ವಿರಾಜಪೇಟೆ ಅ.24 NEWS DESK : ಶ್ರೀ ರಾಮ ಭಕ್ತರ ಬಳಗ ವತಿಯಿಂದ ಎರಡನೇ ವರ್ಷದ ರಕ್ತದಾನ ಶಿಬಿರ ನಡೆಯಿತು. ವಿರಾಜಪೇಟೆ ಪುರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಮ ಭಕ್ತರ ಬಳಗ ಅಧ್ಯಕ್ಷರಾದ ಬಿ.ಎಂ.ಕುಮಾರ್ ಅವರು ಮಾತನಾಡಿ, ರಕ್ತದಾನ ಶ್ರೇಷ್ಠ ದಾನ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಮಾನವರಿಗೆ ಮಾನವರೆ ರಕ್ತದಾನ ಮಾಡಬೇಕು, ಎರಡನೇ ಬಾರಿಗೆ ನಮ್ಮ ಮಹಿಳಾ ಸದಸ್ಯರಾದ ಸಂದ್ಯ ರಂಜನ್, ಅದೀತ ಮುತ್ತಮ್ಮ, ಹಾಗೂ ಹತ್ತೊಂಬತ್ತನೆ ಬಾರಿ ವಿರಾಜಪೇಟೆ ಮನೋಜ್, ನಲವತ್ತಾರು ಬಾರಿ ರಕ್ತದಾನ ಮಾಡಿದ ಸ್ನೇಕ್ ಸತೀಶ್, ಸೇರಿದಂತೆ ಹಲವಾರು ಮಂದಿ ಇಂದು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಇದೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ ನಾವು ನೀಡುವ ರಕ್ತದಲ್ಲಿ ಅನೇಕರ ಪ್ರಾಣವನ್ನು ಉಳಿಸಬಹುದು ಎಂದು ತಿಳಿಸಿದರು. ರಕ್ತದಾನ ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಸದಸ್ಯರಾದ ವಿವೇಕ್ ರೈ, ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.











