
ಮಡಿಕೇರಿ ಸೆ.4 NEWS DESK : ಹತ್ತು ಹಲವು ಸಂಕಷ್ಟಗಳ ನಡುವೆಯೂ ಪತ್ರಿಕೆಯನ್ನು ಮನೆ ಬಾಗಿಲಿಗೆ ವಿತರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವ ಪತ್ರಿಕಾ ವಿತರಕರೇ ಪತ್ರಿಕೆಗಳ ಜೀವನಾಡಿಯಾಗಿದ್ದಾರೆ ಎಂದು ಕೊಡಗು ಪತ್ರಿಕಾ ಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಪತ್ರಕರ್ತರ ಸಂಘ ಹಾಗೂ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದ ಸಂಯಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ‘ಪತ್ರಿಕಾ ವಿತರಕರ ದಿನಾಚರಣೆ’ಯಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಪತ್ರಿಕಾ ವಿತರಕರು ಪತ್ರಿಕೆ ಮತ್ತು ಓದುಗರ ನಡುವಿನ ಸಂಪರ್ಕ ಸೇತುವೆಯಾಗಿದ್ದು, ಇವರ ಸಂಕಷ್ಟಕ್ಕೆ ಸಂಘಟನಾತ್ಮಕವಾಗಿ ಸ್ಪಂದಿಸುವ ಅಗತ್ಯವಿದೆ ಎಂದರು. ಸಾಮಾಜಿಕ ಜಾಲತಾಣಗಳ ಮಾಧ್ಯಮಗಳ ಪ್ರಭಾವದ ನಡುವೆಯೂ ಇಂದು ಪತ್ರಿಕೆಗಳು ಜೀವಂತವಾಗಿವೆ. ಊರು, ಗ್ರಾಮಗಳ ಮೂಲೆ ಮೂಲೆಗೆ ಪತ್ರಿಕೆಗಳು ತಲುಪುತ್ತಿವೆ ಎಂದರೆ ಅದರ ಹಿಂದೆ ವಿತರಕರ ಅಪಾರ ಪರಿಶ್ರಮ ಅಡಗಿದೆ. ಪತ್ರಿಕೆಯ ಜೀವನಾಡಿಯೆ ವಿತರಕರಾಗಿದ್ದಾರೆ, ಪತ್ರಿಕೆಯ ಎಲ್ಲಾ ವಿಭಾಗಗಳಲ್ಲು ಕೆಲಸವಾಗಿ ಅಂತಿಮ ಹಂತದಲ್ಲಿ ಪತ್ರಿಕೆ ಓದುಗನಿಗೆ ತಲುಪಿಲ್ಲ ಎಂದಾದಲ್ಲಿ ಪತ್ರಿಕೆಗೆ ಕುಂದುಂಟಾಗುತ್ತದೆ. ಕ್ಲಿಷ್ಟಕರವಾದ ಪತ್ರಿಕಾ ವಿತರಣೆಯ ಕಾರ್ಯದಲ್ಲಿ ತೊಡಗಿರುವ ವಿತರಕರ ಕ್ಷೇಮವನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರ ಸಂಘ ಹಾಗೂ ವಿತರಕರ ಸಂಘ ಸದಾ ಕಾರ್ಯೋನ್ಮುಖವಾಗಿರಬೇಕು ಎಂದು ಕರೆ ನೀಡಿದರು. *ವಿತರಕರ ಭವನ ನಿರ್ಮಾಣವಾಗಲಿ* ಮಳೆ, ಗಾಳಿ, ಚಳಿ ಎನ್ನದೆ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ವಿತರಕರ ಅನಕೂಲಕ್ಕಾಗಿ ನಗರದಲ್ಲಿ ‘ಪತ್ರಿಕಾ ವಿತರಕರ ಭವನ’ ನಿರ್ಮಾಣವಾಗಬೇಕು. ಈ ಕಾರ್ಯ ಜಿಲ್ಲಾಡಳಿತ ಅಥವಾ ನಗರಸಭೆಯಿಂದ ಆದರೆ ಉತ್ತಮ. ಇವರಿಗಾಗಿ ಪ್ರತ್ಯೇಕ ಭವನ ಇದ್ದಲ್ಲಿ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಚಟುವಟಿಕೆ, ಪತ್ರಿಕೆಗಳ ಸಂಗ್ರಹ ಹಾಗೂ ವಿತರಣೆಯ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದು ಟಿ.ಪಿ.ರಮೇಶ್ ತಿಳಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಅವರು ಪ್ರಾಕೃತಿಕ ಏರುಪೇರುಗಳ ನಡುವೆಯೂ ಪತ್ರಿಕೆ ಮತ್ತು ಓದುಗರ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುವ ವಿತರಕರನ್ನು ಗುರುತಿಸಿ, ಅವರ ಕಾರ್ಯವನ್ನು ಶ್ಲಾಘಿಸುವುದು ಅತ್ಯವಶ್ಯ. ಯಾವುದೇ ವೃತ್ತಿಯನ್ನು ಕಡೆಗಣಿಸುವಂತಿಲ್ಲ. ಮಾಡುವ ಕಾರ್ಯವನ್ನು ನಿಷ್ಠೆ ಮತ್ತು ಪ್ರೀತಿಯಿಂದ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದರು. ಮಹಾನ್ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡ ಹಲವರು, ತಮ್ಮ ಬದುಕಿನ ಆರಂಭಿಕ ಕಾಲಘಟ್ಟದಲ್ಲಿ ಪತ್ರಿಕಾ ವಿತರಣೆ ಮಾಡುತ್ತಿದ್ದುದನ್ನು ಸ್ಮರಿಸಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ ನಿಧಿಯನ್ನು ಸ್ಥಾಪಿಸಿದಲ್ಲಿ ಅಗತ್ಯ ನೆರವನ್ನು ನೀಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರು ಕೆಲ ದಶಕಗಳ ಹಿಂದೆ ಮನೆ ಮನೆಗೆ ನಡೆದುಕೊಂಡು ಹೋಗಿ ಪತ್ರಿಕಾ ವಿತರಣೆಯನ್ನು ಪತ್ರಿಕಾ ವಿತರಕರು ಮಾಡುತ್ತಿದ್ದಾರಾದರೆ, ಇಂದು ದ್ವಿಚಕ್ರವಾಹನಗಳು ವಿತರಕರ ನೆರವಿಗೆ ಬಂದಿದೆ ಎನ್ನುವುದನ್ನು ಬಿಟ್ಟಲ್ಲಿ ಉಳಿದೆಲ್ಲ ಕೆಲಸ ಕಾರ್ಯಗಳು ಹಿಂದಿನಂತೆಯೇ ನಡೆದುಕೊಂಡು ಬರುತ್ತಿದೆ. ಯಾವುದೇ ಸಂಕಷ್ಟದ ಅವಧಿಯಲ್ಲಿ ಜಿಲ್ಲೆಯ ಪತ್ರಿಕಾ ವಿತರಕರು ತಮ್ಮ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿದ್ದಾರೆ. ಪತ್ರಿಕಾ ವಿತರಣೆ ಎನ್ನುವುದನ್ನು ಕೇವಲ ಆರ್ಥಿಕ ದೃಷ್ಟಿಯಿಂದ ನೋಡುವುದರ ಬದಲಾಗಿ, ಪತ್ರಿಕೆಯ ಮೇಲಿನ ಪ್ರೀತಿಯಿಂದ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು. ದೃಶ್ಯ ಮಾಧ್ಯಮಗಳ ಭರಾಟೆಯ ನಡುವೆ ಮುದ್ರಣ ಮಾಧ್ಯಮ ಮರೆಯಾಗುವ ಆತಂಕ ಸೃಷ್ಟಿಯಾಗಿತ್ತು. ಆದರೆ, ಪತ್ರಿಕಾ ಮಾಧ್ಯಮ ಗಟ್ಟಿಯಾಗಿಯೇ ಮುಂದುವರೆದಿದೆ. ಇಂದಿನ ಸಾಮಾಜಿಕ ಜಾಲ ತಾಣಗಳಲ್ಲಿನ ವಿಚಾರಗಳು ಕೇವಲ ತಾತ್ಕಾಲಿಕ, ನೋಡಿ ಮರೆತುಹೋಗುವಂತದ್ದು. ಆದರೆ, ಪತ್ರಿಕೆಗಳಲ್ಲಿನ ವಿಚಾರಗಳು ಶಾಶ್ವತ ಮತ್ತು ಸಮಾಜದ ಪರಿಣಾಮಗಳನ್ನು ಬೀರುವಂತದ್ದೆನ್ನುವುದನ್ನು ಜನ ಅರ್ಥೈಸಿಕೊಂಡಿದ್ದಾರೆಂದು ಮುಕ್ತವಾಗಿ ನುಡಿದ ಅವರು, ಒಂದು ಪತ್ರಿಕೆಗೆ ಓದುಗರು, ಏಜೆಂಟರು,ವಿತರಕರು, ಜಾಹೀರಾತುದಾರರು ಮತ್ತು ಸಿಬ್ಬಂದಿ ವರ್ಗ ಆಧಾರ ಸ್ತಂಭವಾಗಿರುವುದಾಗಿ ಹೇಳಿದರು. ಯಾವುದೇ ಪತ್ರಿಕೆಯ ಓದುಗ ತನ್ನ ಓದನ್ನು ನಿಲ್ಲಿಸಿದ ಎಂದಲ್ಲಿ, ಅದು ಯಾವುದೋ ಒಂದು ವಿಧದಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇಂದಿನ ಯುವ ಸಮೂಹಕ್ಕೆ ಓದಿನ ಬಗ್ಗೆ ತಾಳ್ಮೆ ಇಲ್ಲವೆಂದು ಅಭಿಪ್ರಾಯಿಸಿ, ಜನರಲ್ಲಿ ಓದಿನ ಬಗ್ಗೆ ಪ್ರೇರಣೆಯನ್ನು ನೀಡುವ, ಮನವೊಲಿಸುವ ಕಾರ್ಯ ನಮ್ಮೆಲ್ಲರಿಂದ ನಡೆಯಬೇಕಾಗಿದೆಯೆಂದು ತಿಳಿಸಿದರು. *ನಿಧಿಗೆ 1 ಲಕ್ಷ ಘೋಷಣೆ* ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿದಲ್ಲಿ ಅದಕ್ಕೆ ಮೂಲ ಧನವಾಗಿ 1 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿ, ನಿಧಿಯ ಸ್ಥಾಪನೆಗೆ ಮೊದಲಾಗಿ ಅಗತ್ಯ ರೂಪುರೇಷೆಗಳನ್ನು ಮಾಡುವಂತೆ ಸೂಚಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ.ಮುರಳೀಧರ್ ಅವರು ಕೊಡಗು ಪತ್ರಕರ್ತರ ಸಂಘದಿಂದ 2022 ರಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆಯೆಂದು ತಿಳಿಸಿ, ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ಕ್ಷೇಮಾಭಿವೃದ್ಧಿ ನಿಧಿ ಆದಷ್ಟು ಶೀಘ್ರ ಚಾಲನೆ ನೀಡಬೇಕೆಂದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ನಿವೃತ್ತ ನೌಕರರು ಹಾಗೂ ಹಿರಿಯ ಪತ್ರಿಕಾ ಓದುಗ ಪಿ.ಎ.ನಾಣಯ್ಯ ಹಾಗೂ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಸತೀಶ್ ಉಪಸ್ಥಿತರಿದ್ದರು. ಪತ್ರಿಕಾ ವಿತರಕ ಸುಂಟಿಕೊಪ್ಪದ ವಸಂತ ಅವರು ಅಭಿಪ್ರಾಯ ಹಂಚಿಕೊಂಡರು. ಇದೇ ಸಂದರ್ಭ ಪತ್ರಿಕಾ ವಿತರಕರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ.ಮುರಳೀಧರ್ ಪ್ರಾರ್ಥಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಸ್ವಾಗತಿಸಿದರು. ಸಂಘದ ಸದಸ್ಯ ಪಿ.ಎಂ.ರವಿ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಅರುಣ್ ಕೂರ್ಗ್ ವಂದಿಸಿದರು.









