ವಿರಾಜಪೇಟೆ ಜು.3 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿರಾಜಪೇಟೆ ತಾಲೂಕು, ಕೃಷಿ ಕಾರ್ಯಕ್ರಮದಡಿಯಲ್ಲಿ ಅಮ್ಮತಿ ವಲಯದ ಚೆಂಬೆಬೆಳ್ಳೂರು ಕಾರ್ಯಕ್ಷೇತ್ರದ ವತಿಯಿಂದ ಸರಕಾರಿ ಪ್ರೌಢಶಾಲೆ ದೇವಣಗೇರಿ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ವಲಯ ಅರಣ್ಯ ಅಧಿಕಾರಿ ರಾಘವ ಮಾತನಾಡಿ, ಪರಿಸರ ಸಂರಕ್ಷಣೆ ಹೇಗೆ ಮಾಡಬೇಕು ಎಂದು ಮಾಹಿತಿ ನೀಡಿದರು. ಪರಿಸರ ಉಳಿವಿಗಾಗಿ ನಾವು ಸದಾ ಪ್ರಯತ್ನ ಪಡಬೇಕು ಮತ್ತು ಅಳಿವಿನಂಚಿನಲ್ಲಿರುವ ವಿವಿಧ ತಳಿಯ ಗಿಡಗಳನ್ನು ಹೇಗೆ ಉಳಿಸಬೇಕು ಎಂದು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಪಿ.ಹರೀಶ್ ಮಾತನಾಡಿ, ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಒಂದಾಗಿದೆ. ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಹಣ್ಣಿನ ಗಿಡಗಳನ್ನು ನಾಟಿ ಮಾಡುವುದರಿಂದ ಶುದ್ಧವಾದ ಗಾಳಿ ಮತ್ತು ಹಣ್ಣು ಸಿಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಪ್ರಕೃತಿಯನ್ನು ಹೇಗೆ ಉಳಿಸಬೇಕು ಎಂದು ಸಲಹೆ ನೀಡಿದರು. ಪ್ರಕೃತಿ ಬಗ್ಗೆ ಮಕ್ಕಳಲ್ಲಿ ಜ್ಞಾನ ಬರಬೇಕು. ಪ್ರಕೃತಿ ಸಂಪತ್ತನ್ನು ಉಳಿಸಲು ಪ್ರತಿಯೊಬ್ಬರು ಪಣ ತೊಡಬೇಕೆಂದರು. ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ವಸಂತ್, ವಲಯ ಮೇಲ್ವಿಚಾರಕ ದಿನೇಶ್, ಶಾಲಾ ಶಿಕ್ಷಕರಾದ ಸುನೀತ, ಚೆಂಬೆಬೆಳ್ಳೂರು ಒಕ್ಕೂಟದ ಉಪಾಧ್ಯಕ್ಷ ಸುಮ, ಶೌರ್ಯ ಘಟಕದ ಸದಸ್ಯರಾದ ವಿನ್ಯ, ಸೇವಾ ಪ್ರತಿನಿಧಿ ದೇವಕಿ ಸಂಘದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು. ಕಾರ್ಯಕ್ರಮದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಎಲೆಗಳನ್ನು ಗುರುತಿಸುವ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಶಾಲಾ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.












