
ಮಡಿಕೇರಿ ಜ.2 NEWS DESK : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿ. ಬೆಂಗಳೂರು ಹಾಗೂ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯನ್ನು ಆಚರಿಸಲಾಯಿತು. ಕೊಡವ ಸಮಾಜ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷರು ಹಾಗೂ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಕಾರ್ಯಾಧ್ಯಕ್ಷರಾದ ಕೇಕಡ ಎ.ದೇವಯ್ಯ ಉದ್ಘಾಟಿಸಿ ಮಾತನಾಡಿ, ಸದಸ್ಯರು ಸಂಘದೊಂದಿಗೆ ನಿರಂತರ ವ್ಯವಹರಿಸಿ ಸಂಘದ ಏಳಿಗೆಗೆ ಸಹಕರಿಸುವಂತೆ ತಿಳಿಸಿದರು. ಸಂಘದ ಬೆಳವಣಿಗೆಗೆ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸೇವೆ ಮುಖ್ಯ ಪಾತ್ರವಹಿಸಲಿದೆ ಎಂದರು. ಜಮ್ಮಾಜಾಗ ಸಮಸ್ಯೆ ಬಗ್ಗೆ ಕೊಡಗಿನ ಇಬ್ಬರು ಶಾಸಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡುವಂಡ ಪಿ.ಮುತ್ತಪ್ಪ, 2005ರಲ್ಲಿ ಮಾಜಿ ಕಾನೂನು ಸಚಿವ ಹಾಗೂ ಹಿರಿಯ ಸಹಕಾರಿಗಳಾದ ಎಂ.ಸಿ.ನಾಣಯ್ಯ ಅವರ ಸಲಹೆ ಮೇರೆಗೆ ಮಡಿಕೇರಿ ಕೊಡವ ಸಮಾಜದ ಕಟ್ಟಡದಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ 1 ಕೋಟಿ 10 ಲಕ್ಷ ಪಾಲು ಹಣ ಹೊಂದಿದ್ದು, 8 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದರು. ಈ ಸಂಸ್ಥೆಯಲ್ಲಿ ಯಾವುದೇ ರೀತಿಯ ಬಂಡವಾಳ ಶಾಹಿ ಹಾಗೂ ಸರಕಾರದ ಹಸ್ತಕ್ಷೇಪ ಇಲ್ಲ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡವ ಸಮಾಜದ ನಿರ್ದೇಶಕಿ ಹಾಗೂ ಜನರಲ್ ತಿಮ್ಮಯ್ಯ ಶಾಲೆಯ ಕರೆಸ್ಪಾಂಡೆಂಟ್ ಕನ್ನಂಡ ಕವಿತ ಬೊಳ್ಳಪ್ಪ ಮಾತನಾಡಿ, ಮಹಿಳೆಯರ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಈ ಸಂಘ ಸಹಕಾರಿಯಾಗಿದೆ. ಯುವ ಪೀಳಿಗೆ ಸಂಘದ ಸದಸ್ಯವನ್ನು ಪಡೆಯುವುದರ ಮೂಲಕ ಸಂಘದವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಂಘದ ಉಪಾಧ್ಯಕ್ಷರಾದ ಕುಡುವಂಡ ಬಿ.ಉತ್ತಪ್ಪ, ನಿರ್ದೇಶಕರುಗಳಾದ ಚೋವಂಡ ಡಿ.ಕಾಳಪ್ಪ, ಕೊಂಗಂಡ ಎ.ತಿಮ್ಮಯ್ಯ,ನಂದೇಟಿರ ಪಿ.ರಾಜಮಾದಪ್ಪ, ಕೇಕಡ.ಎಂ.ಸುಗುಣ, ಮೇದುರ ಪಿ.ಕಾವೇರಪ್ಪ, ಚೆರುಮಂದಂಡ ಪೊನ್ನಪ್ಪ, ಕಾಂಡೆರ ಯು.ಕುಟ್ಟಪ್ಪ, ಮುಖ್ಯಕಾರ್ಯನಿರ್ವಹಾಧಿಕಾರಿ ಪಿ.ಸಿ.ನೀಮಾ, ಸಿಬ್ಬಂದಿಗಳಾದ ಸಿ.ಪಿ.ಗೌತಮ್, ತಸ್ವಿನ್ ಎಂ.ಪಿ., ಮಡಿಕೇರಿ ಕೊಡವ ಸಮಾಜ, ಜನರಲ್ ತಿಮ್ಮಯ್ಯ ಶಾಲೆ, ಕೊಡವ ವಿದ್ಯಾನಿಧಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಚೆರುಮಂದಂಡ. ಜಿ.ಪೊನ್ನಪ್ಪ ಸಹಕಾರ ಧ್ವಜಾರೋಹಣ ಮಾಡಿ ಧ್ವಜವಂದನೆ ಸಲ್ಲಿಸಿದರು. ಬೊಪ್ಪಂಡ ಸರಳ ಕರುಂಬಯ್ಯ ಸಹಕಾರಿ ಗೀತೆಯನ್ನು ಹಾಡಿದರು. ನಿರ್ದೇಶಕಿ ಎಂ.ಜಿ.ಉಷಾ ಅಂಜಪರವಂಡ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಭೆಯಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಬಗ್ಗೆ ಚರ್ಚಿಸಲಾಯಿತು.









