
ವಿರಾಜಪೇಟೆ ಜೂ.23 NEWS DESK : ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ, ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯ ಎಂದು ಸಮಾಜ ಸೇವಕಿ ಕಾಣತಂಡ ಬೀನ ಜಗದೀಶ್ ಹೇಳಿದರು, ನಗರದ ಎ-ಜೆಡ್ ಸಭಾಂಗಣದಲ್ಲಿ ನಡೆದ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ಜನಸಾಮಾನ್ಯರಿಗೆ ತಲುಪಲು ಪತ್ರಕರ್ತರು ಪ್ರಮುಖ ಕಾರಣಕರ್ತರು. ತಮ್ಮ ವೈಯುಕ್ತಿಕ ಬದುಕನ್ನು ಬದಿಗೊತ್ತಿ ಸಮಾಜ ನಿರ್ಮಾಣದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಕೆಲಸ ಶ್ಲಾಘನೀಯ. ಮುಂದಿನ ದಿನಗಳಲ್ಲಿ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ದತ್ತಿನಿಧಿ ಪ್ರಶಸ್ತಿ ಸ್ಥಾಪಿಸುವುದಾಗಿ ಕಾಣತಂಡ ಬೀನ ಜಗದೀಶ್ ಇದೇ ಸಂದರ್ಭ ಭರವಸೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತಾನಾಡಿ, ಪತ್ರಕರ್ತರು ಬದಲಾದ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ತನಿಖಾ ವರದಿ ಸಂಪೂರ್ಣವಾಗಿ ಮಾಯಾವಾಗುತ್ತಿದೆ. ತನಿಖಾ ವರದಿ ಮಾಡುವಲ್ಲಿ ಪತ್ರಕರ್ತರು ಕೂಡ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು. ಪತ್ರಕರ್ತರು ವಿಶೇಷ ವರದಿಯತ್ತ ಹೆಚ್ಚು ಆಸಕ್ತಿ ವಹಿಸಿಕೊಂಡು, ಧ್ವನಿಯಿಲ್ಲದವರಿಗೆ ತಮ್ಮ ವರದಿಯ ಮೂಲಕ ಧ್ವನಿಯಾಗಬೇಕಿದೆ ಎಂದರು. ಪ್ರಶಸ್ತಿಯು ಪತ್ರಕರ್ತನ ಜವಬ್ದಾರಿ ಹೆಚ್ಚಿಸಲಿದೆ. ಪತ್ರಕರ್ತರ ಸಂಘದಿಂದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೂ ಕೂಡ ತಮ್ಮ ಕೊಡುಗೆ ನೀಡಬೇಕೆಂದು ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ವಿಷಯವಾಗಿದೆ. ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ ಕೂತಲ್ಲೇ ಸುದ್ದಿ ಮಾಡುತ್ತಿದ್ದಾರೆ. ವರದಿಯ ಸತ್ಯಾಂಶವನ್ನು ತಿಳಿಯಲು ಆಸಕ್ತಿ ತೋರುತ್ತಿಲ್ಲ. ಪತ್ರಿಕೋದ್ಯಮದಿಂದ ತನಿಖಾ ವರದಿ ದೂರವಾಗುತ್ತಿದೆ ಎಂದು ಸವಿತಾ ರೈ ವಿಷಾದ ವ್ಯಕ್ತಪಡಿಸಿದರು. ತಾಲ್ಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಿ.ಎ ನಾಸಿರ್ ಅವರು ದತ್ತಿ ಪ್ರಶಸ್ತಿ ಸ್ಥಾಪನೆ ಮಾಡುವುದಾಗಿ ತಿಳಿಸಿದರಲ್ಲದೆ ಸಮಾಜವನ್ನು ತಿದ್ದುವ ಮಹತ್ತರ ಜವಬ್ದಾರಿ ಪತ್ರಕರ್ತರ ಮೇಲಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜದ ಕಣ್ಣಿನಂತೆ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅವರು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ರಘು ಮಾಚಯ್ಯ ಇದ್ದರು. ವಾರ್ಷಿಕ ಪ್ರಶಸ್ತಿ ಪ್ರದಾನ:: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಆರು ಮಂದಿ ಪತ್ರಕರ್ತರಿಗೆ ಪ್ರದಾನ ಮಾಡಲಾಯಿತು. ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಕೆ.ಎಂ ಇಸ್ಮಾಯಿಲ್ ಕಂಡಕರೆ ಹಾಗೂ ಸತೀಶ್ ನಾರಾಯಣ್, ಅತ್ಯುತ್ತಮ ಕೃಷಿ ವರದಿ ಟಿ.ಜೆ ಕಿಶೋರ್ ಕುಮಾರ್, ಅತ್ಯುತ್ತಮ ಮಾನವೀಯ ವರದಿಗೆ ರವಿಕುಮಾರ್ ಎಂ, ಅರಣ್ಯ ವನ್ಯ ಜೀವಿ ಪ್ರಶಸ್ತಿ ಅಂತೋಣಿ ಪಿ.ವಿ ಹಾಗೂ ಅತ್ಯುತ್ತಮ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ರಜಿತಾ ಕಾರ್ಯಪ್ಪ ಅವರಿಗೆ ಪ್ರದಾನ ಮಾಡಲಾಯಿತು. ಹಾಗೂ ಶೇಕಡಾ 80ಕ್ಕೂ ಹೆಚ್ಚು ಅಂಕ ಪಡೆದ ತಾಲೂಕು ಸಂಘದ ಸದಸ್ಯರ ಮಕ್ಕಲಾದ ಕೆ.ಈಶಾನ್ವಿ, ರಾಗ ಹೆಚ್ ಶೆಟ್ಟಿ, ಪಿ.ಸಿ. ಕಾಜಲ್, ಸಮೃಧ್ಧಿ, ಎಂ.ಕೆ ಜಸ್ಮಿತಾ, ಪೋಷಿಕ ಸಿ.ಟಿ., ಜೀಷ್ಮ ಎಂ.ಕೆ., ವೈಭವ್ ಕಾರ್ತಿಕೆಯನ್ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಹಾಸಭೆ : ಪ್ರಶಸ್ತಿ ಪ್ರದಾನ ಸಮಾರಂಭಕ್ಕು ಮೊದಲು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎ.ಎಸ್.ಮುಸ್ತಫಾ ವಾರ್ಷಿಕ ವರದಿ ಹಾಗೂ ಕಳೆದ ಮಹಾಸಭೆ ವರದಿ ಮಂಡಿಸಿದರು. ಖಜಾಂಜಿ ಡಾ.ಹೇಮಂತ್ ಲೆಕ್ಕಪತ್ರವನ್ನು ಮಂಡಿಸಿದರು. ಮಹಾಸಭೆಯ ವೀಕ್ಷಕರಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎಚ್.ಕೆ ಜಗದೀಶ್ ಆಗಮಿಸಿದ್ದರು. ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಖಜಾಂಜಿ ಆನಂದ್ ಕೊಡಗು ವೇದಿಕೆಯಲ್ಲಿದ್ದರು. ಸಭೆಯಲ್ಲಿ ಕಾರ್ಯದರ್ಶಿ ರಜಿತಾ ಕಾರ್ಯಪ್ಪ, ನಿರ್ದೇಶಕರಾದ ರವಿಕುಮಾರ್ ಎಂ.ಕೆ, ಡಿ. ಮಂಜುನಾಥ್, ಕಿಶೋರ್ ಕುಮಾರ್ ಶೆಟ್ಟಿ ಸೇರಿದಂತೆ ಸಂಘದ ಸದಸ್ಯರುಗಳು ಹಾಜರಿದ್ದರು.









