
ಮಡಿಕೇರಿ ಆ.7 NEWS DESK : ಬಿಡದಿ ಟೌನ್ ಶಿಪ್ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ತೆರಳುತ್ತಿದ್ದ ಕೊಡಗಿನ ರೈತರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಮತ್ತು ಪೊಲೀಸರ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು. ರೈತ ಸಂಘದ ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಮಾತನಾಡಿ ಕೊಡಗಿನಲ್ಲಿ ಮಾತ್ರ ರೈತರನ್ನು ಬಂಧಿಸಲಾಗಿದೆ, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಶಾಂತಿಯುತ ಹೋರಾಟಕ್ಕೆ ಹೊರಟಿದ್ದ ರೈತರನ್ನು ಬಂಧಿಸುವ ಮೂಲಕ ಪೊಲೀಸರು ಕೃಷಿಕ ವರ್ಗಕ್ಕೆ ಅವಮಾನ ಮಾಡಿದ್ದಾರೆ. ಕೊಡಗಿನ ಗಡಿಯಲ್ಲಿ ಬಂಧಿಸಿದ ರೈತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಿತ್ತು. ಆದರೆ ಸಂಜೆವರೆಗೆ ಮದುವೆ ಮಂಟಪ, ಪೊಲೀಸ್ ಠಾಣೆಗಳಲ್ಲಿ ಕೂಡಿ ಹಾಕಿ ಅವಮಾನ ಎಸಗಲಾಗಿದೆ. ಬಂಧನಕ್ಕೆ ಒಳಗಾದ ರೈತರ ಕುಟುಂಬ ವರ್ಗ ಮತ್ತವರ ಮಕ್ಕಳ ಮನಸ್ಸಿನ ಮೇಲೆ ಬೀರಿದ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ. ಪೊಲೀಸರ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರಪೇಟೆ ರೈತ ಸಂಘದ ಮುಖಂಡ ದಿನೇಶ್ ಮಾತನಾಡಿ, ಪೊಲೀಸರು ರೈತರನ್ನು ಬಂಧಿಸುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು. ರೈತ ಮುಖಂಡ ಸರಗೂರು ನಾಗರಾಜ್ ಮಾತನಾಡಿ, ಬಿಡದಿ ಟೌನ್ ಶಿಪ್ ವಿರೋಧಿಸಲು ಕೊಡಗಿನ ರೈತರು ಬಿಡದಿಗೆ ಹೊರಟಿದ್ದರು. ಆದರೆ ಪೊಲೀಸರು ಕಳ್ಳರನ್ನು ಬಂಧಿಸುವ ಮಾದರಿಯಲ್ಲಿ ರೈತರನ್ನು ಬಂಧಿಸಿ ಮದುವೆ ಮಂಟಪ ಮತ್ತು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಬದುಕು ಕಟ್ಟಿಕೊಳ್ಳಲು ಬಿಡದಿ ರೈತರು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುವುದು ಅಪರಾಧವಲ್ಲ. ಇಂತಹ ಹೋರಾಟಗಳಿಗೆ ಪೊಲೀಸರು ಕೂಡ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮುಂಜಾಗೃತಾ ಕ್ರಮವಾಗಿ ರೈತರನ್ನು ಗಡಿ ಭಾಗದಲ್ಲಿ ತಡೆದು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮೇಲಾಧಿಕಾರಿಗಳು ಆದೇಶ ನೀಡಿದಂತೆಯೇ ನಡೆದುಕೊಳ್ಳಲಾಗಿದೆ. ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಾಧ್ಯವಿಲ್ಲ. ಮೇಲಾಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿ ಬೇಕಾದಲ್ಲಿ ಸೂಕ್ತ ಕಾನೂನು ರೀತಿಯಲ್ಲಿ ಪಡೆದುಕೊಳ್ಳಬಹುದು ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮನು ಸೋಮಯ್ಯ, ಆದೇಶದ ಪ್ರತಿಯನ್ನು ಕಾನೂನಾತ್ಮಕವಾಗಿ ಪಡೆಯಲಾಗುವುದು. ಈ ಹಿಂದೆಯೂ ರೈತ ಸಂಘ ಸಾಕಷ್ಟು ಹೋರಾಟಗಳನ್ನು ಮಾಡಿದೆ. ಆದರೆ ಎಲ್ಲಿಯೂ ರೈತರನ್ನು ತಡೆದು ಬಂಧಿಸುವ ಕೆಲಸವಾಗಿಲ್ಲ. ಶಾಂತಿಯುತ ಹೋರಾಟ ನಡೆಸುವ ಸಂದರ್ಭ ರೈತರನ್ನು ಬಂಧಿಸುವ ಕ್ರಮವನ್ನು ಕೈಬಿಡಬೇಕು. ಪೊಲೀಸರು ಕೂಡ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಪ್ರಮುಖರಾದ ಸುಜಯ್ ಬೋಪಯ್ಯ, ರಾಯ್ ಮಾದಪ್ಪ, ಸುರೇಶ್ ಚಕ್ರವರ್ತಿ, ಕೂತಿ ಹೂವಯ್ಯ, ಆಲೇಮಾಡ ಮಂಜುನಾಥ್, ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್.ಭರತ್, ಪಿರಿಯಾಪಟ್ಟಣ ಶಿವಣ್ಣ, ಮೈಸೂರಿನ ಲೋಕೇಶ್ ರಾಜೇ ಅರಸ್ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ರೈತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









