ಮಡಿಕೇರಿ ನ.21 NEWS DESK : ಪಾರಾಣೆಯಲ್ಲಿ ಶಾಸಕರ ಅನುದಾನ ರೂ.20 ಲಕ್ಷಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಪೆವಿಲಿಯನ್ ಕಟ್ಟಡವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ ಕೇಂದ್ರ ಕ್ರೀಡಾ ಮಂಡಳಿಯ ಗ್ರಾಮಾಂತರ ಕ್ರೀಡಾಕೂಟದ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಾಸಕರು ಕ್ರೀಡಪಟುಗಳಿಗೆ ಶುಭಹಾರೈಸಿದರು. ನೂತನ ಪೆವಿಲಿಯನ್ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕರು, ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಲು ಪ್ರೇಕ್ಷಕರ ಅಗತ್ಯತೆ ತುಂಬಾ ಮುಖ್ಯ. ಕ್ರೀಡೆಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅನುಕೂಲವಾಗಲೆಂದು ಈ ಪೆವಿಲಿಯನ್ ಕಟ್ಟಡದ ನಿರ್ಮಾಣವಾಗಿದ್ದು, ಇದರ ಸದುಪಯೋಗವನ್ನು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕ್ಷೇತ್ರದಲ್ಲಿನ ಆಟದ ಮೈದಾನಗಳಿಗೆ ಹಾಗೂ ಕ್ರೀಡಾ ಅಭಿವೃದ್ಧಿಗೆ ತಾನು ಸರಕಾರದಿಂದ ಅನೇಕ ಯೋಜನೆಗಳನ್ನು ತಂದಿದ್ದು, ಇದರಲ್ಲಿ ಕ್ರೀಡಾ ತರಬೇತಿ ಕೇಂದ್ರ, ಕ್ರೀಡಾ ವಸತಿ ನಿಲಯಗಳ ನಿರ್ಮಾಣ ಹಾಗೂ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತು ನೀಡುತ್ತಿರುವುದಾಗಿ ಹೇಳಿದರು. ಇಂತಹ ಕ್ರೀಡಾಂಗಣಗಳು ಸ್ಥಳೀಯ ಕ್ರೀಡಾ ಪ್ರತಿಭೆಗಳ ಏಳಿಗೆಗೆ ಸಹಕಾರಿಯಾಗಲಿದ್ದು ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು. ಬಳಿಕ ಗ್ರಾಮಾಂತರ ಕ್ರೀಡಾಕೂಟಕ್ಕೆ ಶುಭಕೋರಿದ ಶಾಸಕರು, ಇಂತಹ ಕ್ರೀಡಾಕೂಟಗಳು ಗ್ರಾಮೀಣ ಕ್ರೀಡೆಯನ್ನು ಪೋಷಿಸಿ ಬೆಳೆಸುವುದಕ್ಕೆ ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಬೊಳ್ಳಂಡ ಶೇರಿ ಗಿರೀಶ್, ವಲಯ ಅಧ್ಯಕ್ಷರು ದಿಲೀಪ್, ನಾಪೋಕ್ಲು ಪ್ರಚಾರ ಸಮಿತಿಯ ಬಲ್ಯಾಟಂಡ ಕೌಶಿಕ್, ನಾಯಕಂಡ ಕುಂಜಣ್ಣ ಕ್ರೀಡಾ ಮಂಡಳಿ ಅಧ್ಯಕ್ಷರು ಸಾಬ ದೇವಯ್ಯ, ಪಂಚಾಯಿತಿ ಅಧ್ಯಕ್ಷರು ಕಟ್ಟಿ ಕುಶಾಲಪ್ಪ, ದತ್ತಿ ನಿಧಿ ಅಧ್ಯಕ್ಷರು ದೀಪು ಚಂಗಪ್ಪ ,ಕಾರ್ಯದರ್ಶಿ ರಾಜೇಶ್ ಮುದ್ದಪ್ಪ, ಸುರೇಶ್, ಅಜ್ಜಿಕುಟ್ಟಿರ ಗಿರೀಶ್, ಮನು, ಬಟ್ಟಕಳ್ಳಂಡ ರಾಜ, ಮುತ್ತಪ್ಪ, ಗ್ರಾಮಸ್ಥರು ಉಪಸ್ಥಿತರಿದ್ದರು.











