
ಕುಶಾಲನಗರ ಅ.9 NEWS DESK : ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ದೇಗುಲದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಹುಣ್ಣಿಮೆ ಅಂಗವಾಗಿ ಪೂಜಾ ಕಾರ್ಯಕ್ರಮವು ಜರುಗಿತು. ಅರ್ಚಕ ಪುರುಷೋತ್ತಮ್ ಭಟ್ ನೇತೃತ್ವದಲ್ಲಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು. ಬಾಲಾಜಿ ಕನಷ್ಟ್ರಕ್ಷನ್ ಮಾಲೀಕರಾದ ಸಂದೀಪ್, ಎಂ.ಆರ್.ಬಾಲ ಸೌಮ್ಯ ಮತ್ತು ಕುಟುಂಬಸ್ಥರು ಪೂಜಾ ಸೇವಾರ್ಥ ನೆರವೇರಿಸಿದರು.
ಸುನಂದ ಕೌಶಿಕ್ ಹಾಗೂ ಕುಟುಂಬಸ್ಥರು ಕಾವೇರಿ ಮಾತೆಗೆ ವಸ್ತ್ರ ವಿತರಿಸಿದರು. ಈ ವೇಳೆ ಮಾತನಾಡಿದ ಉದ್ಯಮಿ ಕೌಶಿಕ್, ಕಾವೇರಿ ನದಿಗೆ ತನ್ನದೆ ಪಾವಿತ್ರ್ಯತೆ ಇದೆ. ಈ ಬಗ್ಗೆ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಜನರಿಗೆ ಕಾವೇರಿ ಬಗ್ಗೆ ಪೂಜ್ಯ ಭಾವನೆ ಬರಬೇಕು. ನದಿಗೆ ಕಲುಷಿತ ನೀರನ್ನು ಹರಿಸಬಾರದು ಎಂಬ ಅರಿವು ಜನರಲ್ಲಿ ಬಂದಲ್ಲಿ ಮಾತ್ರ ಕಾವೇರಿ ಅಪವಿತ್ರವಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು. ಬಾಲಾಜಿ ಕನಷ್ಟ್ರಕ್ಷನ್ ಮಾಲೀಕರಾದ ಸಂದೀಪ್ ಮಾತನಾಡಿ, ಜೀವನದಿ ಕಾವೇರಿ ಮತ್ತು ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಕಾವೇರಿ ನದಿಯ ಸ್ವಚ್ಛತೆ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಿ ಸ್ವಚ್ಛ ಪರಿಸರದ ಉಳಿವಿಗೆ ಸಹಕರಿಸುವಂತೆ ಮನವಿ ಮಾಡಿದರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಾರವಿ ಕನ್ನಡ ಅಭಿಮಾನಿ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ಕಿಶೋರ್, ಸೋಮಶೇಖರ್, ದೀಪಾ ಪೂಜಾರಿ, ಚಂದ್ರು, ರುದ್ರ, ಮಂಜು, ಪ್ರಸಾದ್, ಬಸವೇಗೌಡ, ಸೇರಿದಂತೆ ಮತ್ತಿತರರು ಹಾಜರಿದ್ದರು.









