

ಮಡಿಕೇರಿ ಡಿ.31 NEWS DESK : ಕೃಷಿ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮವು ಜ.13 ರಂದು ಬೆಳಗ್ಗೆ 7 ಗಂಟೆಗೆ ಉದ್ಘಾಟನೆಯಾಗಲಿದೆ. ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನವರೆಗೆ ಆಯೋಜಿಸಲಾಗಿದೆ. “ಸಿರಿಧಾನ್ಯ” ಮತ್ತು “ಮರೆತು ಹೋದ ಖಾದ್ಯಗಳ (ಲ್ಯಾಂಡ್ ರೇಸಸ್ ಪ್ರೋಡಕ್ಟ್ಸ್ ಪಾಕ ಸ್ಪರ್ಧೆಯು ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಜ.9 ರ ಸಂಜೆ 5 ಗಂಟೆಯೊಳಗೆ ಖುದ್ದಾಗಿ ಸಂಬಂಧಪಟ್ಟ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕೆಲವು ಸೂಚನೆಗಳನ್ನು ಪಾಲಿಸುವುದು. ಸಿರಿಧಾನ್ಯ ಖಾದ್ಯಗಳು: ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಮತ್ತು ಖಾರ ಖಾದ್ಯಗಳನ್ನು ತಯಾರಿಸಲು ಅವಕಾಶವಿರುತ್ತದೆ. “ಮರೆತು ಹೋದ ಖಾದ್ಯಗಳು(ಲ್ಯಾಂಡ್ ರೇಸಸ್ ಪ್ರೋಡಕ್ಟ್) ದೇಸಿ ತಳಿಗಳ ಪೌಷ್ಠಿಕಾಂಶದ ಮೌಲ್ಯ, ಬಳಕೆಯಾಗದ ಬೆಳೆಗಳು, ಮರೆತುಹೋದ ಆಹಾರಗಳು, ರೈತರ ಸಾಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳು ಎಂದು ಕರೆಯಲ್ಪಡುವ ದೇಸಿ ತಳಿಗಳು, ಸ್ಥಳೀಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಅಭಿವೃದ್ಧಿ/ ನಿರ್ವಹಿಸಲ್ಪಡುವ ವಿಶಿಷ್ಟ ಗುಣಲಕ್ಷಣಗಳು, ಪೆÇೀಶಕಾಂಶಗಳಲ್ಲಿ ಸಮೃದ್ಧ ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ಕೆಲವೇ ರೈತರು ಬೆಳೆಯುವ ದೇಸಿ ತಳಿಗಳಿಂದ ತಯಾರಿಸುವ ಖಾದ್ಯಗಳು. ಮರೆತು ಹೋದ ಖಾದ್ಯಗಳಡಿ ಸಿರಿಧಾನ್ಯಗಳನ್ನು ಹೊರತುಪಡಿಸಿ ಇತರೆ ದೇಸಿ ತಳಿಗಳಡಿ ಬರುವ ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳ, ತರಕಾರಿ ಮತ್ತು ಹಣ್ಣುಗಳ ಇತ್ಯಾದಿ ಖಾದ್ಯಗಳನ್ನು ತಯಾರಿಸುವುದು. ಸ್ಪರ್ಧಿಗಳು ಖಾದ್ಯಗಳನ್ನು ಮುಂಚಿತವಾಗಿಯೇ ತಯಾರಿಸಿಕೊಂಡು ಪ್ರದರ್ಶನಕ್ಕೆ ತರುವುದು. ತಯಾರಿಸಿದ ತಿನಿಸುಗಳ ರುಚಿ, ಪ್ರದರ್ಶನ, ಬಳಸಿದ ಸಾಮಾಗ್ರಿಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು. ತೀರ್ಪುದಾರರ ನಿರ್ಧಾರವೇ ಅಂತಿಮವಾಗಿದೆ. ಜಿಲ್ಲಾಮಟ್ಟಕ್ಕೆ ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನವಾಗಿ ರೂ. 5 ಸಾವಿರ, ದ್ವಿತೀಯ ಬಹುಮಾನವಾಗಿ ರೂ. 3 ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ. 2 ಸಾವಿರಗಳನ್ನು ನೀಡಲಾಗುವುದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ. (ವಿದ್ಯಾರ್ಥಿಗಳು/ಕೃಷಿ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ). ಹೆಚ್ಚಿನ ಮಾಹಿತಿಗೆ ಹಾಗೂ ಪಾಕ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಆಯಾಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ವಿರಾಜಪೇಟೆ 9483656643, ಸೋಮವಾರಪೇಟೆ 9108758654, ಮಡಿಕೇರಿ 9731693484 ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಉಪ ಯೋಜನಾ ನಿರ್ದೇಶಕರು ಇವರ ಮೊಬೈಲ್ ಸಂಖ್ಯೆ 9482371016 ನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ ಅವರು ತಿಳಿಸಿದ್ದಾರೆ.









