
ಮಡಿಕೇರಿ NEWS DESK ಜ.4 : ಕನ್ನಡಾಂಬೆಗೆ ಕನ್ನಡದ ಅಕ್ಷರಗಳ ಪುಷ್ಪಮಾಲೆಯನ್ನು ತೊಡಿಸಿ ಸಂಭ್ರಮಿಸುವ ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಐಗೂರಿನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಫೆ.9ರಂದು ಸಮ್ಮೇಳನ ಸಂಭ್ರಮದಿಂದ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎ.ಪಿ. ಕೇಶವ ಕಾಮತ್ ಅವರು ಮಾತನಾಡಿ, ಐಗೂರಿನಲ್ಲಿ ಆಯೋಜಿತವಾಗಿರುವ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ತನ್ನನ್ನು ಒಳಗೊಂಡಂತೆ ಗೌರವಾಧ್ಯಕ್ಷರಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಡಿ.ವಿಜೇತ್ ಅವರ ನೇತೃತ್ವದಲ್ಲಿ ವಿವಿಧ ಹನ್ನೊಂದು ಉಪಸಮಿತಿಗಳನ್ನು ರಚಿಸಿಕೊಂಡು, ಕನ್ನಡದ ನುಡಿ ಹಬ್ಬವನ್ನು ಯಶಸ್ವಿಗೊಳಿಸಲು ಗ್ರಾಮಸ್ಥರ ಸಹಕಾರದೊಂದಿಗೆ ಶ್ರಮಿಸಲಾಗುತ್ತಿದೆಯೆಂದು ತಿಳಿಸಿದರು. ಜಲಜಾ ಶೇಖರ್ ಸಭಾಧ್ಯಕ್ಷತೆಯಲ್ಲಿ ಸಮ್ಮೇಳನ – ಸಾಹಿತಿ ಜಲಜಾ ಶೇಖರ್ ಅವರ ಸರ್ವಾಧ್ಯಕ್ಷತೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಫೆ.9 ರಂದು ಬೆಳಗ್ಗೆ 8.50 ಕ್ಕೆ ಐಗೂರು ಕಬ್ಬಿಣ ಸೇತುವೆ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನು ಒಳಗೊಂಡಂತೆ ಜನಾಕರ್ಷಕವಾಗಿ ನಡೆಯಲಿದೆಯೆಂದು ತಿಳಿಸಿದರು. ಗಣ್ಯರ ಹೆಸರಿನ 11 ದ್ವಾರಗಳು- ಸಮ್ಮೇಳನದ ಹಿನ್ನೆಲೆ ಐಗೂರಿನಲ್ಲಿ ದಿ.ಕೆ.ಟಿ.ಪೂವಯ್ಯ, ದಿ.ಗುಂಡುಕುಟ್ಟಿ ಮಂಜನಾಥಯ್ಯ, ದಿ.ಮಲಚೀರ ಪಟೇಲ್ ಸೋಮಯ್ಯ, ಮಲ್ಲಪ್ಪ, ಲಿಂಗಪ್ಪ, ಬೆಳ್ಳಿಯಪ್ಪ, ಚಂಗಪ್ಪ, ಸುರೇಶ್ ಎಂ.ಬಿ., ದೇವರಾಜ್ ಎಂ.ಬಿ., ಎಂ.ಎಲ್.ಅಪ್ಪಚ್ಚು ಮತ್ತು ಎಂ.ಎಲ್. ಕೃಪಾಲ್ ಜ್ಞಾಪಕಾರ್ಥ, ಸಂಪಿಗೆಕೊಲ್ಲಿ ದಿ.ಡಿ.ಎಸ್. ದೇವಯ್ಯ ಮತ್ತು ದಿ.ಪೂವಮ್ಮ ದಂಪತಿಗಳ ಜ್ಞಾಪಕಾರ್ಥ, ಮೂಲೆಮಜಲು ದಿ.ಸೋಮಣ್ಣ ತಂಗಮ್ಮ, ದಿ.ನಂಗಾರು ಬೋಪಯ್ಯ ಸೀತಮ್ಮ ದಂಪತಿಗಳು ಹಾಗೂ ದಿ.ನಂಗಾರು ಗೋಪಾಲ ಮಾಸ್ಟರ್, ಚಿಣ್ಣಪ್ಪರವರ ಜ್ಞಾಪಕಾರ್ಥ, ದಿ.ಮಕ್ಕಾಟಿರ ಮಾದಪ್ಪ ಹಾಗೂ ದಿ.ಮಚ್ಚಂಡ ನಾಚಪ್ಪನವರ ಜ್ಞಾಪಕಾರ್ಥ, ದಿ.ಕಾಳೇರಮ್ಮನ ಅಯ್ಯಣ್ಣ, ನಾಣಯ್ಯ, ಗೋಪಾಲ ಮತ್ತು ಪಾಲಾಕ್ಷರವರ ಜ್ಞಾಪಕಾಥÀð, ದಿ.ಸಿ.ಕೆ.ಕಾಳಪ್ಪ, ದಿ.ಮಣವಟ್ಟಿರ ಅಪ್ಪಯ್ಯ, ಅಕ್ಕವ್ವ ದಂಪತಿಗಳು, ಅಯ್ಯಣ್ಣ ಮಂದಣ್ಣ ಬೆಳ್ಳಿಯಪ್ಪನವರ ಜ್ಞಾಪಕಾರ್ಥ, ದಿ.ಎ.ಎಂ.ಬೆಳ್ಳಿಯಪ್ಪ, ದಿ.ಎ.ಕೆ.ಸುಬ್ಬಯ್ಯ ಮತ್ತು ದಿ.ಈಶ್ವರಿ ಮೇದಪ್ಪನವರ ಜ್ಞಾಪಕಾರ್ಥ ನೆನಪಿನ ದ್ವಾರಗಳನ್ನು ನಿರ್ಮಿಸಲಾಗಿದ್ದು, ಇದನ್ನು ಮೆರವಣಿಗೆಗೂ ಮುನ್ನ ಉದ್ಘಾಟಿಸಲಾಗುತ್ತದೆಂದು ತಿಳಿಸಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, ಸಮ್ಮೇಳದಲ್ಲಿ ದಿ.ಶ್ರೀಮತಿ ಸಾಕಮ್ಮನವರ ನೆನಪಿನ ಮಹಾದ್ವಾರ, ದಿ.ದಳವಾಯಿ ಹನುಮರಾಜೇ ಅರಸ್ ನೆನಪಿನ ಸಭಾಂಗಣ ಮತ್ತು ದಿ.ಶ್ರೀಮತಿ ಕೊಡಗಿನ ಗೌರಮ್ಮ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. ಸಮ್ಮೇಳನದ ಕಾರ್ಯಕ್ರಮಗಳು ಇದರಲ್ಲಿ ನಡೆಯಲಿರುವುದಾಗಿ ತಿಳಿಸಿದರು. ಸಮ್ಮೇಳನ ಉದ್ಘಾಟನೆ- ಸಮ್ಮೇಳನದ ಉದ್ಘಾಟನೆಯನ್ನು ಬೆಳಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭ “ಐಗೂರ ಐಸಿರಿ” ಎನ್ನುವ ಸ್ಮರಣ ಸಂಚಿಕೆ ಸೇರಿದಂತೆ ವಿವಿಧ ಸಾಹಿತಿಗಳು ರಚಿಸಿರುವ ಆರು ಕೃತಿಗಳನ್ನು ಅನಾವರಣಗೊಳಿಸಲಾಗುತ್ತದೆ ಎಂದರು . ಗೀತ ಗಾಯನ-ವಿಚಾರಗೋಷ್ಠಿ- ಸಮ್ಮೇಳನದಲ್ಲಿ ಗೀತ ಗಾಯನ ಕಾರ್ಯಕ್ರಮದೊಂದಿಗೆ,ಗ್ರಾಮೀಣ ಜನರ ಜಾನಪದ ಹಿನ್ನೆಲೆಯ ಸುಗ್ಗಿ ಹಬ್ಬಗಳು ವಿಷಯದ ಕುರಿತಂತೆ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಇದರೊಂದಿಗೆ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಸಂಜೆ 4.40 ಗಂಟೆಗೆ ಬಹಿರಂಗ ಅಧಿವೇಶನ, ಸಂಜೆ 5 ಗಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆಯೆಂದರು. ಸೋಮವಾರಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಡಿ.ವಿಜೇತ ಅವರು ಮಾತನಾಡಿ, ಕಳೆದ ಎರಡು ತಿಂಗಳಿನಿಂದ ವಿವಿಧ ಉಪಸಮಿತಿಗಳು ಹಾಗೂ ಗ್ರಾಮಸ್ಥರೊಂದಿಗೆ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಿ, ತಾಲ್ಲೂಕು ಕನ್ನಡ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡಲು ಶ್ರಮಿಸಲಾಗಿದೆ. ಪ್ರತಿಯೊಬ್ಬ ಕನ್ನಡಾಭಿಮಾನಿಗಳು ಕನ್ನಡದ ತೇರನೆಳೆಯುವ ಕಾರ್ಯದಲ್ಲಿ ಕೈಜೋಡಿಸಿ ಸಮ್ಮೇಳನದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸೋಮವಾರಪೇಟೆ ತಾಲ್ಲೂಕು ಕಸಾಪದ ಐಗೂರು ಹೋಬಳಿ ಘಟಕದ ಅಧ್ಯಕ್ಷರಾದ ನಂಗಾರು ಕೀರ್ತಿ ಪ್ರಸಾದ್ ಹಾಗೂ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಎ.ಪಿ.ವೀರರಾಜು ಉಪಸ್ಥಿತರಿದ್ದರು.









