿದ್ದು, ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು. ಈ ಸಮಸ್ಯೆಗೆ ಮುಖ್ಯಮಂತ್ರಿಗಳು ಅಧಿವೇಶನದಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಪರಶಿಷ್ಟರಿಗೆ ಮೀಸಲಾದ ಹಣವನ್ನು ಉಚಿತ ಭಾಗ್ಯಗಳಿಗೆ ಬಳಸಲಾಗಿದ್ದು, ಇದನ್ನು ಪರಿಶಿಷ್ಟರ ಕಲ್ಯಾಣಕ್ಕಾಗಿಯೇ ಬಳಸಬೇಕು, ಸಿ ಮತ್ತು ಡಿ ಜಾಗವನ್ನು ಅರಣ್ಯವೆಂದು ಪರಿವರ್ತಿಸುವ ಪ್ರಯತ್ನವನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲೀರ ಚಲನ್, ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ಪಕ್ಷದ ಮುಖಂಡರಾದ ಕೋಡಿ ಪೊನ್ನಪ್ಪ, ಶಾಂತೆಯಂಡ ರವಿ ಕುಶಾಲಪ್ಪ, ಸುನೀಲ್ ಸುಬ್ರಮಣಿ, ತೇಲಪಂಡ ಶಿವಕುಮಾರ್ ನಾಣಯ್ಯ, ಕಾಂಗೀರ ಸತೀಶ್, ಕನ್ನಂಡ ಸಂಪತ್, ಕಾಂತಿ ಸತೀಶ್, ಅನಿತಾ ಪೂವಯ್ಯ, ಲೋಕೇಶ್ವರಿ ಗೋಪಾಲ್, ಬಿ.ಕೆ.ಜಗದೀಶ್, ಜಿ.ಎಂ.ಸತೀಶ್ ಪೈ, ಡೀನ್ ಬೋಪಣ್ಣ, ಪಿ.ಎಂ.ರವಿ, ಬಿ.ಬಿ.ಶಿವಪ್ಪ, ಬಿ.ಎ.ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿಯ ಧರಣಿ ಸತ್ಯಾಗ್ರಹ ಮಾ.7ರ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ.









