
ಮಡಿಕೇರಿ ಜು.7 NEWS DESK : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಮತ್ತು ಕನ್ನಡ ಭವನದ ಕೊಡಗು ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ, ಕನ್ನಡ ಭವನ ಕಾಸರಗೋಡಿನ ಪ್ರತಿಷ್ಠಿತ ಅಂತರ ರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಮತ್ತು ಕೊಡಗು ಮಳೆಗಾಲ ಕವಿಗೋಷ್ಠಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಉದ್ಘಾಟಿಸಿದರು. *ಪ್ರಶಸ್ತಿ ಪ್ರದಾನ* ಕಾರ್ಯಕ್ರಮದಲ್ಲಿ ಕಿಗ್ಗಾಲು ಎನ್.ಗಿರೀಶ್ ಮೂರ್ನಾಡು, ಮೂಕಳೇರ ಟೈನಿ ಪೂಣಚ್ಚ ಪೊನ್ನಂಪೇಟೆ, ಪಂದ್ಯಂಡ ರೇಣುಕ ಸೋಮಯ್ಯ ಹೊಸೂರು ಅಮ್ಮತ್ತಿ, ಅಪರ್ಣಾ ಹುಲಿತಾಳ, ಅಯ್ಯನೆರವಂಡ ಪ್ರಿತುನ್ ಪೂವಣ್ಣ ಅವರಿಗೆ ಕೊಡಗು ಜಿಲ್ಲಾ ಚುಟುಕು ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಭವನ ಕಾಸರಗೋಡಿನ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಕವಯತ್ರಿ, ಲೇಖಕಿ ಸ್ಮೀತಾ ಅಮೃತರಾಜ್, ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ, ಸ್ವೀಚ್ ಹಾಗೂ ಇಂಪ್ಲಾಂಟ್ ಕ್ಲಿನಿಕ್ ಇಂಡಿಯಾ ಹಾಗೂ ಮರ್ಕರಾ ಪೋಸ್ಟ್ ಎಂ.ಡಿ, ಪಿ.ಆರ್.ಮ್ಯಾನೇಜರ್ ಜೈರಸ್ ಥಾಮಸ್ ಅಲೆಗ್ಸಾಂಡರ್ ಅವರಿಗೆ ನೀಡಿ ಗೌರವಿಸಲಾಯಿತು. *ಪುಸ್ತಕ ಬಿಡುಗಡೆ* ಕೊಡವ ಮಕ್ಕಡ ಕೂಟದ 116ನೇ ಪುಸ್ತಕ ಲೇಖಕಿ ಟಿ.ವೈಶಾಲಿನಿ ಅವರು ರಚಿಸಿರುವ ಮುಖವಾಡ ಕವನ ಸಂಕಲನ ಕೃತಿಯನ್ನು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಬಿಡುಗಡೆ ಮಾಡಿದರು. *ಮಳೆಗಾಲದ ಕವಿಗೋಷ್ಠಿ* ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕೊಡಗು ಮಳೆಗಾಲದ ಕವಿಗೋಷ್ಠಿ’ ಯಲ್ಲಿ 35 ಕ್ಕೂ ಹೆಚ್ಚು ಬರಹಗಾರರು ಕವನ ವಾಚಿಸಿ ಗಮನ ಸೆಳೆದರು. *ದೊಡ್ಡ ಶಕ್ತಿ ಸಾಹಿತ್ಯಕ್ಕಿದೆ* ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸುಬ್ರಾಯ ಸಂಪಾಜೆ ಅವರು ಎಲ್ಲರನ್ನು ಬೆಸೆಯುವ ದೊಡ್ಡ ಶಕ್ತಿ ಸಾಹಿತ್ಯಕ್ಕಿದೆ, ಜಡಿಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯ ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿರುವುದು ಶ್ಲಾಘನೀಯವೆಂದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಅವರು ಮಾತನಾಡಿ ಯುವ ಮನಸ್ಸುಗಳಲ್ಲಿ ಮಾತೃ ಭಾಷೆ ಕನ್ನಡವನ್ನು ಗಟ್ಟಿಗೊಳಿಸುವುದೇ ಸಂಘಟನೆಯ ಉದ್ದೇಶವಾಗಿದೆ. 2001 ರಲ್ಲಿ ತಾವು ಸ್ಥಾಪಿಸಿದ ಸಮಿತಿ ಕಳೆದ 24 ವರ್ಷಗಳಿಂದ ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ ಎಂದರು. ಕಾಸರಗೋಡು ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಕನ್ನಡದ ಮನಸ್ಸುಗಳು ಕನ್ನಡ ಭಾಷೆ ಮತ್ತು ಕನ್ನಡನಾಡಿಗಾಗಿ ಮಿಡಿಯುತ್ತಿವೆ. ಗಡಿನಾಡುಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಯುವ ಜನರಲ್ಲಿ ಕನ್ನಡಾಭಿಮಾನ ಜೀವಂತವಾಗಿರಬೇಕೆನ್ನುವ ಪ್ರಯತ್ನವಾಗಿ ಚುಟುಕು ಸಾಹಿತ್ಯ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ಕನ್ನಡದ ನಡಿಗೆ ಶಾಲೆ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ಕನ್ನಡತನವನ್ನು ಗಟ್ಟಿಗೊಳಿಸಲಾಗುತ್ತಿದೆ. ಸುಮಾರು 20 ಶಾಲೆಗಳನ್ನು ಸಂಪರ್ಕಿಸಿದ್ದು, ಸಾಹಿತ್ಯ ರಚನಾ ಶಿಬಿರಗಳನ್ನು ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಮನೆ ಮನೆಯಲ್ಲಿ ಕನ್ನಡ’ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು. ಭಾಷೆಗೆ ಯಾವುದೇ ಜಾತಿ, ಮತ, ಧರ್ಮ, ಪಂಥ ಮತ್ತು ಪ್ರತಿಸ್ಪರ್ಧಿಯ ಅಡ್ಡಿ ಇಲ್ಲ. ಭಾಷೆ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ, ಆದ್ದರಿಂದ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸು ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಡಾ.ವಾಮನ್ ರಾವ್ ಬೇಕಲ್ ಕರೆ ನೀಡಿದರು. ಲೇಖಕಿ ಸ್ಮಿತಾ ಅಮೃತರಾಜ್ ಮಾತನಾಡಿ ಸಮಾಜದಲ್ಲಿನ ನ್ಯೂನತೆಗಳನ್ನು ಪ್ರತಿಬಿಂಬಿಸುವ ದೊಡ್ಡ ಶಕ್ತಿ ಚುಟುಕು ಸಾಹಿತ್ಯಕ್ಕಿದೆ, ಸಣ್ಣ ಸಣ್ಣ ಬರಹಗಳು ಬರಹಗಾರರಿಗೆ ಅಡಿಪಾಯವನ್ನು ಹಾಕಿ ಕೊಡುತ್ತವೆ. ನಮ್ಮನ್ನು ಒತ್ತಡದಿಂದ ಬಿಡುಗಡೆಗೊಳಿಸಲು ಮತ್ತು ಮನಸ್ಸನ್ನು ಹಗುರವಾಗಿಸಲು ಕಾವ್ಯ ಉತ್ತಮ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.ಭಾವನೆಗಳಿಂದ ಹುಟ್ಟಿದ ಕಾವ್ಯ ಆಯಾ ಕಾಲದ ಕೂಸಾಗಿರುತ್ತದೆ, ಅದಕ್ಕೂ ಒಂದು ಜೀವವಿರುತ್ತದೆ, ಕವಿತೆಯಿಂದ ಜೀವನದ ದರ್ಶನವಾಗುತ್ತದೆ. ಭಾಷೆಯನ್ನು ಬಳಸುವ ಶೈಲಿ ಹೊಸ ಬಗೆಯದ್ದಾಗಿರಬೇಕು, ಪರಿಣಾಮಕಾರಿಯಾಗಿರಬೇಕು ಮತ್ತು ಭಾಷೆ ಬಳಕೆಯಲ್ಲಿ ಎಚ್ಚರವಿರಬೇಕು. ಕಾವ್ಯಗಳನ್ನು ಓದುವ ಸಹೃದಯರೂ ಇರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಲು ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಅವರು ನೀಡುತ್ತಿರುವ ಕೊಡುಗೆ ಅಪಾರ. ಇವರ ಪ್ರಯತ್ನಗಳಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ಧಾರಾಕಾರ ಮಳೆಯ ನಡುವೆಯೂ ದೊಡ್ಡ ಸಂಖ್ಯೆಯ ಸಾಹಿತ್ಯಾಭಿಮಾನಿಗಳು ವಿವಿಧ ಊರುಗಳಿಂದ ಬಂದು ಸೇರಿರುವುದು ಶ್ಲಾಘನೀಯ. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಎ.ರುಬೀನಾ ಮಾತನಾಡಿ ಜಿಲ್ಲೆಯಲ್ಲಿ ಸಂಘಟನೆ ಸ್ಥಾಪನೆಯಾಗಿ ಕೇವಲ 5 ತಿಂಗಳಾಗಿದ್ದು, ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಕವಿಗೋಷ್ಠಿ ನಡೆಸಲಾಗಿದೆ, ಪ್ರಶಸ್ತಿ ನೀಡಲಾಗಿದೆ, ಸಾಧಕರನ್ನು ಸನ್ಮಾನಿಸಲಾಗಿದೆ. ಇನ್ನು ಮುಂದೆಯೂ ತಾಲ್ಲೂಕು ಮತ್ತು ಗ್ರಾಮೀಣ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಿ ಯುವ ಸಮೂಹದಲ್ಲಿ ಕನ್ನಡ ಭಾಷಾಭಿಮಾನವನ್ನು ಮೂಡಿಸಲಾಗುವುದು ಎಂದರು. ಕೊಡಗು ಕನ್ನಡ ಭವನ ಕೋಶಾಧಿಕಾರಿ ವಿನೋದ್ ಕುಡ್ತೇಕರ್, ಕಾರ್ಯದರ್ಶಿ ವಸಂತ್ ಕೆರೆಮನೆ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ರಂಜಿತ್ ಜಯರಾಂ, ನಿವ್ಯ ದೇವಯ್ಯ ಪ್ರಾರ್ಥಿಸಿ, ಅರುಣ್ ಕುಮಾರ್ ಸ್ವಾಗತಿಸಿ, ಹರ್ಷಿತಾ ಶೆಟ್ಟಿ, ವಿನೋದ್ ಮೂಡಗದ್ದೆ ನಿರೂಪಿಸಿ, ಚಂದನ್ ನಂದರಬೆಟ್ಟು ವಂದಿಸಿದರು. ಸೋಮವಾರಪೇಟೆಯ ತೆರೇಸಾ ಲೋಬೊ ಹಾಡಿದರು ಹಾಗೂ ಎಸ್.ಎ.ರಿಶಾ ನೃತ್ಯ ಪ್ರದರ್ಶನ ಮಾಡಿದರು.









