ಪುತ್ತೂರು ನ.27 NEWS DESK : ಹೊಸತನದ ಮತ್ತು ಶ್ರೇಷ್ಟವಾದ ವಿಚಾರಗಳನ್ನು ಕಷ್ಟಪಟ್ಟಾದರೂ ಕಲಿಯಬೇಕು. ಕಲಿಯುವ ವಿಷಯದಲ್ಲಿ ನಾವು ಪರಿಣಿತರಾದರೆ ಅದು ಜ್ಞಾನದ ಜತೆಯಲ್ಲಿ ಸಾಮಾಜಿಕ ಸ್ಥಾನಮಾನವನ್ನೂ ತಂದುಕೊಡುತ್ತದೆ ಎಂದು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಸೋಸಿಯೇಟ್ ಫ್ರೊಫೆಸರ್ ಡಾ.ಪಲ್ಲವಿ.ಕೆ.ಎನ್ ಹೇಳಿದರು. ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಭಾರತೀಯ ತಾಂತ್ರಿಕ ಶಿಕ್ಷಣ ಸಂಘ ನವದೆಹಲಿ, ವಿವೇಕಾನಂದ ಸಂಶೋಧನಾ ಕೇಂದ್ರ ಪುತ್ತೂರು, ಇನ್ಸ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ ಮತ್ತು ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಾವರ್ಕರ್ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ-2025 ಕ್ಕೆ ಚಾಲನೆ ನೀಡಿ ಮಾತಾಡಿದರು. ಪ್ರಸಕ್ತ ಸನ್ನಿವೇಶದಲ್ಲಿ ಕಾರ್ಯಕ್ಷೇತ್ರದಲ್ಲಿ ಒದಗಿಬರುವ ಸವಾಲುಗಳನ್ನು ಎದುರಿಸಲು ಅಪಾರವಾದ ಮತ್ತು ಅಗಾಧವಾದ ಜ್ಞಾನಶಕ್ತಿ ಹಾಗೂ ಮನೋಶಕ್ತಿಗಳು ಅಗತ್ಯ ಎಂದರು. ಪ್ರತಿಯೊಬ್ಬರೂ ಕೂಡಾ ತಾವು ಕಲಿತ ತಂತ್ರಜ್ಞಾನಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು, ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವ ಮೂಲಕ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ಮಾತನಾಡಿ ಯೋಚನೆಗಳನ್ನು ಯೋಜನೆಗಳನ್ನಾಗಿಸಿ ಅದಕ್ಕೊಂದು ಸ್ವಾರೂಪವನ್ನು ಕೊಟ್ಟು ಉತ್ಪನ್ನವಾಗಿಸುವ ನಿಟ್ಟಿನಲ್ಲಿ ಕಾಲೇಜು ಪ್ರೋತ್ಸಾಹವನ್ನು ನೀಡುತ್ತಿದೆ ಎಂದರು. ಈ ಉತ್ಪನ್ನಗಳು ಸಮಾಜದ ಒಳಿತಿಗೆ ಸಹಕಾರಿಯಾಗುವ ರೀತಿಯಲ್ಲಿ ಯೋಜನೆಯನ್ನು ತಯಾರಿಸುವುದು ಆವಶ್ಯಕ ಅದಕ್ಕಾಗಿ ಹೆಚ್ಚಿನ ಶ್ರಮವಹಿಸಿ ಯೋಜನೆಗಳನ್ನು ತಯಾರಿಸಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ ಯಾವುದೇ ಕೆಲಸವನ್ನು ಮಾಡುವುದಕ್ಕೂ ಆತ್ಮವಿಶ್ವಾಸ ಅತೀ ಅಗತ್ಯ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ವ್ಯಕ್ತಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾನೆ ಎಂದರು. ಕಾಲೇಜು ವಿದ್ಯಾರ್ಜನೆಗೆ ಪೂರಕವಾದ ಅನೇಕ ಚಟುವಟಿಕೆಗಳನ್ನು ನಡೆಸುತ್ತದೆ. ಪಾಠದ ಜತೆಗೆ ನೈತಿಕ ಮೌಲ್ಯವನ್ನು ಬೆಳೆಸುವುದಕ್ಕೂ ಸಹಕರಿಸುತ್ತದೆ ಎಂದರು. ಇಲ್ಲಿ ಮಂಡಿಸಿದ ಎಲ್ಲಾ ಪ್ರೌಢ ಪ್ರಬಂಧÀಗಳನ್ನು ಮುದ್ರಿಸಿದ ಸಂಚಿಕೆಯನ್ನು ಅತಿಥಿಗಳು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಜ್ಞಾನ ಸಂಗಮ 2025ರ ಸಹ ಸಂಯೋಜಕಿ ಪ್ರೊ.ರಶ್ಮಿ.ಪಿ.ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ್ಞಾನ ಸಂಗಮ 2025ರ ಸಂಯೋಜಕ ಪ್ರೊ.ವೆಂಕಟೇಶ್.ವೈ.ಸಿ ಸ್ವಾಗತಿಸಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ಅಜಿತ್ ಹೆಬ್ಬಾರ್ ವಂದಿಸಿದರು. ಉಪನ್ಯಾಸಕಿ ಪ್ರೊ.ಶ್ರೀಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.











