
ಸೋಮವಾರಪೇಟೆ ಡಿ.16 NEWS DESK : “ಕಣಿವೆ ಕಟ್ಟೆ”ಕೊಡಗು ಬಳಗದ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಶ್ರೀ ಶಿವ ಬಸವೇಶ್ವರ ದೇವಸ್ಥಾನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಯಡವನಾಡು ಗ್ರಾಮದ ಶ್ರೀ ಶಿವ ಬಸವೇಶ್ವರ ದೇವಸ್ಥಾನದ ಆವರಣದ ಹಸಿರು ಪರಿಸರದ ಅಂಗಳದಲ್ಲಿ ಆಹ್ವಾನಿತ ಕವಿಗಳಿಂದ ಏರ್ಪಡಿಸಿದ್ದ ಕವಿಗೋಷ್ಠಿ ಕಾರ್ಯಕ್ರಮವು ಸಾಹಿತ್ಯಾಸಕ್ತರ ಮನೆಸೂರೆಗೊಂಡಿತು. ಯಡವನಾಡು ಗ್ರಾಮದ ಹಸಿರು ಪರಿಸರದ ಮಧ್ಯೆ ಪ್ರಕೃತಿ ಮಡಲಲ್ಲಿ ತೇಲಿ ಬಂದ ಕವನಗಳು. ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಸಭಿಕರನ್ನು ರಂಜಿಸಿದರು.
ಪ್ರಕೃತಿ ಮಡಿಲಲ್ಲಿ ಕವನಗಳ ಸಾಗರದಲ್ಲಿ ಮಿಂದೆದ್ದ ಸಹೃದಯರು. ಕಣಿವೆ ಕಟ್ಟೆ ಕೊಡಗು ಬಳಗದ ವತಿಯಿಂದ ಹಸಿರು ಪ್ರಕೃತಿ ಪರಿಸರದ ಮಧ್ಯೆ
ಯಡವನಾಡು ಗ್ರಾಮದ ಹಸಿರು ಬನದ ಶ್ರೀ ಶಿವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಒಟ್ಟು 28 ಮಂದಿ ವಾಚಿಸಿದ
ಕವನಗಳು ಕೇಳುಗರ ಮನೆಸೂರೆಗೊಂಡವು. ಹಸಿರು ಪರಿಸರವನ್ನು ಹೊದ್ದುಕೊಂಡಿರುವ ಯಡವನಾಡು ಗ್ರಾಮದ ಶಿವ ಬಸವೇಶ್ವರ ದೇವಸ್ಥಾನವು
ಹಸಿರು ಪರಿಸರದ ಮಧ್ಯೆ ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸುವುದೇ ಆನಂದ. ಇದು ಕೆಲವು ಕವಿಗಳಿಗೆ ಸ್ಥಳದಲ್ಲೇ ಕಾವ್ಯ ರಚಿಸಲು ಮುದ ನೀಡಿತು. :: ಕವನಗಳ ರಚನೆ ಕುರಿತು :: ಉತ್ತಮ ಕವನಗಳನ್ನು ರಚನೆ ಮಾಡುವ ಕುರಿತು ಮಾತನಾಡಿದ ಕವಿಯಿತ್ರಿಯೂ ಆದ ಕುಶಾಲನಗರ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಬದುಕಿನ ಮಹತ್ವ ಮತ್ತು ಜಗತ್ತಿನಾದ್ಯಂತದ ಜ್ಞಾನ ಮತ್ತು ವಾಸ್ತವ ಸಂಗತಿಯ ಅರಿವನ್ನು ಎಲ್ಲರಿಗೂ ಮುಟ್ಟಿಸುವುದು ಕಾವ್ಯವಾಗಿದೆ. ಸಾಹಿತ್ಯದ ಅಸ್ತಿತ್ವ ಹಾಗೂ ಮೂಲಗುಣ ಕಾವ್ಯದಲ್ಲಿ ಅಡಗಿದೆ ಎಂದರು. ಕವನ ರಚನೆ ಹಾಗೂ ಅದನ್ನು ಪ್ರಸ್ತುತ ಪಡಿಸುವುದು ಒಂದು ಕಲೆ. ಕವಿತೆ ಹುಟ್ಟಬೇಕೇ ಹೊರತು ಕಟ್ಟಬಾರದೆಂಬ ಪ್ರಜ್ಞೆ ಕವಿಗಳಿಗಿರಬೇಕು. ಕವಿತೆಗಳು ಶಬ್ದಗಳ ಗದ್ದಲ ಆಗಬಾರದು. ಅವುಗಳು ಬದುಕಿನ ಅರ್ಥ ಕೊಡುವ ಹಾಗೂ ಮೌನ ಆವರಿಸುವ ಭಾವನೆಗಳಿಂದ ಕೂಡಿರಬೇಕು.ಉಕ್ಕಿ ಹರಿಯುವ ಪ್ರಭಾವಶಾಲಿ ಭಾವನೆಗಳೇ ಕವಿತೆಗಳಾಗಿ ಹೊರ ಹೊಮ್ಮತ್ತವೆ ಎಂದರು. ಕವಿಯಾದವನು ಪದ ಬಳಕೆಯಲ್ಲಿ ನಿಪುಣನೂ ಜಿಪುಣನೂ ಆಗಿರಬೇಕು. ಕಡಿಮೆ ಪದಗಳಲ್ಲಿ ಆಳವಾದ ಅರ್ಥ ಧ್ವನಿಸುವಂತಿರಬೇಕು. ಕವಿಗಳ ಕವಿತೆಗೆ ಓದುಗ ಮತ್ತು ಕೇಳುಗರನ್ನು ಇಂತಹ ಕವಿಗೋಷ್ಟಿಗಳು ಸೃಷ್ಟಿಸಿ, ಕವಿಗಳಿಗೆ ಸ್ಪೂರ್ತಿ ತುಂಬಿ ಪ್ರೋತ್ಸಾಹಿಸುತ್ತದೆ ಎಂದು ಲೀಲಾಕುಮಾರಿ ಹೇಳಿದರು. ಕವಿಗೋಷ್ಢಿ ಉದ್ಘಾಟಿಸಿ ತಮ್ಮ ಕವನ ವಾಚಿಸಿದ ಸಾಹಿತಿ ತಾಲ್ಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಕೆ.ಭರತ್ ಮಾತನಾಡಿ, ಹಮ್ಮು ಬಿಮ್ಮುಗಳಿಂದ ಬೀಗುವ ಮಾನವನನ್ನು ಬಾಗಿಸುವ ಶಕ್ತಿ ಸೃಜನಾತ್ಮಕ ಕಲೆಗಳಿಗಿವೆ. ನಿರಂತರ ಅಧ್ಯಯನದಿಂದ ಉತ್ತಮ ಕವಿತೆ ರಚನೆ ಮತ್ತು ಸಾಹಿತ್ಯ ಬರವಣಿಗೆ ಪಕ್ವಗೊಳ್ಳುತ್ತದೆ. ನಾವು ಬರೆದಷ್ಟು, ಕಲಿತಷ್ಟು ನಾವು ಬಾಗಬೇಕು.ಈ ನೆಲದ ಕಂಪು,ಸತ್ವ,ಕಥೆ ,ಕವನಗಳು ನಮ್ಮ ಬರವಣಿಗೆಯಲ್ಲಿ ಮೂಡುವುದು ಸಾಧ್ಯವಾಗಬೇಕು ಎಂದರು. ಕಣಿವೆ ಕಟ್ಟೆಯ ಇಂತಹ ಸಾಹಿತ್ಯಕ ಕಾರ್ಯಕ್ರಮಗಳ ಮೂಲಕ ನಮ್ಮ ಬರವಣಿಗೆ ಮತ್ತು ಬರಹಗಾರರ ಭೇಟಿ, ಸಾಹಿತ್ಯ ಸಂವಾದದಂತಹ ಚಟುವಟಿಕೆಗಳು ಸಾಧ್ಯವಾಗುತ್ತಿದೆ. ಈ ಸಂಸ್ಥೆಯ ವತಿಯಿಂದ ಇದು ನಿರಂತರ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ಸಾಹಿತಿ ಭಾರದ್ವಾಜ ಕೆ.ಆನಂದತೀರ್ಥ ಮಾತನಾಡಿ, ಕಣಿವೆ ಕಟ್ಟೆ ವತಿಯಿಂದ ಪ್ರಾಪಂಚಿಕ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಸಲ ಒಬ್ಬರಿಂದ ಒಂದು ಹಾಡು ಕಾರ್ಯಕ್ರಮದ ಮೂಲಕ ಹಳೆಯ ಚಲನಚಿತ್ರ ಗೀತೆಗಳನ್ನು ಹಾಡುವಂತಹ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಯಡವನಾಡು ಗ್ರಾಮದಲ್ಲಿ ಕವಿಗೋಷ್ಠಿ ಸಂಘಟಿಸಲು ದೇವಸ್ಥಾನ ಸಮಿತಿಯವರು ಹಾಗೂ ಗ್ರಾಮಸ್ಥರು ನೀಡಿರುವ ಪ್ರೀತಿ ಮತ್ತು ಆತಿಥ್ಯ ನಿಜಕ್ಕೂ ಮಾದರಿಯಾದುದು ಎಂದರು. ಕವಿಗಳು ಉತ್ತಮ ಕವನ ರಚನೆ ಮಾಡುವುದರ ಜೊತೆಗೆ ಕವನ ವಾಚನ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್, ತಮ್ಮ ಗ್ರಾಮದ ಹಸಿರು ಪರಿಸರದಲ್ಲಿ ಕವಿಗೋಷ್ಠಿ ಏರ್ಪಡಿಸುವ ಮೂಲಕ ಗ್ರಾಮಸ್ಥರಲ್ಲಿ ಕಾವ್ಯದ ಸದಭಿರುಚಿ ಮೂಡಿಸಿರುವುದು ತಮಗೆಲ್ಲರಿಗೂ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಕಣಿವೆ ಕಟ್ಟೆಯ ವತಿಯಿಂದ ಇನ್ನುಮುಂದೆ ನಡೆಸುವ ಸಾಹಿತ್ಯ – ಕಾವ್ಯ ಲಹರಿಯಂತಹ ಯಾವುದೇ ಸದಭಿರುಚಿಯ ಕಾರ್ಯಕ್ರಮಗಳ ಸಂಘಟನೆಗೆ ಗ್ರಾಮಸ್ಥರ ವತಿಯಿಂದ ಸಹಕಾರ ನೀಡಲಾಗುವುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಣಿವೆ ಕಟ್ಟೆ ಕೊಡಗು ಬಳಗದ ಚಟುವಟಿಕೆಗಳ ಕುರಿತು ಮಾತನಾಡಿದ ಬಳಗದ ಸಂಚಾಲಕ ಟಿ..ಜಿ. ಪ್ರೇಮಕುಮಾರ್, ಬಳಗದ ವತಿಯಿಂದ ಸಾಹಿತ್ಯ, ಕವಿಗೋಷ್ಠಿ, ಪ್ರಚಲಿತ ವಿಷಯಗಳ ಕುರಿತಂತೆ ಚರ್ಚೆ, ಸಂವಾದದಂತಹ ವೈವಿಧ್ಯಮಯ ಚಟುವಟಿಕೆಗಳನ್ನು ಸಂಘಟಿಸಲಾಗುವುದು ಎಂದರು.
ಕವಿಗೋಷ್ಠಿ ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಗ್ರಾಮದ ಯುವ ಕವಿ ಹೇಮಂತ್ ಪಾರೇರ ಮಾತನಾಡಿ, ಸಾಹಿತಿ ಭಾರದ್ವಾಜ್ ಅವರ ಮಾರ್ಗದರ್ಶನದಲ್ಲಿ ಕವಿಗೋಷ್ಢಿ ಸಂಘಟಿಸುವ ಮೂಲಕ ಕಾಡಂಚಿನ ತಮ್ಮ ಗ್ರಾಮಕ್ಕೆ ಕವಿಗಳು ಆಗಮಿಸಿ ಸುಶ್ರಾವ್ಯವಾಗಿ ತಮ್ಮ ಕವಿತೆಗಳನ್ನು ವಾಚಿಸಿದ್ದು ತಮಗೆ ತುಂಬಾ ಸಂತಸ ತಂದಿದೆ ಎಂದರು. ಬಳಗದ ಸಂಚಾಲಕ ಎಂ.ಎನ್.ವೆಂಕಟನಾಯಕ್, ಕವಿಗಳು ವಾಚಿಸಿದ ಕವನಗಳ ಕುರಿತು ಮಾತನಾಡಿದರು.
ಕಣಿವೆ ಕಟ್ಟೆ ಬಳಗದ ಪ್ರಧಾನ ಸಂಚಾಲಕ ಕೆ.ವಿ.ಉಮೇಶ್ ಹೆಬ್ಬಾಲೆ, ಕವಿ ಡಾ ಛಾಯ ವಿಜಯ್ ವೇದಿಕೆಯಲ್ಲಿ ಇದ್ದರು. :: ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಕವಿಗಳು :: ಲೀಲಾಕುಮಾರಿ ತೊಡಿಕಾನ, ಡಾ.ಛಾಯ ವಿಜಯ್, ಮಿಲನ ಕೆ. ಭರತ್, ವೈಲೇಶ್ ಕೊಡಗು,ಟಾಮಿ ಥಾಮಸ್, ನಾ.ಕನ್ನಡಿಗ, ಹೇಮಂತ್ ಪಾರೇರ, ಶರ್ಮಿಳಾ ರಮೇಶ್, ಎನ್.ಕೆ.ಮಾಲಾದೇವಿ, ಸುಕುಮಾರ್ ತೊರೆನೂರು, ಕೆ.ಆರ್.ವಿನಯ ರಾಜಶೇಖರ್, ವಿಜಯಶ್ರೀ ಅನಿಲ್ ಕೆದಿಲಾಯ, ಸುಶೀಲಾ ಹಾನಗಲ್, ಆಶಾ ಪುಟ್ಟರಾಜು, ಎಂ.ಎ.ರುಬೀನಾ, ಕೆ.ಕೆ.ಗಾಯತ್ರಿ, ಪವಿತ್ರ ಹೆತ್ತೂರು, ಕವಿತಾ ಪುಟ್ಟೇಗೌಡ, ಎ.ಕೆ.ಅನಂತ, ಎಲ್.ಎಂ.ಪ್ರೇಮ, ರಾಣಿ ರವೀಂದ್ರ, ದೀಪಿಕಾ ಸುದರ್ಶನ, ಕೆ.ವಿ.ಅಮೃತ, ಎಂ. ಪವಿತ್ರ, ಮಹೇಶ್ ತಿಮ್ಮಯ್ಯ, ವಸಂತಿ ರವೀಂದ್ರ, ಮಂಜುನಾಥ್ ಎಚ್.ಚಿರಕನಹಳ್ಳಿ, ವಿದ್ಯಾರ್ಥಿನಿ ಪೂರ್ಣಶ್ರೀ ಪಾರೇರ ಅವರು ತಮ್ಮ ಕವನಗಳನ್ನು ವಾಚಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ನಿತ್ಯಶ್ರೀ ಪಾರೇರ ಮತ್ತು ತಂಡದವರು ಗೀತೆ ಹಾಡಿದರು. ಸಾಹಿತ್ಯಾಸಕ್ತರಾದ ಸೂದನ ರತ್ನಾವತಿ, ಭಾನುಪ್ರಕಾಶ್, ಉದಯಪ್ರಕಾಶ್ , ಸುಶೀಲಾ, ಯು.ಆರ್.ಲೋಕೇಶ್, ಯತಿನ್, ಹರ್ಷ ಮತ್ತಿತರರು ಇದ್ದರು. ಗ್ರಾಮಸ್ಥರು ಬಂದ ಕವಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಹಳ್ಳಿಯ ಸೊಗಡಿನ ಭೋಜನ ಉಣ ಬಡಿಸಿ ಆತಿಥ್ಯ ನೀಡಿದ್ದು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿತ್ತು.










