
ಮಡಿಕೇರಿ NEWS DESK ಫೆ.4 : ಸತತ 9ನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ ಯುವಶಕ್ತಿಗೆ ಆದ್ಯತೆ, ನಾರಿಶಕ್ತಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ವೇಗವನ್ನು ಒದಗಿಸಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಯಾವುದೇ ತೆರಿಗೆ ಹೊರೆ ಹಾಕದೆ ಜನಸಾಮಾನ್ಯರ ಬದುಕಿಗೆ ಸಹಕಾರಿಯಾಗಬಲ್ಲ ಬಜೆಟ್ ನ್ನು ಮಂಡಿಸಲಾಗಿದೆ. ಭವಿಷ್ಯದ ಭಾರತಕ್ಕಾಗಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಪರಿಕಲ್ಪನೆಯಡಿ ಸರ್ವರ ಪ್ರಗತಿಯ ಅಂಶಗಳು ಇದರಲ್ಲಿ ಅಡಕವಾಗಿದೆ. ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ. ತೆರಿಗೆ ಪಾಲು ಹಂಚಿಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ರಕ್ಷಣೆಗೆ ದಾಖಲೆಯ ಅನುದಾನ ಮೀಸಲಿಡಲಾಗಿದೆ. ಕ್ಯಾನ್ಸರ್ ಔಷಧಿಗಳಿಗೆ ಸುಂಕ ವಿನಾಯಿತಿ ನೀಡಿರುವುದು ಜನಸಾಮಾನ್ಯರ ಮೇಲೆ ಕೇಂದ್ರ ಸರಕಾರಕ್ಕಿರುವ ಕಾಳಜಿಯನ್ನು ತೋರಿದೆ. ಏಳು ಹೈಸ್ಪೀಡ್ ರೈಲು ಕಾರಿಡಾರ್ ಗಳ ಘೋಷಣೆ ದೇಶದ ಪ್ರಗತಿಯ ಸಂಕೇತವಾಗಿದೆ. ತೆಂಗು ಮತ್ತು ಗೇರು ಬೆಳೆಗೆ ಉತ್ತೇಜನ ನೀಡಲಾಗಿದ್ದು, ಮಹಿಳಾ ಉದ್ಯಮ ಶೀಲತೆಯನ್ನು ಉತ್ತೇಜಿಸಲು ಜಾರಿಗೆ ತಂದಿರುವ ‘ಶಿ-ಮಾರ್ಟ್’ ಮಹಿಳೆಯರ ಆರ್ಥಿಕ ಪ್ರಗತಿಗೆ ದಿಕ್ಸೂಚಿಯಾಗಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರ ದೂರದೃಷ್ಟಿಯ ಬಜೆಟ್ ನ್ನು ಮಂಡಿಸಿದ್ದು, ವಿರೋಧ ಪಕ್ಷಗಳ ಟೀಕೆ ಅರ್ಥಹೀನ ಎಂದು ತೇಲಪಂಡ ಶಿವಕುಮಾರ್ ನಾಣಯ್ಯ ಹೇಳಿದ್ದಾರೆ.









