


ಕುಶಾಲನಗರ ಮಾ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಸೌಂದರ್ಯವರ್ಧಕ ತರಬೇತಿ ಶಿಬಿರ ನಡೆಯಿತು. ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ವ್ಯಾಪ್ತಿಯ ಕಂಪ್ಲಾಪುರದಲ್ಲಿ ನಡೆದ ಎರಡು ತಿಂಗಳ ಅವಧಿಯ ತರಬೇತಿ ಶಿಬಿರದಲ್ಲಿ 12 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು. ಪತ್ರಕರ್ತೆ ಹಾಗೂ ಸೌಂದರ್ಯ ತಜ್ಞರಾದ ವನಿತಾ ಚಂದ್ರಮೋಹನ್ ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಕೇಶ ವಿನ್ಯಾಸ, ಚರ್ಮದ ಸುರಕ್ಷತೆ, ಫೇಶಿಯಲ್, ಹೇರ್ ಸ್ಟೈಲ್ ಆಯಿಲ್ ಮಸಾಜ್, ವ್ಯಾಕ್ಸಿಂಗ್, ಐ ಬ್ರೋ ಸೇರಿದಂತೆ ವ್ಯಕ್ತಿತ್ವ ವಿಕಸನ ಮತ್ತಿತರ ವಿಷಯಗಳ ಬಗ್ಗೆ ವಿಶೇಷ ತರಗತಿಗಳ ಮೂಲಕ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ತರಬೇತಿ ಕಾರ್ಯಕ್ರಮದ ಪ್ರಯೋಜನಗಳನ್ನು ಹಾಗೂ ಹೆಚ್ಚಿನ ಜ್ಞಾನ ಪಡೆಯುವ ಮೂಲಕ ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವಂತೆ ಶುಭ ಹಾರೈಸಿದರು.