ನಾಪೋಕ್ಲು ಮಾ.10 NEWS DESK : ಚೇರಂಬಾಣೆ, ಕಾರುಗುಂದ ಗೌಡ ಸಮಾಜದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ, ಮಹಿಳಾ ದಿನಾಚರಣೆಯನ್ನು ಇದೇ ಮೊದಲ ಬಾರಿಗೆ ಸಮಾಜದ ವತಿಯಿಂದ ಆಯೋಜಿಸಿದ್ದು, ಸಮಾಜದ ಸರ್ವತೋಮುಖ ಬೆಳವಣಿಗೆಗೆ ಮಹಿಳೆಯರು ನೀಡುತ್ತಿರುವ ಸಹಕಾರವನ್ನು ಸ್ಮರಿಸಿಕೊಂಡರು. ಚೇರಂಬಾಣೆ ಗೌಡ ಸಮಾಜ ಲೋಕಾರ್ಪಣೆಗೊಂಡು ಎರಡು ವರ್ಷ ಕಳೆದಿದ್ದರೂ ಇದರಲ್ಲಿ ಯಾವುದೇ ಉಪಸಮಿತಿಗಳು ಇರುವುದಿಲ್ಲ ಇನ್ನು ಮುಂದೆ ಮಹಿಳಾ ಒಕ್ಕೂಟ ಹಾಗೂ ಯುವ ಒಕ್ಕೂಟ ರಚನೆಯಾದಲ್ಲಿ ಸಮಾಜಕ್ಕೆ ಇನ್ನಷ್ಟು ಬಲ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಮಹಿಳೆಯರ ಸಾಧನೆಯನ್ನು ಗುರುತಿಸುವ ದಿನ ವಿಶ್ವ ಮಹಿಳಾ ದಿನ ತೊಟ್ಟಿಲ ತೂಗುವ ಕೈ ದೇಶವನ್ನಾಳುವುದು ಎನ್ನುವ ಮಾತಿಗೆ ಉದಾಹರಣೆಯಂತೆ ಇಂದು ದೇಶದ ಅತ್ಯುನ್ನತ ಪದವಿಯಲ್ಲಿ ಮಹಿಳೆಗೆ ಸ್ಥಾನಮಾನ ದೊರೆತಿರುವುದು ಸಾಕ್ಷಿಯಾಗಿದೆ. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತನ್ನ ಚಾಪು ಮೂಡಿಸಿ ಪುರುಷ ಪ್ರಧಾನ ಸಮಾಜದಲ್ಲಿ ಪ್ರತಿ ಪುರುಷನ ಹಿಂದೆ ನೆರಳಾಗಿ ಮಹಿಳೆ ಪ್ರತಿಯೊಂದು ಹಂತದಲ್ಲೂ ತನ್ನ ನಿಲುವನ್ನು ತೋರಿಸುತ್ತಿದ್ದಾಳೆ. ಹಾಗಾಗಿ ಸನ್ಮಾನ ಪ್ರಶಸ್ತಿ ಪುರಸ್ಕಾರಗಳು ಹೆಚ್ಚಿನ ಪಾಲು ಮಹಿಳೆಯದ್ದೇ ಆಗುತ್ತಿವೆ. ಸ್ತ್ರೀ ಯನ್ನು ಕವಿ ನದಿ, ಪರಿಸರ, ಹೊನ್ನು, ಮಣ್ಣಿಗೆ ಹೋಲಿಸಿದ್ದಾರೆ. ಆದ್ದರಿಂದ ಹೆಣ್ಣಿಲ್ಲದೆ ವಿಶ್ವ ನಶ್ವರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ ಮಾತನಾಡಿ, ಮೂರು ವರ್ಷಗಳಿಂದ ಈ ಭಾಗದಲ್ಲಿ ಮಹಿಳಾ ಒಕ್ಕೂಟ ರಚನೆ ಯಾಗಬೇಕೆಂದು ಆಲೋಚಿಸಿದ್ದು, ಇಂದು ಸದವಕಾಶ ಒದಗಿ ಬಂದಿದೆ. ಮಹಿಳಾ ಒಕ್ಕೂಟ ರಚನೆಯಾದಲ್ಲಿ ಸಮಾಜದ ಬಲ ಹೆಚ್ಚುತ್ತದೆ ಹಾಗೂ ಸಂಘಟನೆಯು ಉತ್ತಮವಾಗುತ್ತದೆ ಎಂದು ಕಿವಿಮಾತು ಹೇಳಿದರು ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಮಾತನಾಡಿ, ಮಹಿಳಾ ದಿನಾಚರಣೆಯ ಶುಭ ಸಂದರ್ಭದಲ್ಲಿ ಸಮಾಜದ ಉಪಸಮಿತಿಯಂತೆ ಮಹಿಳಾ ಒಕ್ಕೂಟ ರಚನೆಯಾಗಿರುವುದು ಅಭಿವೃದ್ಧಿಯ ಸಂಕೇತ ಎಂದು ನೂತನ ಸಮಿತಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗೌಡ ಸಮಾಜದ ನಿರ್ದೇಶಕರಾದ ನೆಯ್ಯಣಿ ಹೇಮಲತಾ ತಾರೆಂದ್ರ, ಕೊಡಗನ ತೀರ್ಥ ಪ್ರಸಾದ್, ಎಡಿಕೇರಿ ಪ್ರವೀಣ್, ಹಿರಿಯರಾದ ಬೈಮನ ವಿಜಯಲಕ್ಷ್ಮಿ ಸೇರಿದಂತೆ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾಜದ ಕಾರ್ಯದರ್ಶಿ ಚಂದ್ರಪ್ರಕಾಶ್ ಸ್ವಾಗತಿಸಿ ನೂತನ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಸರ್ವರನ್ನು ವಂದಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವರದಿ : ದುಗ್ಗಳ ಸದಾನಂದ











