
ಮಡಿಕೇರಿ NEWS DESK ಮಾ.4 : ಪ್ರಕೃತಿಯ ನಡುವಿನ ಚಾರಣ ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಡಿಕೇರಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋಡಂಬೂರು ಮೂರ್ನಾಡು ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯ ಸಹಕಾರದೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಡಿಕೇರಿ ಸ್ಥಳೀಯ ಸಂಸ್ಥೆಯ ವತಿಯಿಂದ ಇತ್ತೀಚೆಗೆ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ ನಡೆದ ಚಾರಣದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚಾರಣವು ಹಸಿರ ಪ್ರಕೃತಿ ಸೌಂದರ್ಯವನ್ನು ಸವಿಯಲು ಉತ್ತಮ ಅವಕಾಶವಾಗಿದೆ. ಅಲ್ಲದೆ ಮಾನಸಿಕ ಶಾಮತಿ ಮತ್ತು ದೈಹಿಕ ಸದೃಢತೆ ಹೆಚ್ಚಾಗುತ್ತದೆ. ಬೆಟ್ಟಗುಡ್ಡಗಳ ಮತ್ತು ಕಾಡುಗಳ ನಡುವಿನ ಪಯಣ ಹೊಸ ಅನುಭವವನ್ನು ನೀಡುತ್ತದೆ. ದೈನಂದಿನ ಜೀವನದ ಒತ್ತಡದಿಂದ ಮುಕ್ತಿ ಪಡೆದು ಸಾಹಸಮಯ ಕ್ಷಣಗಳಿಗೆ ದೇಹವನ್ನು ಒಗ್ಗಿಸಿಕೊಳ್ಳಲು ಚಾರಣ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳ ಶಿಸ್ತುಬದ್ಧ ಬದುಕಿಗೆ ದಾರಿದೀಪವಾಗಿದೆ. ಶೈಕ್ಷಣಿಕ ಮತ್ತು ವೈಯುಕ್ತಿಕ ಬೆಳವಣಿಗೆಯೊಂದಿಗೆ, ಸರಕಾರಿ ಉದ್ಯೋಗಗಳ ನೇಮಕಾತಿ, ಸೇನೆಗೆ ಸೇರ್ಪಡೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪುರಸ್ಕಾರಗಳಿಗೆ ಚಾರಣದಂತಹ ಚಟುವಟಿಕೆಗಳು ಸಹಾಯವಾಗಲಿದೆ ಎಂದು ಈರಮಂಡ ಹರಿಣಿ ವಿಜಯ್ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಡಿಕೇರಿ ಸ್ಥಳೀಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್ ಮಾತನಾಡಿ ಚಾರಣದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಶಿಸ್ತುಬದ್ಧ ನಡವಳಿಕೆ ಶ್ಲಾಘನೀಯ. ಇದಕ್ಕೆ ಕಾರಣಕರ್ತರಾದ ಶಾಲಾ ಶಿಕ್ಷಕರು ಹಾಗೂ ಸ್ಕೌಟ್ಸ್, ಗೈಡ್ಸ್ ನ ಶಿಕ್ಷಕರು ಅಭಿನಂದನಾರ್ಹರು ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕರಾದ ಗುಲ್ಶನ್ ತೇಲಪಂಡ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾದರೂ ಅದನ್ನು ಎದುರಿಸುವ ಧೈರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನೀಡುತ್ತದೆ. ಸಂಸ್ಥೆಯ ಕಾರ್ಯಚಟುವಟಿಕೆಗಳ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪಾ ಪೊನ್ನಮ್ಮ ಅವರು ಮಾತನಾಡಿ ಶಿಸ್ತುಬದ್ಧ ಜೀವನವು ಯಶಸ್ಸು, ಆರೋಗ್ಯ ಮತ್ತು ನೆಮ್ಮದಿಗೆ ಮೂಲಾಧಾರವಾಗಿದೆ. ಇದು ಸಮಯ ಪಾಲನೆ, ಸ್ವಯಂ-ನಿಯoತ್ರಣ ಹಾಗೂ ಉತ್ತಮ ನಿಯಮಗಳ ಪಾಲನೆಯನ್ನು ಒಳಗೊಂಡಿದೆ. ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಸ್ಪಷ್ಟ ಗುರಿಗಳನ್ನು ಸಾಧಿಸಲು ವ್ಯಕ್ತಿಯನ್ನು ಸಬಲೀಕರಣಗೊಳಿಸುತ್ತದೆ. ವಿದ್ಯಾರ್ಥಿಗಳಿಂದ ಹಿಡಿದು ವೃತ್ತಿಪರರವರೆಗೆ ಪ್ರತಿಯೊಬ್ಬರಿಗೂ ಶಿಸ್ತಿನ ಜೀವನ ಅತ್ಯಗತ್ಯವಾಗಿದೆ. ದೈನಂದಿನ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದರು. *ಪ್ರಬಂಧ ಸ್ಪರ್ಧೆ* ಚಾರಣಕ್ಕೆ ಸಂಬoಧಿಸಿದoತೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಚಾರಣದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಿಮಾಲಯನ್ ವುಡ್ ಬ್ಯಾಡ್ಜ್ ಪಡೆದ ಗುಲ್ಶನ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕಿಯರು ಪ್ರಾರ್ಥಿಸಿದರು. ಗೈಡ್ಸ್ ವಿದ್ಯಾರ್ಥಿನಿ ಪೂರ್ವಿ ಸ್ವಾಗತಿಸಿ, ಹನ್ಸಿಕ ನಿರೂಪಿಸಿ, ಶಾಲಾ ವಿದ್ಯಾರ್ಥಿ ದಕ್ಷ ಪ್ರಿಯ ವಂದಿಸಿದರು. ಸ್ಕೌಟ್ಸ್ ವಿದ್ಯಾರ್ಥಿ ನಿತಿನ್ ಕೆ.ಆರ್ ಹಾಗೂ ಗೈಡ್ಸ್ ವಿದ್ಯಾರ್ಥಿನಿ ಶಿಲ್ಪಿತ ಚಾರಣದ ಕುರಿತು ಅಭಿಪ್ರಾಯ ಹಂಚಿಕೊoಡರು. ಸ್ಕೌಟ್ಸ್ ಮತ್ತು ಗೈಡ್ಸ್ ನ ಸಹ ಕಾರ್ಯದರ್ಶಿ ಸೂರಜ್ ತಿಮ್ಮಯ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.









