
ಮಡಿಕೇರಿ ಜೂ.26 NEWS DESK : ವಿರಾಜಪೇಟೆಯ ಕುಟ್ಟಂದಿ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕಲಾವಿದ ಶಿವಣ್ಣ ಎಸ್. ಅವರಿಗೆ ವಂದೇ ಮಾತರಂ ಲಲಿತಕಲಾ ಅಕಾಡೆಮಿ ಪ್ರತಿವರ್ಷ ನೀಡುವ ಇಂಡಿಯನ್ ಐಕಾನ್ ಅವಾರ್ಡ್ ಹಾಗೂ ನಾಟ್ಯ ಮಯೂರಿ ನೃತ್ಯ ಶಾಲೆ ನೀಡುವ ಕರುನಾಡ ನಾಟ್ಯ ಕಲ್ಪವೃಕ್ಷ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಬೆಂಗಳೂರಿನ ವಿಧಾನಸೌಧದ ಕಲಾಕ್ಷೇತ್ರ ಭವನದಲ್ಲಿ ನಡೆದ ಇಂಡಿಯನ್ ಐಕಾನ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ, ಹಿರಿಯ ರಾಜಕಾರಣಿ ಖಾದರ್ ಮತ್ತಿತರ ಪ್ರಮುಖರು ಹಾಜರಿದ್ದರು. ಬೆಂಗಳೂರಿನ ನಯನ ಕಲಾಕ್ಷೇತ್ರದಲ್ಲಿ ನಡೆದ ನಾಟ್ಯ ಮಯೂರಿ ನೃತ್ಯ ಶಾಲೆಯ ಕಾರ್ಯಕ್ರಮದಲ್ಲಿ ಶಿವಣ್ಣ ಎಸ್. ಅವರಿಗೆ ಕರುನಾಡ ನಾಟ್ಯ ಕಲ್ಪವೃಕ್ಷ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭ ಹಿರಿಯ ಚಿತ್ರನಟಿ ಭವ್ಯ, ಪ್ರಮುಖರಾದ ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿವಣ್ಣ ಎಸ್. ಅವರು ತಮ್ಮ ನಟನೆ ಮತ್ತು ಗಾಯನ ಪ್ರದರ್ಶನದ ಮೂಲಕ ಸಾವಿರಾರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ರಂಗಭೂಮಿ ಕಲಾವಿದರಾಗಿರುವ ಶಿವಣ್ಣ ಅವರು ಇದೀಗ ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ಎರಡು ಪ್ರಶಸ್ತಿಗಳನ್ನು ನೀಡಲಾಗಿದೆ.










