
ಸುಂಟಿಕೊಪ್ಪ ಆ.5 NEWS DESK : ಶ್ರೀ ಗೌರಿ ಗಣೇಶ ಹಬ್ಬದಲ್ಲಿ ಆಚರಣೆಯ ಡಿಜೆಗೆ ಅಳವಡಿಸಲು ಮುಂದಾಗಬೇಡಿ. ಬ್ಯಾಂಡ್ಸೆಟ್, ಓಲಗ, ನಾಸಿಕ್ ಬ್ಯಾಂಡ್, ನಗರಿ ಅಂತಹವುಗಳನ್ನು ಬಳಕೆ ಮಾಡುವಂತೆ ಶ್ರೀ ಗೌರಿ ಗಣೇಶ ಸಮಿತಿಯ ಪದಾಧಿಕಾರಿಗಳಿಗೆ ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಚಂದ್ರಶೇಖರ್ ಹೇಳಿದರು. ಸುಂಟಿಕೊಪ್ಪ ಪೊಲೀಸ್ ಠಾಣಾ ಆವರಣದಲ್ಲಿ ಆಯೋಜಿಸಲಾದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀ ಗೌರಿ ಗಣೇಶ ಆಚರಣಾ ಸಮಿತಿಗಳ ಪೂರ್ವನಿಯೋಜಿತ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಬಾರೀ 24 ಗೌರಿ-ಗಣೇಶ ಮೂರ್ತಿಗಳನ್ನು ಆಚರಣಾ ಸಮಿತಿಯವರು ಪ್ರತಿಷ್ಠಾಪಿಸಿದ್ದು, ಕಾನೂನು ಪಾಲನೆಯೊಂದಿಗೆ ಶಿಸ್ತುಬದ್ಧವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆÀ ಆಚರಣಾ ಸಮಿತಿಯವರು ಮುನ್ನಡೆಸಿರುವುದು ಶ್ಲಾಘನೀಯ ಎಂದು ಹೇಳಿದರು. ಸರಕಾರವು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆಯೋಜಕ ಸಮಿತಿಗಳು ಪೊಲೀಸ್ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು. ಮುಂಜಾಗೃತ ಕ್ರಮವಾಗಿ ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿಕ್ಯಾಮರಗಳನ್ನು ಅಳವಡಿಸುವುದರಿಂದ ಪುಂಡಾಪೋಕರಿಗಳು ಎಸಗುವ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಸಹಕರಿಯಾಗಲಿದೆ ಎಂದರು. ಪ್ರತಿಷ್ಠಾಪನಾ ವಿದ್ಯುತ್ ಸಂಪರ್ಕವನ್ನು ಅಳವಡಿಸಿಕೊಳ್ಳುವಾಗ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಶ್ರೀ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಮಿತಿಯ ಇರ್ವರು ಪದಾಧಿಕಾರಿಗಳು ಕಾವಲು ಇರಿಸುವಂತೆ ಸೂಚಿಸಿದರು. ಸ್ಥಳದ ಪೂರ್ವಪರ ಮಾಹಿತಿಯನ್ನು ಪಡೆದಿರಬೇಕು ವಿಸರ್ಜನೆಯ ವೇಳೆ ನುರಿತ ಈಜು ಬಲ್ಲವರು ಅವರಿಗೆ ಸೂಕ್ತ ಭದ್ರತೆಯ ಜಾಕಿಟ್ ಕಡ್ಡಾಯವಾಗಿ ತೊಟ್ಟಿರಬೇಕು. ಮೂರ್ತಿಗಳ ವಿಸರ್ಜಿನೆಯ ವೇಳೆ ಅಲಂಕೃತ ಮಂಟಪ ಮೆರವಣಿಗೆ ತೆರಳುವ ಮಾರ್ಗಗಳ ಮಾಹಿತಿ ನಿಗಧಿಗೊಂಡಿರುವ ಸಮಯವನ್ನು ಪೊಲೀಸ್ ಠಾಣೆಗೆ ತಿಳಿಸುವಂತೆ ಅವರು ಸೂಚಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಸರಕಾರದಿಂದ ಹೊರಡಿಸಿರುವ ಕಾನೂನು ಅನುಮತಿ ಪತ್ರಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.









