
ಮಂಗಳೂರು ಡಿ.2 NEWS DESK : ಜಾತಿ, ಧರ್ಮಗಳ ನಡುವೆ ತಿಕ್ಕಾಟವನ್ನು ಬಿಟ್ಟು ಪರಸ್ಪರ ಸಾಮರಸ್ಯದ ಬದುಕು ನಡೆಸುವ ಶಾಂತಿಯುತ ಸಮಾಜ ನಿರ್ಮಾಣ ಶಿಕ್ಷಣದ ಭಾಗವಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ದಯಾನಂದ ನಾಯ್ಕ್ ಹೇಳಿದರು. ಅಹ್ಮದಿಯಾ ಮುಸ್ಲಿಂ ಜಮಾಅತ್ ಮಂಗಳೂರು ಘಟಕದ ವತಿಯಿಂದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಜರುಗಿದ ‘ಜಾಗತಿಕ ಶಾಂತಿ ಸ್ಥಾಪನೆಯಲ್ಲಿ ಶಿಕ್ಷಣದ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಪ್ರಸ್ತುತ ವ್ಯವಸ್ಥೆಯಲ್ಲಿ ರಾಜಕೀಯ ಚದುರಂಗದ ಆಟಕ್ಕೆ ಯುವ ಜನಾಂಗ ಬಲಿಯಾಗುತ್ತಿದ್ದು, ದೇಶದಲ್ಲಿನ ಉಗ್ರವಾದ, ರಾಷ್ಟ್ರವಾದವು ಇತರರನ್ನು ಪ್ರೀತಿಯಿಂದ ನೋಡದೆ ರಾಷ್ಟ್ರ, ಸಮುದಾಯ, ಜಾತಿ ಮತ ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗಿದೆ. ರಾಷ್ಟ್ರ, ಸಮುದಾಯ ಎಂಬುವುದು ಬೇರೆಲ್ಲೂ ಇಲ್ಲ, ಅದು ನಮ್ಮೊಳಗೆ ಇದೆ.’ಈ ಮನಸ್ಸಿನ ಮುಸುರೆ ತೊಳೆಯಬೇಕು, ಗುಸು ಗುಸು ಬಿಡಬೇಕು’ ಎಂಬ ಸಂತರ ನುಡಿಯಂತೆ ಭೇದ ಭಾವ ಮರೆತು ಎಲ್ಲರೂ ಬಾಳುವ ‘ಸರ್ವರಿಗೂ ಸಮಬಾಳು, ಸಮಪಾಲು’ ಎನ್ನುವ ಸಮಾಜ ನಿರ್ಮಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ವಿವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣಪತಿ ಗೌಡ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ವಿಭಜನಕಾರಿ ವಾತಾವರಣ ಸೃಷ್ಟಿಯಾದಾಗ ಅವುಗಳನ್ನು ಪರಸ್ಪರ ಮಾತುಕತೆ ಮತ್ತು ಚರ್ಚೆಯ ಮೂಲಕ ಬಗೆಹರಿಸಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು. ಅಹ್ಮದಿಯಾ ಮುಸ್ಲಿಂ ಜಮಾಅತಿನ ಭಾರತ ಘಟಕದ ಮಾಜಿ ಮುಖ್ಯ ಕಾರ್ಯನಿರ್ವಾಹಕರಾದ ಶಿರಾಜ್ ಅಹ್ಮದ್ ಮಾತನಾಡಿ, ಇಸ್ಲಾಂ ಧರ್ಮವು ಶಾಂತಿಯನ್ನು ಪ್ರತಿಪಾದಿಸುತ್ತದೆ.ಆದರೆ ಉನ್ನತ ಶಿಕ್ಷಣ ಪಡೆದ ಕೆಲವು ಮತಾಂಧರು ಧರ್ಮ,ದೇವರ ಹೆಸರಿನಲ್ಲಿ ಹತ್ಯೆ ಮಾಡುತ್ತಿದ್ದಾರೆ.ಇದು ಅತ್ಯಂತ ಖಂಡನೀಯವಾಗಿದ್ದು ಇಸ್ಲಾಂ ಧರ್ಮವು ಎಂದಿಗೂ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ.ಭಗವದ್ಗೀತೆ,ಖುರಾನ್,ಬೈಬಲ್ ಮುಂತಾದ ಪವಿತ್ರ ಗ್ರಂಥಗಳು ಮಾನವೀಯತೆಯ ಮಹತ್ವವನ್ನು ಸಾರುತ್ತವೆ ಎಂದರು. ಸೈಂಟ್ ಅಲೋಶಿಯಸ್ ಕಾಲೇಜಿನ ಕುಲಸಚಿವರಾದ ಡಾ.ರೊನಾಲ್ಡ್ ನಜರೆತ್ ಮಾತನಾಡಿ ಪ್ರೀತಿ ಹೃದಯದ ಭಾಷೆ,ಶಾಂತಿ ಹೃದಯದ ಜಾಗತಿಕ ಭಾಷೆ, ಪ್ರೀತಿಯ ಪ್ರತಿಬಿಂಬವೇ ಶಾಂತಿ.ವಿಶ್ವಶಾಂತಿಯ ಮರುಸ್ಥಾಪನೆಗೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶಾಲ ಮನೋಭಾವ ಇಂದಿನ ಅಗತ್ಯವಾಗಿದೆ.ಕುಟುಂಬದ,ದೇಶದ ಹಾಗೂ ವಿಶ್ವಶಾಂತಿಯ ಬೀಜ ನಮ್ಮ ಆತ್ಮದಲ್ಲಿ ಅಂಕುರಿಸಿ ಅರಳಬೇಕು ಎಂದರು. ಕೊಡಗು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಎನ್.ಕೆ.ಸುದರ್ಶನ್ ಕುಮಾರ್ ಮಾತನಾಡಿ ಜಗತ್ತಿನ ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ ವಲಯದಲ್ಲಿ ಸುಮಾರು ಹದಿನಾಲ್ಕು ಸಾವಿರ ಶಾಲೆಗಳು ಮುಚ್ಚಲ್ಪಟ್ಟಿದ್ದು 16.5 ಮಿಲಿಯನ್ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ಶಿಕ್ಷಣದಿಂದ ಜಾಗತಿಕ ಶಾಂತಿ, ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ.ಜಾಗತಿಕ ಶಾಂತಿಯ ನಿಟ್ಟಿನಲ್ಲಿ ಜಗತ್ತಿನ ವಿವಿಧೆಡೆಗಳಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸುತ್ತಿರುವ ಅಹ್ಮದಿಯಾ ಜಮಾಅತಿನ ಸಮಾಜಮುಖಿ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಶಾಂತಿ ವಿಚಾರ ಸಂಕಿರಣದಲ್ಲಿ ರೋಶನಿ ನಿಲಯದ ಸ್ನಾತಕೋತ್ತರ ಅಧ್ಯಯನದ ಡೀನ್ ಮೀನಾ ಜೂಲಿಯೆಟ್ ಮೊಂತೆರೊ,ಡಾ.ಎಂ.ವಿ.ಶೆಟ್ಟಿ ವಿದ್ಯಾಸಂಸ್ಥೆಯ ಪ್ರಾಧ್ಯಾಪಕಿ ಪ್ರಜ್ಞಾಕೃಷ್ಣನ್,ಅಹ್ಮದಿಯಾ ಮುಸ್ಲಿಂ ಜಮಾಅತಿನ ಮಂಗಳೂರು ಘಟಕದ ಅಧ್ಯಕ್ಷ ಬಿ.ಎಸ್.ಅಬ್ದುಲ್ ರಹೀಂ,ಯುಗರಶ್ಮಿ ಪತ್ರಿಕೆಯ ಸಂಪಾದಕ ಮೊಹಮ್ಮದ್ ಯೂಸುಫ್ ಮಾತನಾಡಿದರು. ಧರ್ಮಗುರು ಕೆ.ವಿ.ಮೊಹಮ್ಮದ್ ತಾಹಿರ್ ಹಾಜರಿದ್ದರು.ಲೈಜ್ ಅಹ್ಮದ್ ಹಾಗೂ ಸುಹೇಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.









