
ಕುಶಾಲನಗರ ಆ.7 NEWS DESK : ಸಮಾಜ ಸೇವೆಯ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆಗಳು ಮೂಲ ಉದ್ದೇಶದ ಗುರಿಯನ್ನು ತಲುಪಬೇಕು ಎಂದು ಮದರ್ ರೂಟ್ ಸಂಸ್ಥೆಯ ಅಧ್ಯಕ್ಷೆ ಟಿ.ಬಿ.ಅನಿತಾ ತಿಳಿಸಿದರು. ಕುಶಾಲನಗರ ತಾಲೂಕಿನ ನಲವತ್ತೆಕರೆ ಬರಡಿಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸಮಾಜ ಸೇವೆಯ ಉದ್ದೇಶವನ್ನು ಹೊಂದಿದ ಮದರ್ ರೂಟ್ ಫೌಂಡೇಶನ್ ಸೇವಾ ಸಂಸ್ಥೆಯೊಂದು ಅಸ್ಥಿತ್ವಕ್ಕೆ ಬಂದಿದೆ. ಸಂಸ್ಥೆ ವೃದ್ಧಾಶ್ರಮ, ಅನಾಥಾಶ್ರಮ, ಬಾಲಕಾರ್ಮಿಕರ ಪುನರ್ವಸತಿ ಕೇಂದ್ರ ಮತ್ತು ಮಹಿಳೆಯರ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ವಿವಿಧ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸದುದ್ದೇಶಗಳನ್ನು ಹೊಂದಿರುವ ಸಂಸ್ಥೆಯಾಗಿದೆ ಎಂದು ಹೇಳಿದರು. ಸಂಸ್ಥೆಯ ಬೆಳವಣಿಗೆಗೆ ಕೃಷಿ ಉತ್ಪನ್ನಗಳು ಮತ್ತು ಮಾರಾಟ ಸೇರಿದಂತೆ ವಿವಿಧ ವಸ್ತುಗಳ ತಯಾರಿಸಿ ಮಾರ್ಕೆಟಿಂಗ್ ಮಾಡಲಾಗುವುದು, ಬಂದ ಲಾಭದಲ್ಲಿ ಒಂದು ಭಾಗವನ್ನು ಸಂಸ್ಥೆಯ ಬೆಳವಣಿಗೆಗೆ ವಿನಿಯೋಗ ಮಾಡಲಾಗುವುದು ಎಂದು ತಿಳಿಸಿದರು. ನಮ್ಮ ಸಂಸ್ಥೆ ಜಾತ್ಯಾತೀತ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದರು. ಈಗಾಗಲೆ ಸಂಸ್ಥೆಗೆ ಪದಾಧಿಕಾರಿಗಳ ನೇಮಕಮಾಡಲಾಗಿದ್ದು, ಪದಾಧಿಕಾರಿಗಳು ಸೇವಾ ಮನೋಭಾವನೆಯನ್ನು ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭ ಗೌರವಾಧ್ಯಕ್ಷರಾಗಿ ಪ್ರಕಾಶ್, ಉಪಾಧ್ಯಕ್ಷರಾಗಿ ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ನಂಜುಂಡಸ್ವಾಮಿ, ಸಹಕಾರ್ಯದರ್ಶಿಯಾಗಿ ಶರಣ್ಯ, ಖಜಾಂಚಿಯಾಗಿ ಸುನೀತಾ, ಗೌರವ ಸಲಹೆಗಾರರಾಗಿ ಲಕ್ಷ್ಮೀ, ಸಂಯೋಜಕರಾಗಿ ಮಹೇಶ್ ಮತ್ತು ನಿರ್ದೇಶಕರುಗಳಾಗಿ ಜಯಲಕ್ಷ್ಮಮ್ಮ, ಲಕ್ಷಿತಾ, ಲಾಲಿತ್ಯ ಅವರನ್ನು ನೇಮಕ ಮಾಡಲಾಯಿತು. 








