
ಮಡಿಕೇರಿ ಜೂ.20 NEWS DESK : ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವಿಮೆನ್ ಇಂಡಿಯಾ ಮೂವ್ಮೆಂಟ್ ನಗರದಲ್ಲಿ ಖಾಲಿ ಸಿಲಿಂಡರ್ ಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿತು. ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಅಡುಗೆ ಅನಿಲ ದರ ಹೆಚ್ಚಳವನ್ನು ತೀವ್ರವಾಗಿ ಖಂಡಿಸಿದರು. ವಿಮೆನ್ ಇಂಡಿಯಾ ಮೂವ್ಮೆಂಟ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಾಕಿಯಾ ಹುರೈರ ಮಾತನಾಡಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ಅಡುಗೆ ಅನಿಲದ ದರವನ್ನು 89 ರೂ.ಗಳಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ ಸರಕಾರಗಳು ಅಭಿವೃದ್ಧಿಯ ಬದಲಾಗಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿವೆ. ನಿತ್ಯೋಪಯೋಗಿ ಸಿಲಿಂಡರ್ಗಳೊಂದಿಗೆ ವಾಣಿಜ್ಯ ಸಿಲಿಂಡರ್ಗಳ ಬೆಲೆ ಗಗನಕ್ಕೇರಿದೆ. ಇದರಿಂದ ಹೊಟೇಲ್ ಸೇರಿದಂತೆ ವಿವಿಧ ಸಣ್ಣಪುಟ್ಟ ಆಹಾರ ಉತ್ಪಾದನಾ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೆÉೀಸರ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು, ಜನ ಸಾಮಾನ್ಯರ ಬದುಕನ್ನು ಹಸನಾಗಿಸುವ ನಿಟ್ಟಿನ ಕಾರ್ಯಗಳನ್ನು ನಡೆಸುತ್ತಿಲ್ಲ. ಅಡುಗೆ ಅನಿಲ ದರ ಹೆಚ್ಚಳದೊಂದಿಗೆ, ಪ್ರಸ್ತುತ ಆನ್ ಲೈನ್ನಲ್ಲಿ ಅಡುಗೆ ಸಿಲಿಂಡರ್ಗಳಿಗೆ ಬುಕ್ ಮಾಡಿದರು ಸಮರ್ಪಕವಾಗಿ ಸಿಲಿಂಡರ್ಗಳು ಲಭ್ಯವಾಗುತ್ತಿಲ್ಲ. ರಾಜ್ಯ ಸರಕಾರ ಗೃಹಲಕ್ಷ್ಮಿ, ಶಕ್ತಿ ಯೋಜನೆ ಮೊದಲಾದ ಭಾಗ್ಯಗಳನ್ನು ಜನರಿಗೆ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುತ್ತಿದೆ ಎಂದು ಟೀಕಿಸಿದರು. ಸಂಘಟನೆಯ ಕಾರ್ಯದರ್ಶಿ ರಿಶಾನ ತಹಸೀನ್ ಅವರು ಮಾತನಾಡಿ, ಉಜ್ವಲ ಹೆಸರಿನಲ್ಲಿ ಬಡ ಮಂದಿಗೆ ಉಚಿತವಾಗಿ ಅಡುಗೆ ಅನಿಲವನ್ನು ಒದಗಿಸಲಾಗುತಿತ್ತು. ಆದರೆ ಇಂದು ಅಡುಗೆ ಅನಿಲ ಸಮರ್ಪಕವಾಗಿ ದೊರಕದೆ, ಸೌದೆಯಿಂದ ಒಲೆ ಉರಿಸಬೇಕಾದ ಸಂಕಷ್ಟ ಎದುರಾಗಿದೆ. ಅಡುಗೆ ಅನಿಲ ದರವನ್ನು ಶೀಘ್ರ ಇಳಿಕೆ ಮಾಡಿ ಸಹಾಯಧನ ಒದಗಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಮೇರಿ ವೇಗಸ್, ಜಿಲ್ಲಾ ಸಮಿತಿ ಸದಸ್ಯರಾದ ತಾಹಿರ ಅಲಿ, ಜಸೀಲ, ತಾಹಿರ ಇಬ್ರಾಹಿಂ, ಫೌಝಿಯಾ ಮುನೀರ್ ಮತ್ತಿತರರು ಪಾಲ್ಗೊಂಡಿದ್ದರು.









