
ಮಡಿಕೇರಿ ಅ.9 NEWS DESK : ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಷ್ಟ್ರೀಯ ಸೇವಾ ಯೋಜನೆ ಪ್ರಯುಕ್ತ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ ‘ನಶಾ ಮುಕ್ತ ಭಾರತ ಅಭಿಯಾನ’ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಕಾರ್ಕಳದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪನಿರ್ದೇಶಕರಾದ ಮಾರುತಿ, ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರಗಳು ನೈಜ ಜೀವನದ ಪಾಠ ಕಲಿಸುವ ಪಾಠ ಶಾಲೆಯಂತಿವೆ. ಸಮಾಜ ಸೇವೆ ಎಂದರೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅದು ಜೀವನಪೂರ್ತಿ ಅಳವಡಿಸಿಕೊಳ್ಳಬೇಕಾದ ಮನೋಭಾವ’ ಎಂದು ಕರೆ ನೀಡಿದರು. ಸಂಸ್ಥೆಯ ಸಹ ಸಂಸ್ಥಾಪಕರಾದ ಎಸ್.ಎಲ್.ಅಶ್ವತ್ ಪ್ರಾಸ್ತಾವಿಕ ಮಾತನಾಡಿ ‘ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿದರೆ, ಶಿಕ್ಷಣದ ಗುರಿ ಸಾರ್ಥಕವಾಗುತ್ತದೆ’ ಎಂದು ಹೇಳಿದರು. ಮುಖ್ಯ ಅತಿಥಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಇಂದಿನ ಯುವಕರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು. ಶಿಬಿರಗಳಲ್ಲಿ ಬೆಳೆದ ಅನುಭವವು ಭವಿಷ್ಯದ ನಾಯಕರಾಗಿ ರೂಪಗೊಳ್ಳಲು ಸಹಾಯಕವಾಗುತ್ತದೆ’ ಎಂದರು. ಉದ್ಯಮಿ ವಿಜಯ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಕಾಡೆಮಿಕ್ ಯಶಸ್ಸಿನಲ್ಲೇ ಅಲ್ಲ, ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಾಗ ಮಾತ್ರ ನಿಜವಾದ ಶಿಕ್ಷಣದ ಅರ್ಥ ಸಾರ್ಥಕವಾಗುತ್ತದೆ’ ಎಂದು ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ಧನ ಇಡ್ಯಾ ರವರು ‘ಜೀವನದಲ್ಲಿ ದೊಡ್ಡ ಸ್ಥಾನ ಪಡೆಯುವುದಕ್ಕಿಂತ, ಒಳ್ಳೆಯ ಮಾನವಿಯ ಮೌಲ್ಯಗಳನ್ನು ಅಳವಡಿಸಿಕೊಂಡು ನಾಗರಿಕನಾಗುವುದು ಮುಖ್ಯ. ಈ ಶಿಬಿರದ ಅನುಭವಗಳು ನಿಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು. ನಂದಿನಿ ಶೆಟ್ಟಿ, ನ್ಯಾಯವಾದಿ ಮತ್ತು ನೋಟರಿ, ಕಾರ್ಕಳ ಇವರು ‘ಎನ್.ಎಸ್.ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ವೇದಿಕೆ ಆಗಿದೆ’ ಎಂದು ಅಭಿಪ್ರಾಯಪಟ್ಟರು. ವರ್ಮ ಅಜ್ರಿ, ವಿಶ್ರಾಂತ ಪ್ರಾಂಶುಪಾಲರು, ಎಂ.ಪಿ.ಎಂ ಕಾಲೇಜು, ಕಾರ್ಕಳ ಇವರು’ಯುವಕರು ರಾಷ್ಟ್ರದ ಶಕ್ತಿ. ಅವರಿಂದ ಪ್ರಾರಂಭವಾಗುವ ಪ್ರತಿಯೊಂದು ಸಣ್ಣ ಸೇವಾ ಚಟುವಟಿಕೆ ದೇಶದ ಅಭಿವೃದ್ಧಿಗೆ ದಾರಿ ತೋರಿಸಬಹುದು’ ಎಂದು ಹೇಳಿದರು. ಅನ್ನಪೂರ್ಣ ಕಾಮತ್, ಪ್ರಾಂಶುಪಾಲರು, ಸರಕಾರಿ ಪದವಿಪೂರ್ವ ಕಾಲೇಜು, ಕಾರ್ಕಳ ಇವರು ಎನ್.ಎಸ್.ಎಸ್ ಘಟಕದ ವತಿಯಿಂದ ನಡೆದ ಕಾರ್ಯವೈಖರಿಗಳನ್ನು ಶ್ಲಾಘಿಸಿ, ವಂದಿಸುತ್ತಾ ‘ವಿದ್ಯಾರ್ಥಿಗಳು ಶ್ರಮ, ಶಿಸ್ತು ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದ್ದು ಪ್ರಶಂಸನೀಯ. ಎನ್.ಎಸ್.ಎಸ್ ಕೇವಲ ಕಾರ್ಯಕ್ರಮವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಪಾಠವಾಗಿದೆ’ ಎಂದರು. :: ಪೌರ ಕಾರ್ಮಿಕರಿಗೆ ಸನ್ಮಾನ :: ಸಮಾರೋಪ ಕಾರ್ಯಕ್ರಮದಲ್ಲಿ 25 ವರ್ಷಗಳಿಗಿಂತಲೂ ಸುದೀರ್ಘ ಅವಧಿಯಿಂದ ಪೌರಕಾರ್ಮಿಕರಾಗಿ ದುಡಿದು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸುಧೀರ್, ಪೂವಪ್ಪ, ರವಿ, ನಾಗೇಶ್, ಸಂಜೀವ ಇವರನ್ನು ಎನ್.ಎಸ್.ಎಸ್ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಅತಿಥಿಗಳ ಸಮ್ಮುಖದಲ್ಲಿ ಶಿಬಿರವಾಣಿಯನ್ನು ಬಿಡುಗಡೆಗೊಳಿಸಲಾಯಿತು.ವಿದ್ಯಾರ್ಥಿಗಳಾದ ಹಿತ ಮತ್ತು ಅಕ್ಷರ್ 7 ದಿನಗಳ ಎನ್.ಎಸ್.ಎಸ್ ಘಟಕದ ಅನುಭವಗಳ ಕುರಿತು ಮಾತನಾಡಿದರು. ಎಲ್ಲಾ ಅತಿಥಿಗಳನ್ನು ಕಾರ್ಯಕ್ರಮದ ಸವಿನೆನಪಿನ ದ್ಯೋತಕವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಬಿ, ವಿದ್ವಾನ್ ಗಣಪತಿ ಭಟ್, ಆದರ್ಶ ಎಂ.ಕೆ ರವರು ಗೌರವ ಉಪಸ್ಥಿತಿ ವಹಿಸಿದ್ದರು. ಉಪನ್ಯಾಸಕರಾದ ಸಂತೋಷ್ ಸ್ವಾಗತಿಸಿ, ಶಿಬಿರಾಧಿಕಾರಿ ಉಮೇಶ್ ವಂದನಾರ್ಪಣೆಗೈದರು. ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.









