

ಗೋಣಿಕೊಪ್ಪಲು ಮಾ.15 NEWS DESK : ಹಲವು ಮಹಾಪುರುಷರ ಆಚರಣೆಯನ್ನು ರಾಜ್ಯ ಸರ್ಕಾರ ಮಾಡುತ್ತಾ ಬಂದಿದ್ದು, ಯಾವುದೇ ಪುಣ್ಯ ಪುರುಷರ ಆಚರಣೆ ಒಂದು ಸಮುದಾಯಕ್ಕೆ ಮೀಸಲಾಗದೆ ಎಲ್ಲ ಸಮುದಾಯ ಒಗ್ಗೂಡಿ ಆಚರಿಸುವಂತಾಗಬೇಕು ಎಂದು ಪೊನ್ನಂಪೇಟೆ ತಾಲ್ಲೂಕು ತಹಶೀಲ್ಧಾರ್ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು. ಪೊನ್ನಂಪೇಟೆ ತಹಶೀಲ್ಧಾರ್ ಕಚೇರಿಯಲ್ಲಿ ಕೊಡಗು ಬಲಿಜ ಸಮಾಜ ನೇತೃತ್ವದಲ್ಲಿ ನಡೆದ ಶ್ರೀ ಯೋಗಿ ನಾರೇಯಣ ಯತೀಂದ್ರರ 299ನೇ ಜಯಂತಿಯನ್ನು ಕೈವಾರ ತಾತಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮಹಾಪುರುಷರ ಆದರ್ಶಗಳನ್ನು ನಾವು ಪಾಲಿಸಬೇಕು. ಕೈವಾರ ತಾತಯ್ಯ ಸುಮಾರು 200 ವರ್ಷಗಳ ಹಿಂದೆ ನುಡಿದ ಕಾಲಜ್ಞಾನ ಭವಿಷ್ಯ ಇಂದು ನಿಜವಾಗುತ್ತಿದೆ. ದೈವ ಬಲದಿಂದ ಯಾವುದೇ ಕಾರ್ಯ ಮಾಡಿದರೂ ಅದು ಯಶಸ್ವಿಯಾಗುತ್ತದೆ ಎಂದರು. ಕೊಡಗು ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಕಳೆದ 5 ವರ್ಷಗಳಿಂದ ಕೊಡಗು ಜಿಲ್ಲೆಯ ವಿವಿಧೆಡೆ ಕಾಲಜ್ಞಾನಿ ತಾತಯ್ಯ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕಾಲಜ್ಞಾನಿಗಳು ಸುಮಾರು 110 ವರ್ಷ ಬದುಕಿದ್ದು, ನಂತರ ಪರಕಾಯ ಪ್ರವೇಶ ಮೂಲಕ ಇಹಲೋಕ ತ್ಯಜಿಸುತ್ತಾರೆ. 2020 ರಲ್ಲಿ ವಿಶ್ವವನ್ನು ನಡುಗಿಸಿದ ಕೊರೋನಾ ಮಹಾಮಾರಿ ಸೇರಿದಂತೆ ದೇಶ ವಿದೇಶಗಳಲ್ಲಿ ನಡೆಯುವ ಯುದ್ಧ, ಬರಗಾಲ, ಅಕ್ರಮ ಹಾಗೂ ಭೃಷ್ಟಾಚಾರದ ಬಗ್ಗೆ ಭವಿಷ್ಯವಾಣಿ ನುಡಿದಿದ್ದು ಎಲ್ಲವೂ ನಿಜವಾಗುತ್ತಿದೆ. ಈ ಬಗ್ಗೆ ಕೈವಾರ ತಾತಯ್ಯ ಕಾಲಜ್ಞಾನದ ಬಗ್ಗೆ ಬರೆದಿರುವ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಿಗಲು ವ್ಯವಸ್ಥೆ ಮಾಡಲಾಗುವದು ಎಂದರು. ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿ ಹಾಗೂ ಬಾಳೆಲೆ ಪ್ರತಿಭಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಗೀತಾ ನಾಯ್ಡು ಅವರು ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ಮಾಡಿದರು. ಸಮಾಜದ ಪೊನ್ನಂಪೇಟೆ ನಿರ್ದೇಶಕ ಟಿ.ಆರ್.ವಿಜಯ ಉಸ್ತುವಾರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು, ಪೊನ್ನಂಪೇಟೆ ಹಾಗೂ ಬೆಕ್ಕೆ ಸೊಡ್ಲೂರು ಗ್ರಾಮದ ಬಲಿಜ ಬಂಧುಗಳು ಭಾಗವಹಿಸಿದ್ದರು. ಇದೇ ಸಂದರ್ಭ ತಹಶೀಲ್ಧಾರ್ ಮೋಹನ್ ಕುಮಾರ್, ಸಮಾಜ ನಿರ್ದೇಶಕ ವಿಜಯ್, ಪತ್ನಿ ಟಿ.ವಿ.ಹೇಮಾವತಿ, ಸಮಾಜ ಸೇವಕಿ ಶ್ಯಾಮಲಾ, ಬಳೆ ಮಲಾರ ಪೂಜಾ ವ್ಯವಸ್ಥೆ ಮಾಡಿದ ಪೊನ್ನಂಪೇಟೆ ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಪೊನ್ನಂಪೇಟೆ ತಾಲ್ಲೂಕು ಕಚೇರಿ ಸಿಬ್ಬಂದಿ ವರ್ಗ, ಸಮಾಜದ ಬಲಿಜ ಬಂಧುಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.