ಮಡಿಕೇರಿ ಜು.3 NEWS DESK : ಯು.ಎ.ಇ. ಯ ಅರಬ್ ಸಂಯುಕ್ತ ಸಂಸ್ಥಾನ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ನಗರದ ಚಿತ್ರಶಿಲ್ಪ ಕಲಾವಿದ ಬಿ.ಕೆ.ಗಣೇಶ್ ರೈ ಅವರಿಗೆ ‘ಕಲಾ ಮಾಧ್ಯಮ’ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಲ್ಪಕಲೆ, ಚಿತ್ರಕಲೆ, ಲೇಖಕ ಹಾಗೂ ಬರಹಗಾರರಾಗಿ ಕಳೆದ ನಾಲ್ಕು ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಗಣೇಶ್ ರೈ ಅವರಿಗೆ ‘ಕಲಾಮಾಧ್ಯಮ’ ಗೌರವ ಪುರಸ್ಕಾರ ನೀಡಲಾಗಿದೆ. ದುಬಾಯಿಯ ಇಂಡಿಯನ್ ಹೈಸ್ಕೂಲ್ ಶೇಖ್ ರಾಶೀದ್ ಆಡಿಟೋರಿಯಂ ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಯಕ್ಷಧ್ರುವ ಫೌಂಡೇಷನ್ ನ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಯು.ಎ.ಇ. ಯ ಯಕ್ಷಗಾನ ಅಭ್ಯಾಸ ಕೇಂದ್ರದ ಅಧ್ಯಕ್ಷ ಕೊಟ್ಟಿಂಜ ದಿನೇಶ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಇಂಡಿಯಾ ಸೋಶಿಯಲ್ ಐಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ 2024- 25ನೇ ಸಾಲಿನ ಅಧ್ಯಕ್ಷ ಜಯರಾಮ್ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಯಕ್ಷಗಾನ ಪೂಜೆ ಮತ್ತು ಮಹಾ ಮಂಗಳಾರತಿಯ ನಂತರ ಪ್ರಶಸ್ತಿ ಪುರಸ್ಕೃತ 10 ಮಂದಿ ಸಾಧಕರನ್ನು ಭವ್ಯ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು. ಇತ್ತೀಚೆಗಷ್ಟೇ ಬಿ.ಕೆ.ಗಣೇಶ್ ರೈ ಅವರು ಅಬುಧಾಬಿ ಹಿಂದೂ ಮಂದಿರದಲ್ಲಿ ನಡೆದ ಸಂಸ್ಕೃತಿ, ಸಿಂಚನ, ಗುರುವಂದನೆ ಕಾರ್ಯಕ್ರಮದಲ್ಲಿ ‘ಸಂಸ್ಕೃತಿ ಶಿಲ್ಪಕಲಾ ರತ್ನ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.












