
ಮಡಿಕೇರಿ ಜ.7 NEWS DESK : ಕೊಡಗಿನ ‘ಜಮ್ಮಾಬಾಣೆ’ ಸಮಸ್ಯೆಯನ್ನು ಬಗೆಹರಿಸಲು 2013ರಲ್ಲಿ ರಾಷ್ಟ್ರಪತಿಗಳ ಅಂಕಿತವಾಗಿ ಬಂದ ವಿಧೇಯಕ ಕಾನೂನಾಗಿ ಜಾರಿಗೆ ಬರುವ ಹಂತದಲ್ಲಿ ರಿಟ್ ಪಿಟೀಷನ್ ಸಲ್ಲಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 2024 ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಜಮ್ಮಾಬಾಣೆ ಸಮಸ್ಯೆಗೆ ಪರಿಹಾರ ದೊರಕಿದೆ. ಹೀಗಿದ್ದೂ ರಾಜ್ಯದ ಕಾಂಗ್ರೆಸ್ ಸರಕಾರ ಇದನ್ನು ಜಾರಿಗೆ ತರಲು ಯಾಕೆ ಮುಂದಾಗಲಿಲ್ಲವೆಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮಾಬಾಣೆ ಸಮಸ್ಯೆಯ ಪರಿಹಾರಕ್ಕೆ ಬಿಜೆಪಿ ಸರಕಾರದ ಅವಧಿಯಲ್ಲಿ ಏನನ್ನೂ ಮಾಡಿಲ್ಲ. ಇದೀಗ ನಾವೇ ಎಲ್ಲವನ್ನೂ ಮಾಡುತ್ತಿರುವುದಾಗಿ ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯ ಉಚ್ಚ ನ್ಯಾಯಾಲಯ ತನ್ನ ಆದೇಶದ ಪಾಲನೆಗೆ ಒಂದು ತಿಂಗಳ ಅವಧಿಯನ್ನು ನೀಡಿತ್ತು. ಈ ಅವಧಿಯಲ್ಲಿ ಕಾಂಗ್ರೆಸ್ ಸರಕಾರ ಜಾರಿ ಮಾಡಿಲ್ಲವೆಂದು ಟೀಕಿಸಿದರು. ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಸೂಚಿಸಿರುವ ಕ್ರಮಗಳನನ್ನು ಅನುಷ್ಠಾನಕ್ಕೆ ತಂದರೆ ಜಮ್ಮಾಬಾಣೆ ಸಮಸ್ಯೆ ಇರುವುದಿಲ್ಲ. ಹೀಗಿದ್ದೂ ಸರಕಾರ ಕಂದಾಯ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತಂದಿದೆ. ಈ ವಿಧೇಯಕ ಕಾನೂನಾಗಿ ರೂಪುಗೊಳ್ಳುವ ಹಂತದಲ್ಲಿ ಯಾವೆಲ್ಲ ನೀತಿ ನಿಯಗಳನ್ನು ಅಳವಡಿಕೆ ಮಾಡಲಾಗುತ್ತದೆ ಎನ್ನುವುದನ್ನು ಗಮನಿಸಬೇಕಾಗಿದೆ ಎಂದು ಕೆ.ಜಿ.ಬೋಪಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಲ್ಲಿ ‘ಜಮ್ಮಾಬಾಣೆ’ಗೂ ಕಂದಾಯ ಕಾಯ್ದೆಗಳು ಅನ್ವಯವಾಗುತ್ತದೆ ಎಂದು ತಿಳಿಸಿರುವುದಲ್ಲದೆ, ಜಮ್ಮಾಬಾಣೆಯ ಮಾಲೀಕತ್ವವನ್ನು ಆಯಾ ಭೂ ಮಾಲೀಕರಿಗೆ ಒದಗಿಸಿದೆ. ಇದರೊಂದಿಗೆ ಕೊಡವ ಸಮುದಾಯಕ್ಕೆ ಸಂಬಂಧಿಸಿದ ಐನ್ಮನೆ, ಗುರುಕಾರೋಣ ಸ್ಥಳಗಳು ಜಾಗದ ಪಾಲು ಪಾರಿಕತ್ತಿನಲ್ಲಿ ಸಮಸ್ಯೆಯಾಗುತ್ತದೆ ಎನ್ನುವುದಾದರೆ, ಅವುಗಳನ್ನು ಹೊರತು ಪಡಿಸಿ ಜಾಗದ ಪಾಲು ಪಾರಿಕತ್ತಿಗೆ ಅವಕಾಶವನ್ನು ನೀಡಿದೆ. ಕೂಡು ಕುಟುಂಬ ಮತ್ತು ಪಟ್ಟೆದಾರಿಕೆ ಬೇಕೆನ್ನುವುದಾದರೆ ಅದನ್ನು ಉಳಿಸಿಕೊಳ್ಳವ ಅವಕಾಶವನ್ನು ನೀಡಿದೆ ಎಂದು ಸ್ಪ್ಪಷ್ಟಪಡಿಸಿದರು. ಇಲ್ಲಿಯವರೆಗೆ ನೋಂದಾಯಿತವಲ್ಲದ ಜಾಗದ ವಿಭಾಗ ಪತ್ರಗಳಿಗೂ ಕೂಡ ಅರ್ಜಿ ಸ್ವೀಕರಿಸಿ, ಮ್ಯುಟೇಷನ್ ನಡೆಯುತಿತ್ತು. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 2014ರ ಜನವರಿ 31 ರಂದು ಹೊರಡಿಸಿದ ಸುತ್ತೋಲೆಯಲ್ಲಿ ಮ್ಯುಟೇಷನ್ಗೆ ನೋಂದಣಿಯನನ್ನು ಕಡ್ಡಾಯ ಗೊಳಿಸಿ ಶುಲ್ಕ ವಿಧಿಸಿದೆ. ಇದು ಕೇವಲ ‘ಬಿಟ್ಟಿ’ ಭಾಗ್ಯಗಳಿಗೆ ಹಣ ಹೊಂದಿಸಿಕೊಳ್ಳಲು ರಾಜ್ಯ ಸರಕಾರ ಮಾಡುತ್ತಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಅವಧಿಯಲ್ಲೆ 2020ರಲ್ಲಿ ಜಿಲ್ಲೆಯ ತಾಲ್ಲೂಕುವಾರು ಕೆಲ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ‘ಪೌತಿ ಖಾತೆ’ ಆಂದೋಲನವನ್ನು ಆರಂಭಿಸಲಾಗಿತ್ತು. ಇದರಲ್ಲಿ ಕೆಲವೇ ಪ್ರಮುಖ ದಾಖಲೆಗಳೊಂದಿಗೆ ಜಾಗದ ದಾಖಲೆಗಳಲ್ಲಿ ಇದ್ದ ಮೃತಪಟ್ಟವರ ಹೆಸರನ್ನು ತೆಗೆಯುವ ಕಾರ್ಯ ನಡೆಯುತಿತ್ತು. ಇಂತಹ ಮಹತ್ವದ ಆಂದೋಲನವನ್ನು ಮುಂದುವರಿಸುವುದರ ಬದಲಾಗಿ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದ್ದೇಕೆಂದು ಪ್ರಶ್ನಿಸಿದ ಕೆ.ಜಿ.ಬೋಪಯ್ಯ, ಇದರಿಂದ ಜಿಲ್ಲೆಯಲ್ಲಿ ಜಾಗದ ಹಕ್ಕುದಾರಿಕೆಯ ಸಮಸ್ಯೆ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಮ್ಮಾಬಾಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯದ್ದು ಹೊಟ್ಟೆಕಿಚ್ಚಿನ ರಾಜಕೀಯ ಎನ್ನುವ ಟೀಕೆಗಳನ್ನು ಕಾಂಗ್ರೆಸ್ ಮಂದಿ ಮಾಡಿದ್ದಾರೆ. ಆದರೆ, ಕೊಡಗಿನ ಸಮಸ್ಯೆ ಬಗೆಹರಿಯಬೇಕೆನ್ನುವ ಕಾರಣದಿಂದ ಅಂದಿನ ದಿನಗಳಲ್ಲೆ ಪಕ್ಷಾತೀತವಾಗಿ ಕಾಂಗ್ರೆಸ್ ಮುಖಂಡರಾಗಿದ್ದ ಜೆ.ಎ.ಕರುಂಬಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿಕೊಂಡು ಹೋರಾಟ ನಡೆಸಿರುವುದಾಗಿ ಕೆ.ಜಿ.ಬೋಪಯ್ಯ ಹೇಳಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕದ ಸಂದರ್ಭ ಜಾಗದ ‘ಪಟ್ಟೆದಾರ’ರನ್ನು ಏಜೆಂಟರೆಂದು ಕರೆಯುವ ಮೂಲಕ ಕುಟುಂಬದ ಪ್ರಮುಖರಿಗೆ ಅಗೌರವವನ್ನು ತೋರಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸರಕಾರಿ ಮಾಜಿ ಅಭಿಯೋಜಕ ಕವೀಂದ್ರ ಮಾತನಾಡಿ, ಜಮ್ಮಾಬಾಣೆ ಸಮಸ್ಯೆ ಬಗೆಹರಿಕೆಗೆ ತಂದಿರುವ ವಿಧೇಯಕದಲ್ಲಿ ತಹಶೀಲ್ದಾರರ ಮೂಲಕ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ವಿಚಾರಗಳನ್ನು ತಿಳಿಸಿದೆ. ಆದರೆ ಇದರಲ್ಲಿ ಸ್ಪಷ್ಟತೆಯಿಲ್ಲ. ಪ್ರಮುಖವಾಗಿ ಸಮಸ್ಯೆ ಬಗೆಹರಿಕೆಗೆ ತಹಶೀಲ್ದಾರ್, ಗ್ರಾಮ ಅಭಿವೃದ್ಧಿ ಅಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪೂರ್ಣ ಹೊಣೆಗಾರಿಕೆಯನ್ನು ವಹಿಸುವುದು ಅತ್ಯವಶ್ಯ. ಇಲ್ಲವಾದಲ್ಲಿ ಭ್ರಷಾಚಾರ ಹೆಚ್ಚುವ ಆತಂಕವಿದೆ ಎಂದರು.









