
ಮಡಿಕೇರಿ ಜು.8 NEWS DESK : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.,ಮಡಿಕೇರಿ ಹಾಗೂ ಸಹಕಾರ ಇಲಾಖೆ, ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ವಿತರಣೆ ಮಾಡಲಾಯಿತು. ನಗರದ ಬಾಲಭವನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಪಿ.ಯು.ರಾಬಿನ್ ದೇವಯ್ಯ, ಕೃಷಿ ಪ್ರಧಾನ ದೇಶದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಸದೃಡಗೊಳಿಸಲು ಹಾಗೂ ಸಹಕಾರ ಕ್ಷೇತ್ರವನ್ನು ಬಲವರ್ಧನೆಗೊಳಿಸಬೇಕೆಂಬ ಉದ್ದೇಶದಿಂದ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ಇಂದಿಗೆ 5 ವರ್ಷ ಪೂರೈಸಿದೆ. ಒಂದು ವಾರಗಳ ಕಾಲ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿ ನೀಡಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಸಹ ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು. ರೈತರ ಸಮಾವೇಶ, ಪರಿಸರ ಸಂರಕ್ಷಣೆಗಾಗಿ ಸಸಿ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸಹಕಾರ ಅರಿವು, ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಹಸುಗಳ ಆರೋಗ್ಯ ತಪಾಸಣೆ ಮತ್ತು ಬಂಜೆತನ ನಿವಾರಣಾ ಶಿಬಿರವನ್ನು ಈಗಾಗಲೇ ಯಶಸ್ವಿಯಾಗಿ ಏರ್ಪಡಿಸಿದ್ದು, ಇಂದು ಕೊನೆಯ ದಿನವಾದ ಮಕ್ಕಳಿಗೆ ನಮ್ಮ ಅಳಿಲು ಸೇವೆಯೆಂಬಂತೆ ಅಗತ್ಯ ಪರಿಕರಗಳ ವಿತರಣೆಯನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಕೊಡುಗೆ ಅಪಾರವಿದೆ. ಈ ಯೋಜನೆಯ ಕುರಿತು ಬ್ಯಾಂಕ್ ಅಧ್ಯಕ್ಷರಾದ ಶ್ರೀ ಬಾಂಡ್ ಗಣಪತಿರವರಲ್ಲಿ ಚರ್ಚಿಸಿದಾಗ ಅವರು ಪೂರಕವಾಗಿ ಸ್ಪಂದಿಸಿ ಕೊಡುಗೆಗಳನ್ನು ನೀಡಲು ತಕ್ಷಣಕ್ಕೆ ಸೂಚಿಸಿ ವ್ಯವಸ್ಥೆಯನ್ನು ಮಾಡಲಾಯಿತು. ಅಂತೆಯೆ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಸಹ ವಿದ್ಯಾಥಿಗಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಇಂದು ವಿದ್ಯಾಥಿಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೂಲಿ ಕೆಲಸ ಮಾಡುವ ಮಕ್ಕಳು ಸಹ ಇಂದು ಉನ್ನತ ಸ್ಥಾನಕ್ಕೇರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ರೀತಿಯಲ್ಲಿ ನೀವು ಸಹ ಯಾವುದೇ ಕುಂದು ಕೊರತೆಗಳ ಕುರಿತು ಯೋಚಿಸದೆ ಶೈಕ್ಷಣಿಕವಾಗಿ ಸಾಧಿಸುವ ಛಲದೊಂದಿಗೆ ಮುಂದುವರೆಯಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಮಡಿಕೇರಿ ಭಾಲಭವನದ ಅಧ್ಯಕ್ಷರಾದ ರವೀಂದ್ರ ರೈರವರು, ವಿದ್ಯಾರ್ಥಿಗಳ ಅಗತ್ಯತೆಗಳ ಕುರಿತು ನಾವು ಆಗಾಗ್ಗೆ ಸಮಾಲೋಚನೆ ನಡೆಸುತ್ತಿರುತ್ತೇವೆ. ದಾನಿಗಳಿದ್ದಲ್ಲಿ ಅವರುಗಳಿಂದ ವಿದ್ಯಾರ್ಥಿಗಳಿಗೆ ನೆರವು ಕೊಡಿಸುವಲ್ಲಿ ಶ್ರಮಿಸಲಾಗುತ್ತದೆ. ಅಂತೆಯೇ ನಮ್ಮ ಆಡಳಿತ ಮಂಡಳಿಯವರು ವಿದ್ಯಾಥಿಗಳಿಗೆ ನೆರವಾಗಲೆಂದು ಸದಾ ಸಿದ್ದರಾಗಿರುತ್ತೇವೆ. ಅಂತೆಯೇ ಪ್ರಸ್ತುತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ವಿದ್ಯಾರ್ಥಿಗಳಿಗೆ ನೆರವು ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ. ಬೆಳ್ಳಿಯಪ್ಪ ಮಾತನಾಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸ್ಥಾಪನೆಯಾಗಿ 105 ವರ್ಷಗಳನ್ನು ಪೂರೈಸಿದ್ದು ಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಠೇವಣಿ ಸಂಗ್ರಹಣೆ, ಕಡಿಮೆ ಎನ್.ಪಿ.ಎ., ಸಾಲ ವಿತರಣೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿದೆ. ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ಕಡೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು ಮುಂದಕ್ಕೆ ಉಜ್ವಲ ಭವಿಷ್ಯವಿದೆ ಎಂದರು. ವಾಹನಗಳಿಗೆ ಬಳಸುವ ಎಥೆನಾಲ್ ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳು ನೆರವಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇಂದು ವಿದ್ಯಾರ್ಥಿಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸುವಲ್ಲಿ ಅಧ್ಯಕ್ಷರ ಪಾತ್ರ ಮಹತ್ತರವಾಗಿದೆ. ಅಧ್ಯಕ್ಷರು ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಸ್ಥಾಪನೆಯ 5 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಆಚರಿಸುತ್ತಿರುವ ಸಹಕಾರ ಸಪ್ತಾಹ ಮಾದರಿ ಕಾರ್ಯಕ್ರಮಕ್ಕೆ ಒಂದು ದಿನವನ್ನು ತಮ್ಮ ಸಹಯೋಗದೊಂದಿಗೆ ಆಚರಿಸಲು ಯೋಜನೆ ರೂಪಿಸುವಂತೆ ಯೂನಿಯನ್ ಅಧ್ಯಕ್ಷರಲ್ಲಿ ಚರ್ಚಿಸಿ ಇಂತಹ ಒಂದು ಉತ್ತಮ ಹಾಗೂ ವಿದ್ಯಾಥಿಗಳಿಗೆ ನೆರವು ನೀಡುವ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ತರುವ ಮಹತ್ತರ ಕಾರ್ಯವನ್ನು ಕೈಗೊಂಡಿರುತ್ತಾರೆಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಶೈಲಜ, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ಡಿ.ಸಿ.ಸಿ. ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕರಾದ ಬೋಜಮ್ಮ, ಬಾಲಭವನದ ಗೌರವ ಕಾರ್ಯದರ್ಶಿ ನಮಿತಾ ರೈ, ರೋಟರಿ ಮಾಜಿ ಅಧ್ಯಕ್ಷರಾದ ಲಲಿತಾ ರಾಘವನ್, ಉಪಸ್ಥಿತರಿದ್ದರು. ಯೂನಿಯನ್ ಸಿಬ್ಬಂದಿ ಬಿ.ಸಿ. ಅರುಣ್ ಕುಮಾರ್, ಬಾಲಭವನದ ಸೌಮ್ಯ ಹಾಗೂ ಬಾಲಕರ ಬಾಲಮಂದಿರದ ಸೂರಜ್ ಕಾರ್ಯಕ್ರಮಕ್ಕೆ ಸಹಕರಿಸಿದರು.









