ಮಡಿಕೇರಿ ನ.20 NEWS DESK : ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಸಾಧನೆ ಮಾಡಬೇಕಾದರೆ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳುವಂತಾಗಬೇಕು ಎಂದು ಜಿ.ಪಂ.ಸಿಇಒ ಆನಂದ ಪ್ರಕಾಶ್ ಮೀನಾ ಅವರು ಹೇಳಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ವತಿಯಿಂದ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025 ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು ಮಾತನಾಡಿ ಪ್ರತೀ ವರ್ಷವೂ ನವೆಂಬರ್ 14 ರಿಂದ ಒಂದು ವಾರ ಕಾಲ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ನಡೆಸಲಾಗುತ್ತದೆ. ನೆಹರೂ ಅವರ ಜನ್ಮದಿನಾಂಕದಿಂದ ಇದು ಒಂದು ವಾರ ನಡೆಯುತ್ತದೆ ಎಂದರು. ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ದಿವಂಗತ ಡಾ.ಎಸ್.ಆರ್.ರಂಗನಾಥನ್ (1892-1972) ಅವರ ನೆನಪಿನಲ್ಲಿ ಈ ಸಪ್ತಾಹ ನಡೆಸಲಾಗುತ್ತದೆ. ಗ್ರಂಥಾಲಯ ವಿದ್ವಾಂಸರಾದದ್ದು ಆನಂತರ, ಮೂಲತಃ ಅವರು ಖ್ಯಾತ ಗಣಿತಶಾಸ್ತ್ರಜ್ಞರೂ ಶಿಕ್ಷಣ ತಜ್ಞರೂ ಆಗಿದ್ದರು. ಕರ್ನಾಟಕದ ಮಂಗಳೂರಿನ ಸರಕಾರಿ ಕಾಲೇಜಿನಲ್ಲೂ ಅವರು ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರೆಂಬುದು ಕನ್ನಡದ ಹೆಮ್ಮೆ. ಅವರು ಗ್ರಂಥಾಲಯಗಳ ವಿಕಾಸಕ್ಕೆ ತಮ್ಮ ಅರಿವಿನ ಮೂಲಕ ಹೊಸ ನಿಯಮಗಳನ್ನು ರೂಪಿಸಿ ಒಂದು ಚೌಕಟ್ಟನ್ನು ಹಾಕಿ ಕೊಟ್ಟವರು ಎಂದು ನುಡಿದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ಅವರು ಮಾತನಾಡಿ ಪುಸ್ತಕಗಳನ್ನು ಓದುವುದರಿಂದ ಅಭಿವೃದ್ಧಿಗೆ ಸಹಕಾರಿ ಆಗಿದೆ ಎಂದು ಹೇಳಿದರು. ಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನ ದೇಗುಲ ಬಾಗಿಲು ತರಿಸುವಂತೆ ಆಗಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕವನ್ನು ಓದಲು ಅನುಮೋದನೆ ನೀಡಬೇಕು. ಸಾಧನೆಗಳಿಗೆ ಸೂಕ್ತವಾಗಿರುವುದು ಗ್ರಂಥಾಲಯವಾಗಿದೆ ಎಂದು ಹೇಳಿದರು. ಸಹಾಯಕ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ.ದೀಕ್ಷಿತಾ ವರ್ಕಾಡಿ ಅವರು ಮಾತನಾಡಿ ಬದುಕನ್ನು ಬದಲಾಯಿಸಿಕೊಳ್ಳಲು ಒಳ್ಳೆಯ ಪುಸ್ತಕ ಓದಬೇಕು. ಪುಸ್ತಕ ಓದುವುದರಿಂದ ದಾರಿದೀಪವನ್ನಾಗಿ ರೂಪಿಸಿಕೊಳ್ಳಲು ಸಾಧ್ಯ ಹಾಗೂ ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ ಎಂದರು. ಭಾರತದಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರಾದ ದಿವಂಗತ ಡಾ.ಎಸ್ ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಸುರೇಖಾ ಸ್ವಾಗತಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಂಚಾರಿ ಗ್ರಂಥಾಲಯ ಮೇಲ್ವಿಚಾರಕರಾದ ನಾಗವೇಣಿ ಪ್ರಾರ್ಥಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.











