


ಮಡಿಕೇರಿ ಮಾ.14 NEWS DESK : ರಾಜ್ಯದಲ್ಲಿ ಬಲಿಜ ಸಮಾಜಕ್ಕೆ ಈ ಹಿಂದೆ 2ಎ ಹಿಂದುಳಿದ ವರ್ಗದಡಿ ಮೀಸಲಾತಿ ದೊರೆಯುತ್ತಿದ್ದು, ಈಗ 3ಬಿ ವ್ಯಾಪ್ತಿಗೆ ಸೇರಿಸಿ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ತೊಂದರೆಯಾಗಿದ್ದು, ಈ ಮೊದಲು ಇದ್ದಂತೆ ಬಲಿಜ ಸಮಾಜವನ್ನು 2ಎ ಗೆ ಸೇರಿಸುವಂತಾಗಬೇಕು ಎಂದು ನಿವೃತ್ತ ಅಧಿಕಾರಿ ಗಣೇಶ್ ನಾಯ್ಡು ಮನವಿ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ(ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಲಿಜ ಸಮಾಜವು ಹಿಂದುಳಿದ ವರ್ಗಕ್ಕೆ ಬರಲಿದ್ದು, ಬಳೆ ಮಾರುವುದು ಪ್ರಮುಖ ಕಸುಬಾಗಿದೆ. ಹಿಂದೆ ಬಳೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ಗಣೇಶ್ ನಾಯ್ಡು ತಿಳಿಸಿದರು. ಕೈವಾರ ತಾತಯ್ಯ ಅವರ ತತ್ವಗಳು, ಸಂದೇಶಗಳನ್ನು ಯುವ ಜನರು ತಿಳಿದುಕೊಳ್ಳುವಂತಾಗಬೇಕು. ಬಳೆ ಮಾರುವುದು ಕನಿಷ್ಠ ಕೆಲಸವಲ್ಲ. ಸ್ವ ಉದ್ಯೋಗ ಮಾಡುವಲ್ಲಿ ಬಲಿಜರು ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಕೈವಾರ ತಾತಯ್ಯ ಅವರು ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ್ದಾರೆ. ಕಾಲ ಜ್ಞಾನಿಯಾಗಿ ಎಲ್ಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು. ಸಮಕಾಲೀನ ಬದುಕಿನಲ್ಲಿ ಕೈವಾರ ತಾತಯ್ಯ ಅವರ ಜೀವನ ಚರಿತ್ರೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಸಮಾಜದ ಅಭಿವೃದ್ಧಿಗೆ ಕೈವಾರ ತಾತಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದರು. ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ರಾಜ್ಯದ ಬಲಿಜ ಮುಖಂಡರು ಹಾಗೂ ಕೊಡಗು ಜಿಲ್ಲೆಯ ಬಲಿಜ ಸಮಾಜದ ಪ್ರಮುಖರೊಂದಿಗೆ ಚರ್ಚಿಸಿ ಕಾಲಜ್ಞಾನಿ ಯೋಗಿ ನಾರಾಯಣ ಯತೀಂದ್ರರ 300 ನೇ ಅದ್ಧೂರಿ ರಥೋತ್ಸವ ಹಮ್ಮಿಕೊಳ್ಳಲಾಗುವುದು ಎಂದರು. ಕೊಡಗು ಜಿಲ್ಲೆಯಲ್ಲಿ 8 ಸಾವಿರ ಕ್ಕೂ ಅಧಿಕ ಬಲಿಜ ಜನಾಂಗವಿದ್ದು, ಮುಂದಿನ ವರ್ಷ ಮಡಿಕೇರಿಯಲ್ಲಿ ಸುಮಾರು 3 ಸಾವಿರ ಕ್ಕೂ ಅಧಿಕ ಬಲಿಜ ಜನಾಂಗ ಸಂಘಟಿಸಿ ಅದ್ಧೂರಿ ರಥೋತ್ಸವ, ಸಾಂಸ್ಕೃತಿಕ ಮೆರವಣಿಗೆಯನ್ನು ಸಮಾಜದ ಮುಖಂಡರ ಸಹಕಾರದೊಂದಿಗೆ ಆಯೋಜಿಸಲಾಗುವುದು ಎಂದು ಹೇಳಿದರು. ಕೈವಾರ ತಾತಯ್ಯ ಜಯಂತಿ ಸರ್ಕಾರಿ ಆಚರಣೆಯಾಗಿ ಘೋಷಣೆಯಾದ ನಂತರ ಹೆಚ್ಚಿನ ಜನರಲ್ಲಿ ತಾತಯ್ಯ ಅವರ ಕಾಲಜ್ಞಾನ ಅರಿತುಕೊಳ್ಳಲು ಉತ್ಸಾಹ ಕಂಡುಬಂದಿದೆ. ಇಂದು ಕೊಡಗಿನ ವಿವಿಧ ಭಾಗದಲ್ಲಿ ಕೈವಾರ ತಾತಯ್ಯ ಜಯಂತಿಯನ್ನು ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಬಲಿಜ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಟಿ.ಕೆ.ಮೀನಾಕ್ಷಿ ಕೇಶವ ಅವರು ಮಾತನಾಡಿ ಮಂಗಳ ಸೂತ್ರದಲ್ಲಿ ಕುಂಕುಮ ಅರಿಶಿನ, ಬಳೆ ಪ್ರಮುಖವಾಗಿದ್ದು, ಬಲಿಜ ಜನಾಂಗದವರು ಬಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮಾಜದ ಅಭಿವೃದ್ಧಿಗೆ ಪಣ ತೊಡಬೇಕಿದೆ ಎಂದರು. ಡಿಡಿಪಿಐ ಕಚೇರಿಯ ಉಪ ಯೋಜನಾ ಸಮನ್ವಯಾಧಿಕಾರಿ ಕೃಷ್ಣಪ್ಪ ಅವರು ಕೈವಾರ ತಾತಯ್ಯ ಅವರ ಕುರಿತು ಮಾತನಾಡಿದರು. ಸಮಾಜದ ಪ್ರಮುಖರಾದ ಸುಮಾ ಟಿ.ಎಸ್. ಅವರು ಮಾತನಾಡಿ ಬಳೆ ಮಾರುವುದು ಬಲಿಜ ಸಮಾಜದ ಕುಲ ಕಸುಬಾಗಿದೆ. ಬಳೆ ವ್ಯಾಪಾರದಲ್ಲಿ ತೊಡಗಿಸಿಕೊಂಡು ಶ್ರಮಪಟ್ಟಿದ್ದಾರೆ ಎಂದರು. ನಾರಾಯಣ ಪೆರಾಜೆ, ಟಿ.ಎಸ್.ಗಾಯತ್ರಿ ಅವರು ಇದೇ ಸಂದರ್ಭದಲ್ಲಿ ಕವನ ಹಾಗೂ ಗೀತಾಗಾಯನ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್, ಮಣಜೂರು ಮಂಜುನಾಥ್, ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಇತರರು ಇದ್ದರು.